ವೃತ್ತಿ ಬದ್ಧತೆಯ ಜೈವಿಕತಂತ್ರಜ್ಞಾನಿ ಡಾ. ವಿ.ಕೃಷ್ಣ.
ವಹಿಸಿದ ಕೆಲಸವನ್ನು ಸಮರ್ಪಕವಾಗಿ ಪೂರೈಸಿದಾಗ ಸೇವೆ ತೃಪ್ತಿಕರ ಎನಿಸುತ್ತದೆ. ಪ್ರತಿಯೊಬ್ಬರು ಸೇವೆಯ ಮಹತ್ವವನ್ನು ತಿಳಿದುಕೊಂಡು ಕಾರ್ಯ ನಿರ್ವಹಿಸಬೇಕು’ .
ಮಾಡುವ ಕಾರ್ಯವು ಸಮಾಜಕ್ಕೆ ಮಾದರಿಯಾಗುತ್ತದೆ. ಅವರು ಸದಾ ಸ್ಮರಣೀಯರಾಗಿರುತ್ತಾರೆ.
ಜೀವನದ ಸ್ವಾರಸ್ಯವನ್ನು ಪೂರ್ಣವಾಗಿ ಅರಿಯದಿದ್ದರೆ ನಮ್ಮ ಬದುಕು ಗೋಳಾಟಾಗುತ್ತದೆ. ಜೀವನದ ಸವಿಯನ್ನು ಕಾಣುವ ಕಲೆಯನ್ನು ನಾವು ರೂಢಿಸಿಕೊಳ್ಳಬೇಕು. ಔಚಿತ್ಯಪೂರ್ಣವಾಗಿ ಜೀವಿಸದಿದ್ದರೆ ಬದುಕು ಸತ್ತಂತೆ. ಸತ್ತರು ಬದುಕಿರುವಂತೆ ಸೇವೆ ಮಾಡಿದಾಗ ಈ ಬದುಕು ಸಾರ್ಥಕವಾಗುತ್ತದೆ. ನಿರ್ದಿಷ್ಟವಾದ ಗುರಿಗಳ ಅನುಸರಣೆಯು ವೃತ್ತಿಯಾಗುತ್ತದೆ. ಅರ್ಥಪೂರ್ಣವೃತ್ತಿ ನಿರ್ವಣೆಗೆ ಜೀವನಕೌಶಲ್ಯಗಳು ಬಹುಮುಖ್ಯ. ವೃತ್ತಿ ನಿರತ ವ್ಯಕ್ತಿ ಸಮಾಜ, ಕುಟುಂಬ ಮತ್ತು ಸಹೋದ್ಯೋಗಿಗಳ ಜೊತೆಯಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದರೆ ಮಾತ್ರ ವೃತ್ತಿ ಜೀವನ ಯಶಸ್ವಿಯಾಗುವುದು. ಅಂತಹ ಯಶಸ್ವಿ ವೃತ್ತಿ ಜೀವನ ನಿರ್ವಹಿಸಿ, ನಿವೃತ್ತರಾಗುತ್ತಿರುವ ಡಾ.ವಿ.ಕೃಷ್ಣ ಅವರ ಕುವೆಂಪು ವಿಶ್ವವಿದ್ಯಾಲಯ ಸ್ನಾತಕೋತ್ತರ ಜೈವಿಕತಂತ್ರಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ, 2025ರ ಮೇ31ರಂದು ನಿವೃತ್ತರಾಗುತ್ತಿರುವರು. ಅವರ ವೃತ್ತಿ ಬದುಕು ಆದರ್ಶ ಮತ್ತು ಅನುಕರಣೀಯವಾದುದು.
ಮೂಲತಃ ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆ ಗ್ರಾಮದವರು.
ವೆಂಕಟರಂಗಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಮಗನಾಗಿ 1963ರ ಮೇ 20ರಂದು ಜನಿಸಿದವರು. ಜನಿಸಿ, ಒಂದೂವರೆ ವರ್ಷದಲ್ಲೇ ತಂದೆಯನ್ನು ಕಳೆದುಕೊಂಡ ಕೃಷ್ಣ ಅವರು, ತಾಯಿ, ಸೋದರ ಮಾವಂದಿರರು, ತಾತ ಸಿದ್ದಯ್ಯ, ಅಜ್ಜಿ ಪುಟ್ಟಮ್ಮ ಅವರ ಅಕ್ಕರೆಯ ಮಗುವಾಗಿ ಬೆಳೆದವರು. ರೇಷ್ಮೆ ಗೂಡಿನ ಕಾಯಕದಲ್ಲಿ ನಿರತರಾಗಿದ್ದ ತಮ್ಮ ಮನೆ ಯವರ ಜೊತೆಗೂಡಿ ಕೂಲಿಕೆಲಸ ಕೂಡ ಮಾಡಿದವರು. ಮಗನ ಬೆಳೆಸುವುದರಲ್ಲಿಯೇ ತನ್ನ ನೋವನ್ನೆಲ್ಲ ಮರೆತ ಲಕ್ಷ್ಮಮ್ಮ ಅವರು ಕೃಷ್ಣ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದವರು. ತೊಂಬತ್ತರ ವಯೋಮಾನದಲ್ಲೂ ಕೂಡ ಮಗನಿಗೆ ಪ್ರೀತಿಯಿಂದ ಅಡುಗೆ ಮಾಡಿ, ತುತ್ತು ಉಣಿಸುವರು. ತಾಯಿಯನ್ನು ದೇವರೆಂದು ಗೌರವಿಸುವ ಮಗ, ಮಗನೇ ನನ್ನ ಎಲ್ಲ ಸರ್ವಸ್ವವೆನ್ನುವ ತಾಯಿಯ ಮಮತೆ ಅನನ್ಯವಾದುದು.
ಕೃಷ್ಣ ಅವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿದರು. ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸಿಂಗನಲ್ಲೂರಿನಲ್ಲಿ ಪಡೆದರು. ಕೊಳ್ಳೆಗಾಲದಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು. ಸ್ನಾತಕೋತ್ತರ ಮತ್ತು ಪಿಎಚ್.ಡಿ..ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದವರು. ಗುರುಗಳಿಗೆ ಬಂಧುಗಳಿಗೆ ಅಚ್ಚುಮೆಚ್ಚಿನವರಾಗಿದ್ದವರು. ಮಾವಂದಿರರ ಅನುಪಮ ಪ್ರೀತಿಗೆ ಪಾತ್ರರಾದವರು.
ಸರ್ಕಾರಿ ಪ್ರೌಢಶಾಲಾ ಅಧ್ಯಾಪಕರಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮದಲ್ಲಿ ವೃತ್ತಿ ಜೀವನ ಆಭಿಸಿದವರು. ಯುಜಿಸಿ ಫೆಲೋ ಶಿಪ್ ಪಡೆದು, ಪ್ರೊ.ಶಾಂತಮ್ಮ ಅವರ. ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, ಪಿಎಚ್.ಡಿ.ಪದವಿ ಪಡೆದವರು.
1990ರಲ್ಲಿ ಚಿತ್ರದುರ್ದದಲ್ಲಿ ಎಸ್.ಜೆ.ಎಂ. ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನೇಮಕಗೊಂಡರು. 1996ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಸದಾ ಸಂಶೋಧನೆ, ಬೋಧನೆಯಲ್ಲಿ ನಿರತರಾಗಿದ್ದ ಕೃಷ್ಣ ಅವರು ಸಹೋದ್ಯೋಗಿಗಳ ಮತ್ತು ವಿದ್ಯಾರ್ಥಿಗಳ ಹೃನ್ಮನವನ್ನು ಗೆದ್ದವರು. ಜನಪದ ಹಾಡುಗಾರರು ಆದ ಕೃಷ್ಣ ಅವರು ಮನತುಂಬಿ ಹೃದಯ ತುಂಬಿ ಪಾಠ ಮಾಡುವಲ್ಲಿ ಸಂತಸ ಸವಿದವರು. ಐವತ್ಮೂರು ಪಿಎಚ್.ಡಿ.ಸಂಶೋಧನಾರ್ಥಿಗಳಿಗೆ ಯಶಸ್ವಿ ಮಾರ್ಗದರ್ಶಕರಾಗಿರುವರು. ಔಷಧಿಸಸ್ಯಗಳ ಅಂಗಾಂಶಗಳ ಅಭಿವೃದ್ಧಿ ಕುರಿತು ಸಂಶೋಧನೆ ಮಾಡಿ, ಯಶಸ್ವಿಯಾದವರು. ದಾವಣಗೆರೆ ಜಿಲ್ಲೆಯ ಸಸ್ಯ ಪ್ರಬೇಧಗಳ ಕುರಿತು ಸಂಶೋಧನೆ ಮಾಡಿದವರು. ಸುಮಾರು ಆರು ಕೋಟಿ ಮೊತ್ತದ ಒಂಬತ್ತು ಪ್ರಧಾನ ಸಂಶೋಧನಾ ಯೋಜನೆಗಳನ್ನು ಕೈಗೊಂಡು ಯಶಸ್ವಿಯಾದವರು. ಹಸನ್ಮುಖಿ ಕೃಷ್ಣ ಅವರು ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ವಿಜ್ಞಾನ ನಿಕಾಯದ ಡೀನರಾಗಿ, ಸಿ.ಡಿ.ಸಿ., ಐ.ಕ್ಯು.ಎ.ಸಿ.ನಿರ್ದೇಶಕರಾಗಿ, ವಿಭಾಗದ ಮುಖ್ಯಸ್ಥರಾಗಿ,ಬಿ.ಒ.ಎಸ್. , ಬಿ.ಒ.ಇ.ಅಧ್ಯಕ್ಷರಾಗಿ, ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಸಲ್ಲಿಸಿರುವ ಸೇವೆಯು ಅನನ್ಯವಾದುದು.
ರಾಷ್ಟ್ರದ ವಿವಿಧ ವಿಶ್ವವಿದ್ಯಾಲಯಗಳ ವಿವಿಧ ಸಮಿತಿಗಳ ಸದಸ್ಯರಾಗಿ ಅನುಪಮ ಸೇವೆಯನ್ನು ಸಲ್ಲಿಸಿರುವರು. ಅಂತರ್ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದವರು. ಉತ್ತಮ ಸಂಘಟಕರು.
ನಾಲ್ಕು ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿರುವ ಕೃಷ್ಣ ಅವರ ಮುನ್ನೂರಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಅಂತರ್ ರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇಂಗ್ಲೇಂಡಿನ ಪ್ಯಾಲೇಸ್ ಅವಾರ್ಡ್, ಇಂಡಿಯನ್ ಡ್ರಗ್ ಮ್ಯನಪ್ಯಕ್ಚರ್ ಅವಾರ್ಡ್, ಬೆಸ್ಟ್ ರಿಸರ್ಚ್ ಪೇಪರ್ ಅವಾರ್ಡ್ ಮೊದಲಾದ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿರುವ ಡಾ.ಕೃಷ್ಣ ಅವರು ಅಂಬೇಡ್ಕರ್ ಅವರ ಬರಹ ಮತ್ತು ವಿಚಾರಗಳಿಂದ ಪ್ರೇರಿತರಾಗಿ ಅಧ್ಯಯನ ಮೂಲಕವೇ ತಮಗಾದ ಅವಮಾನ ಅಗೌರವಗಳನ್ನು ಓದುವುದರ ಮೂಲಕ ರೋಷ-ದ್ವೇಷವನ್ನು ತೀರಿಸಿಕೊಂಡವರು. ಅಸಹಾಯಕರಿಗೆ ತಮ್ಮ ಆದ ಸಹಾಯವನ್ನು ಮಾಡುತ್ತಿರುವರು. ಅವರ ವಿವೇಚನೆ, ವಿವೇಕ, ವಿಚಾರಗಳು ಅಪ್ಯಾಯಮಾನವಾದವುಗಳು. ಸ್ನೇಹಜೀವಿ ಕೃಷ್ಣ ಅವರು ಸಮಸಮಾಜದ ನಿರ್ಮಾಣದ ಕನಸ್ಸುಗಾರರು.
ತಮ್ಮ ವಿದ್ಯಾರ್ಥಿಸಮೂಹಕ್ಕೆ ನೀತಿನಿಯತ್ತಿನ ಬದುಕಿನ ಸಾರವನ್ನು ಬೋಧಿಸಿದವರು. ಸಂಕಷ್ಟದ ಬದುಕಿನಲ್ಲಿ ಸಾಧನೆ ಮಾಡಿದವರು. ನೋಂದಬೆಂದವರ ಬಗ್ಗೆ ಅಪಾರ ಕಾಳಜಿಯ ಕೃಷ್ಣ ಅವರು ಬಡತನದ ಬೆಗೆಯಲ್ಲೂ ಬೆರಗಾಗುವಂತೆ ಬೆಳೆದವರು. ಒಂಬತ್ತು ಸಾವಿರದ ನಾಲ್ಕುನೂರ ಇಪ್ಪತ್ಮೂರು ಸೈಟೇಶನ್ ಪಡೆದಿರುವ ಶ್ರೀಯುತರು ಮೂರು ಪೇಟೆಂಟ್ ಪಡೆದಿರುವ ಅಪೂರ್ವ ಪ್ರತಿಭಾವಂತರು.ಜಗತ್ತಿನ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಸ್ಮರಣೀಯವಾದ ಕೊಡುಗೆ ನೀಡಿರುವ ಕೃಷ್ಣ ಅವರ ಜೀವನ ಮತ್ತು ಸಾಧನೆಯು ಆದರ್ಶ ಮತ್ತು ಅನುಕಣೀಯವಾಗಲು ಅವರ ವೃತ್ತಿ ಭದ್ದತೆಯು ಕಾರಣವಾಗಿದೆ. ಸದಾ ಕ್ರಿಯಾಶೀಲರಾಗಿರುವ ಅವರ ಸಾಧನೆಯು ಯುವಸಮೂದಯಕ್ಕೆ ಮಾದರಿಯಾದುದು. ಇನ್ನೂ ನೂರ್ಮಡಿಯಾಗಿ ಸಾಧನೆ ಸಾಗಲಿ.
-ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್
ಪ್ರಾಧ್ಯಾಪಕರು ಮತ್ತು ನಿರ್ದೇಶಕರು, ಕನ್ನಡಭಾರತಿ.
ನಿರ್ದೇಶಕರು, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ. ಕುವೆಂಪು ವಿಶ್ವವಿದ್ಯಾಲಯ
ಜ್ಞಾನ ಸಹ್ಯಾದ್ರಿ, ಶಂಕರಘಟ್ಟ..
—–