ಇಂದು(ಮೇ 30) ವಿಧಿವಶವಾಗಿರುವ ಪ್ರಸಿದ್ಧ ಕವಿ ಡಾ. ಎಚ್ ಎಸ್ ವೆಂಕಟೇಶ್ ಮೂರ್ತಿ ಅವರು ಕಳೆದ ವರ್ಷ ಹೃದಯ ಚಿಕಿತ್ಸೆ ಯಶಸ್ವಿಯಾಗಿ ಮನೆಗೆ ಮರಳಿದಾಗ ಕವಿತೆಯೊಂದನ್ನು ಅಚಾನಕ್ಕಾಗಿ ರಚಿಸಿದ ಬಗ್ಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಸಂತೋಷದಿಂದ ಹಂಚಿಕೊಂಡಿದ್ದರು.
ಕರ್ನಾಟಕ ಕಹಳೆ ಡಾಟ್ ಕಾಮ್ ಅವರು ರಚಿಸಿದ ‘ಬೆಳಗಾದರೆ ಸಾಕು’
ಕವಿತೆ ಪ್ರಕಟಿಸುವ ಮೂಲಕ ಹಿರಿಯ ಕವಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದೆ🙏
(ಸಂಪಾದಕರು)
—–
ಇಂದು ಕವನವೊಂದು ಅಚಾನಕ್ಕಾಗಿ ತನ್ನಿಂತಾನೇನನ್ನೊಳಗಿಂದ ಮೂಡಿ ಬಂತು.
ರಿಪೇರಿಗೊಳಗಾದ ನಂತರವೂ ನನ್ನ ಹೃದಯ ಕಾವ್ಯವನ್ನೇ ಮಿಡಿಯುತ್ತಿದೆ .. ಯಾವುದನ್ನೂ ಅದು ಕಳೆದುಕೊಂಡಿಲ್ಲ ಎಂಬುದೇ ಸಮಾಧಾನದ ಸಂಗತಿ.. ನಿಮ್ಮೆಲ್ಲರ ಪ್ರೀತಿಯೇ ಇದಕ್ಕೆ ಕಾರಣ ಎಂಬುದನ್ನು ನಾನು ಪ್ರತ್ಯೇಕವಾಗಿ ಹೇಳಬೇಕಿಲ್ಲ .
ಕವನ : ಬೆಳಗಾದರೆ ಸಾಕು
ಬೆಳಗಾದರೆ ಸಾಕು | ಬಾಗಿಲ
ಬಡಿಯುವನುದಯರವಿ |
ಅಂಗಳದಲ್ಲಿ ಬಣ್ಣಬಣ್ಣ ನಗೆ
ಕಾಣಿಸುವುವು ನನಗೆ II
ಗಾಳಿ ಚಾಚುವುದು ಹೂವಿನ ಗೊಂಚಲ ಶುಭವಾಗಲಿ ಎನುತ |
ಚಿಟ್ಟೆ ಕುಣಿಯುವುದು ಹೂವಿನ ಸುತ್ತ | ಆರತಿ ಎತ್ತುತ್ತ II
ಇಂಥ ಬೆಳಗಿಗೆ ಇರುಳ ಭಯವಿಲ್ಲ
ಇದು ನಿತ್ಯದ ನೋಟ |
ಇಂಥ ನೋಟಕೆ ಇನ್ನೊಂದಿರುಳ
ಕಳೆಯುವೆ ನಸು ನಗುತ II
ರಾತ್ರಿಕಳೆದದ್ದು ಬೆಳಗು ಕಾಣುವುದು ಇದೇ ಬಾಳಸತ್ಯ |
ಮುಂಜಾವಿಗೆ ನಾನಿರುಳ ಕಳೆಯು
ವೆನು ಶತಮಾನಂಭವತಿ II
ಪ್ರೀತಿಯಿಂದ
ನಿಮ್ಮ ಎಚ್ಚೆಸ್ವಿ
(ಡಾ. ಎಚ್ ಎಸ್ ವೆಂಕಟೇಶ ಮೂರ್ತಿ)
—–