ಬಳ್ಳಾರಿ, ಜೂ. 29: ನಗರದಲ್ಲಿ ಇದೇ ಡಿಸೆಂಬರ್ ನಲ್ಲಿ ನಡೆಯುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಅವರು ಹೇಳಿದರು.
ನಗರದಲ್ಲಿ ಭಾನುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸದಸ್ಯರು ಭಾನುಮುಷ್ತಾಕ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು ಎಂದು ತಿಳಿಸಿದರು.
ಹಿರಿಯ ಸಾಹಿತಿಗಳಾದ ಮಾಲತಿ ಪಟ್ಟಣಶೆಟ್ಟಿ ಹಾಗೂ ವೀಣಾ ಶಾಂತೇಶ್ವರ ಅವರ ಹೆಸರುಗಳು ಚರ್ಚೆಗೆ ಬಂದವು ಎಂದರು.
ಪ್ರತಿಷ್ಠಿತ ‘ಬುಕರ್ ಅಂತರಾಷ್ಟ್ರೀಯ ಪ್ರಶಸ್ತಿ’ಯನ್ನು ಮೊಟ್ಟ ಮೊದಲನೇ ಬಾರಿಗೆ ಕನ್ನಡಕ್ಕೆ ತಂದು ‘ಕನ್ನಡದ ಬಾನಿನಲ್ಲಿ ಎದೆಯ ಹಣತೆಯ ಮೂಲಕ ದೀಪ ಬೆಳಗಿದವರು, ಕನ್ನಡದ ಪ್ರಸಿದ್ಧ ಸಾಹಿತಿ ಬಾನು ಮುಷ್ತಾಕ್ ಎಂದು ಶ್ಲಾಘಿಸಿದರು.
ಕನ್ನಡ ನಾಡು-ನುಡಿಯ ಹಿರಿಮೆಯನ್ನು ಗರಿಮೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದು ಕನ್ನಡ ಭಾಷೆಯ ಸಾಮರ್ಥ್ಯ, ಶಕ್ತಿಯನ್ನು ಹಾಗೂ ಮಹಿಮೆಯನ್ನು ಜಗತ್ತಿಗೆ ತೋರಿಸಿ ಕನ್ನಡಿಗರಲ್ಲಿ ಹೊಸ ಅಭಿಮಾನವನ್ನು ಮೂಡಿಸಿ ಪ್ರಶಸ್ತಿಗೆ ಹೊಸ ಅರ್ಥ ತಂದವರು ಬಾನು ಮುಷ್ತಾಕ್ ಅವರ ಆಯ್ಕೆ ತಮಗೆ ಸಂತಸ ತಂದಿದೆ.
ಸಮ್ಮೇಳನದ ಸರ್ವಾಧ್ಯಕ್ಷೆ ವಹಿಸಲು ಬಾನು ಮುಷ್ತಾಕ್ ಅವರು ಒಪ್ಪಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಡಾ. ಜೋಷಿ ಉತ್ತರಿಸಿದರು.
ವ್ಯಾಟ್ಸಪ್ ಮೂಲಕ ಆಯ್ಕೆಯನ್ನು ಬಾನು ಮುಸ್ತಾಕ್ ಅವರು ಸಂತೋಷದಿಂದ ಒಪ್ಪಿ,ಕನ್ನಡದ ಕೆಲಸ ನನ್ನ ಮೊದಲ ಕರ್ತವ್ಯ ಎಂದು ಹೇಳಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಜಗತ್ತಿಗೆ ಗೊತ್ತಾಗುವಲ್ಲಿ ಪ್ರಧಾನ ಪಾತ್ರವಹಿಸಿದ ಅನುವಾದಕಿ ದೀಪಾ ಭಾಸ್ತಿ ಅವರನ್ನು ಸಮ್ಮೇಳನದಲ್ಲಿ ವಿಶೇಷವಾಗಿ ಗೌರವಿಸಲು ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ನಿರ್ಣಯಿಸಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕಸಾಪ ಬಳ್ಳಾರಿ ಜಿಲ್ಲಾಧ್ಯಕ್ಷ ನಿಷ್ಟಿರುದ್ರಪ್ಪ ಮತ್ತಿತರರು ಇದ್ದರು.
—–