ತುಮಕೂರು: ಪತ್ರಿಕೋದ್ಯಮ ಇಂದು ಕಾವಲು ದಾರಿಯಲ್ಲಿದ್ದು ನೈಜ ಮತ್ತು ವಸ್ತು ನಿಷ್ಠ ಸುದ್ದಿಗಳು ಕಣ್ಮರೆಯಾಗುತ್ತಿವೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಚೀ.ನಿ.ಪುರುಷೋತ್ತಮ್ ವಿಷಾಧಿಸಿದರು.
ಎಸ್.ಎಸ್.ಐ.ಟಿ ಕ್ಯಾಂಪಸ್ ನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ರೇಡಿಯೋ ಸಿದ್ದಾರ್ಥ 90.8 ಬಾನುಲಿ ಕೇಂದ್ರದಿಂದ ಮಂಗಳವಾರ ಆಯೋಜನೆ ಮಾಡಲಾಗಿದ್ದ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಮಾತನಾಡಿದರು. ಪ್ರಸ್ತುತ ತೇಜೋವದೆಯಂತಹ ಸುದ್ದಿಗಳು ಹೆಚ್ಚಾಗುತ್ತಿದ್ದು ಪತ್ರಕರ್ತರು ವಸ್ತುನಿಷ್ಠ ಮತ್ತು ಅನ್ವೇಷಣಾತ್ಮಕ ಸುದ್ದಿಗಳನ್ನು ನೀಡಬೇಕು ಎಂದು ತಿಳಿಸಿದರು. ಮಾಧ್ಯಮ ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ, ಜನರ ಒಗ್ಗೂಡುವಿಕೆ ಯುವ ಬರಹಗಾರರ ಬರಹಗಳು ಸಮ ಸಮಾಜದ ನಿರ್ಮಾಣ ಮತ್ತು ಬದಲಾವಣೆಗೆ ಕಾರಣವಾಗಿದ್ದು ಪತ್ರಕರ್ತರು ಸುದ್ದಿ ನೀಡುವ ಭರದಲ್ಲಿ ನ್ಯಾಯ ಸಮ್ಮತ ಮತ್ತು ಸತ್ಯಕ್ಕೆ ಹತ್ತಿರವಾದ ಸುದ್ದಿಗಳನ್ನು ನೀಡಬೇಕು ಇಂದು ಡಿಜಿಟಲ್ ಮಾಧ್ಯಮ ಸ್ಪರ್ಧೆ ಒಡ್ಡುವ ತವಕದಲ್ಲಿ ನೀಡುತ್ತಿರುವ ಅನಾಹುತದ ಸುದ್ದಿಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದು ಸೋಶಿಯಲ್ ಮೀಡಿಯಾಗಳು ಅವುಗಳ ನಿಲುವುಗಳನ್ನು ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ದಿನ.ಕಾಮ್ ತುಮಕೂರು ಜಿಲ್ಲಾ ವರದಿಗಾರ ಚಂದನ್ ಡಿ ಅವರು ಮಾತನಾಡಿ ಮಂಗಳೂರು ಸಮಾಚಾರ ಪತ್ರಿಕೆ ಪತ್ರಿಕಾ ದಿನಾಚರಣೆಗೆ ಪ್ರೇರಕ ಶಕ್ತಿಯಾಗಿದೆ. ಅಚ್ಚು ಮಳೆ ಜೋಡಿಸಿ ಪತ್ರಿಕೆ ಮುದ್ರಣ ಮಾಡುತ್ತಿದ್ದ ಕಾಲಘಟ್ಟದಿಂದ ಇಂದಿನ ಡಿಜಿಟಲ್ ಆನ್ ಲೈನ್ ಪತ್ರಿಕೆಗಳು ಹಲವು ಬದಲಾವಣೆಗಳನ್ನ ಕಂಡುಕೊಂಡಿವೆ ಎಂದು ಹೇಳಿದರು. ಪತ್ರಿಕೆಗಳು ತನ್ನ ಬರಹದಿಂದಾಗಿ ಜನರ ಗಮನ ಸೆಳೆದು ಸಮಾಜದಲ್ಲಿ ಉಳಿದುಕೊಂಡಿವೆ ಇಂದು ಡಿಜಿಟಲ್ ರೂಪದಲ್ಲಿ ಓದುವುದು ನೋಡುವುದು ಮತ್ತು ಕೇಳುವುದು ಜನರಿಗೆ ತುಂಬಾ ಹತ್ತಿರವಾದ ಸಮೂಹ ಮಾಧ್ಯಮ ವಾಗಿದ್ದು ಆದರೆ ಇಲ್ಲಿ ವಿಶ್ವಾಸ ಕಳೆದುಕೊಳ್ಳುವ ಅನೇಕ ಸುದ್ದಿಗಳನ್ನು ಗಮನಿಸ ಬಹುದಾಗಿದೆ ಎಂದರು. ಡಿಜಿಟಲ್ ಮೀಡಿಯಾದಲ್ಲಿ ವಿಶ್ವಾಸ ಗಟ್ಟಿಗೊಳಿಸುವ ಅನೇಕ ಬದಲಾವಣೆಗಳು ಬರಬೇಕಾಗಿದೆ ನಾಗರಿಕ ಪತ್ರಿಕೋದ್ಯಮ ಇಂದು ನವ ಮಾಧ್ಯಮಕ್ಕೆ ದಾಪುಗಾಲು ಇಡುತ್ತಿದ್ದು ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ಈ ಡಿಜಿಟಲ್ ಮಾಧ್ಯಮ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದು ತಿಳಿಸಿದರು.
ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ ಟಿ ಮುದ್ದೇಶ್ ಅವರು ಮಾತನಾಡಿ, ಪತ್ರಿಕಾ ದಿನಾಚರಣೆಯ ಅಂಗವಾಗಿ ನಮ್ಮ ಕೇಂದ್ರದ ವಿದ್ಯಾರ್ಥಿಗಳು ರೇಡಿಯೋ ಸಿದ್ದಾರ್ಥದಲ್ಲಿ ಅನೇಕ ಹಿರಿಯ ಪತ್ರಕರ್ತರುಗಳೊಡನೆ ಚರ್ಚೆ ಸಂವಾದ ನಡೆಸಿ ಅವರ ಅನುಭವದ ಸಾರವನ್ನು ಕೇಳಿದ್ದಾರೆ. ಬದಲಾವಣೆ ಕಾಲಘಟ್ಟದಲ್ಲಿರುವ ನವ ಪತ್ರಿಕೋದ್ಯಮಕ್ಕೆ ದಾಪುಗಾಲಿಡುವ ನಮ್ಮ ವಿದ್ಯಾರ್ಥಿಗಳನ್ನು ಸುಸಜ್ಜಿತವಾಗಿ ತಯಾರು ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಧ್ಯಮ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರುಗಳಾದ ಶ್ವೇತಾ ಎಂ.ಪಿ., ನವೀನ್, ರವಿಕುಮಾರ್ ಸಿ ಹೆಚ್, ಗೌತಮ್, ಶಿವಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
*****