ತಾಳೂರಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ: ಯುವ ಸಮೂಹ ಸ್ವಾಮಿ‌ ವಿವೇಕಾನಂದರ ಆದರ್ಶ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು -ಸಿ.ಮಂಜುನಾಥ

ಸಿರುಗುಪ್ಪ, ಜ.13: ವಿದ್ಯಾರ್ಥಿ, ಯುವ ಸಮೂಹ ಸ್ವಾಮಿ‌ ವಿವೇಕಾನಂದರ ಆದರ್ಶ ಚಿಂತನೆ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ರೂಪಿಸಿ ಕೊಳ್ಳಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರು ತಿಳಿಸಿದರು.
ತಾಲೂಕಿನ ತಾಳೂರು ಸರಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 163 ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಬಾಲ್ಯದಲ್ಲಿಯೇ ವಿವೇಕಾನಂದರು ಏಕಾಗ್ರತೆ, ಅಧ್ಯಯನ ಶೀಲತೆ, ಧೈರ್ಯ, ದೇಶಪ್ರೇಮವನ್ನು ರೂಢಿಸಿ ಕೊಂಡಿದ್ದರಿಂದ ಅದ್ಭುತ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
ಸೋಲಿಗೆ ಹೆದರಬೇಡಿ, ಪ್ರಯತ್ನವನ್ನು ಬಿಡಬೇಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅನಂತ ಶಕ್ತಿ ಅಡಗಿದೆ ಎಂಬ ಸ್ವಾಮಿ ವಿವೇಕಾನಂದರ ಸ್ಫೂರ್ತಿಯ ಮಾತುಗಳು ಸಾಮಾನ್ಯರು ಕೂಡಾ ಅಸಾಧ್ಯವನ್ನು ಸಾಧಿಸಲು ಪ್ರೇರಣೆಯಾಗುತ್ತವೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರ ಬರಹ ಮತ್ತು ಭಾಷಣಗಳಲ್ಲಿ ಯುವ ಸಮೂಹಕ್ಕೆ ಚೈತನ್ಯ ತುಂಬುವ ಶಕ್ತಿ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ‌ ಮುಖ್ಯೋಪಾಧ್ಯಾಯಿನಿ ಗೀತಾ ಸಾಗರ ಅವರು ಮಾತನಾಡಿ ಸ್ವಾಮಿ ವಿವೇಕಾನಂದರು ರಾಷ್ಟ್ರ ಪ್ರಜ್ಞೆ, ಗುರು ಭಕ್ತಿ, ಶಿಸ್ತು, ಸಂಸ್ಕಾರ ಸಂದೇಶ ನೀಡಿದ್ದಾರೆ.
ವಿದ್ಯಾರ್ಥಿಗಳು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಗುರಿ ಸಾಧಿಸಬೇಕು ಎಂದು‌ ಕಿವಿ‌ಮಾತು ಹೇಳಿದರು.


ರಾಷ್ಟ್ರೀಯ ಯುವ ದಿನಾಚರಣೆಗೆ ಸಾಧಕರನ್ನು ಶಾಲೆಗೆ ಆಹ್ವಾನಿಸಿ ಮಕ್ಕಳಿಗೆ ಪರಿಚಯಿಸಿ ಅವರಿಗೆ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ, ಬಹುಮುಖಿ ಸಿ.ಮಂಜುನಾಥ ಅವರು ಆಗಮಿಸಿ ವಿದ್ಯಾರ್ಥಿಗಳಲ್ಲಿ ಪ್ರೇರಣೆ, ಉತ್ಸಾಹ ತುಂಬಿದ್ದಾರೆ ಎಂದು ಶ್ಲಾಘಿಸಿದರು
ಸನ್ಮಾನ: ಇದೇ ಸಂದರ್ಭದಲ್ಲಿ ಸಿ.ಮಂಜುನಾಥ ಅವರನ್ನು ಮುಖ್ಯೋಪಾಧ್ಯಾಯಿನಿ ಗೀತಾ ಸಾಗರ ಮತ್ತು ಅಧ್ಯಾಪಕ ವೃಂದ
ಸನ್ಮಾನಿಸಿ ಗೌರವಿಸಿದರು.


ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಶಾಂತಮ್ಮ ಹೆಚ್, ಶ್ರೀಕಾಂತ್, ಲಕ್ಷ್ಮಿ ಬಿ.ಕೆ, ಎಂ. ನಾಗಿರೆಡ್ಡಿ, ಬಸವರಾಜ್, ಕರೀಂ ಸಾಬ್ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ಮಂಜುನಾಥ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ರಕ್ಷಿತಾ, ವೀಣಾ, ವಿದ್ಯಾಶ್ರೀ, ಮಹಾಲಕ್ಷ್ಮಿ ಮತ್ತು ಸಂಗೀತ ಪ್ರಾರ್ಥಿಸಿದರು. ಶಿಕ್ಷಕ ವಿ. ಶ್ರೀಕಾಂತ್ ವಂದಿಸಿದರು.
—–