ಅನುದಿನ ಕವನ-೧೮೪೯, ಕವಿ: ಸಿದ್ದು ಜನ್ನೂರ್, ಚಾಮರಾಜನಗರ, ಕವನದ ಶೀರ್ಷಿಕೆ:ಸವಿ ಎಂದು ಗೊಣಗಿಕೊಳ್ಳುತ್ತೇನೆ…

ಸವಿ ಎಂದು ಗೊಣಗಿಕೊಳ್ಳುತ್ತೇನೆ…

ಈ ದಾರಿಯ ನಡುವೆ
ಒಬ್ಬನೆ ನಡೆವಾಗ
ಗುಯ್ ಎನ್ನುವ ಗಾಳಿ
ನಿನ್ನ ಹೆಸರ ಹೇಳುತ್ತದೆ…

ನಾ ಪದ್ಯ ಗೀಚಲು ಸಿದ್ದನಾದಾಗ
ನನ್ನೊಳಗಿನ ಮೋಹ, ವ್ಯಾಮೋಹ
ಎಲ್ಲವೂ ನೀನೆ ಎಂಬುದ
ನನ್ನೊಳಗಿನ ಆತ್ಮ ನನಗೆ ನೆನಪಿಸುತ್ತದೆ…

ನೀ ನನಗೆ ಸಿಗದೆ ಇದ್ದರೆ
ಈ ಬದುಕಿಗೆ ಅರ್ಥವೇ ಇರುತ್ತಿರಲಿಲ್ಲವೆಂದು
ಕ್ಷಣಕ್ಷಣಕ್ಕೂ ನೆನಪಿಸುವ ಹೃದಯ
ನಿನ್ನದೇ ಹೆಸರಿನಲ್ಲಿ ಮಿಡಿಯುವಾಗ
ನನಗೆ ನಾನೇ ಸವಿ ಎಂದು ಗೊಣಗಿಕೊಳ್ಳುತ್ತೇನೆ…

ಊಟ ನಿದಿರೆ ಸ್ನಾನ ಓದು
ನನ್ನ ಮುಸ್ಸಂಜೆಯ ನಡಿಗೆ
ನನ್ನ ಆರೋಗ್ಯ ಹೀಗೆ ಸಾಗುವ
ನನ್ನ ದಿನನಿತ್ಯದ ಬದುಕಿಗೆ
ನೀ ತೋರುವ ಎಲ್ಲ ಕಾಳಜಿ
ನನಗೆ ಭರವಸೆಯು ಹೌದು…

ಪಾಪ ಪುಣ್ಯ ಎಲ್ಲದರ ಬಗ್ಗೆ
ನನಗೆ ನಂಬಿಕೆ ಇಲ್ಲ
ಆದರೆ ನಿನ್ನ ಪ್ರೀತಿ ಎಂಬ
ಸಮುದ್ರದಾಳದಲ್ಲಿ ಸಂಚರಿಸುವ ನಾನು
ಸದಾ ನಿನ್ನ ರಕ್ತಗತವಾಗಿ ಜೀವಿಸಬಲ್ಲನೆಂದು
ಕೂಗಿ ಹೇಳಿ ನಿನಗೆ ಆಣೆ ಮಾಡುತ್ತೇನೆ…


-ಸಿದ್ದು ಜನ್ನೂರ್, ಚಾಮರಾಜನಗರ

Leave a Reply

Your email address will not be published. Required fields are marked *