ಶಿಕ್ಷಣ ವ್ಯವಸ್ಥೆ ಜಡ್ಡುಗಟ್ಟುತ್ತಿದೆಯೇ ?
ಮೊದಲ ಪ್ರಶ್ನೆ ಶಿಕ್ಷಣ ಯಾಕೆ ಬೇಕು ? ಎಂಬುದನ್ನು ಯೋಚಿಸಿದರೆ ಉತ್ತರಗಳು ಸಿಗುತ್ತ ಹೋಗುತ್ತವೆ. ಶಿಕ್ಷಣ ಬೇಕಿರುವುದು ಜ್ಞಾನಕ್ಕಾಗಿಯೋ ? ಉದ್ಯೋಗಕ್ಕಾಗಿಯೋ ? ವ್ಯವಹಾರಕ್ಕಾಗಿಯೋ ?
ಶಿಕ್ಷಣ ನಮಗೆ ಬೇಕಿರುವುದು ಕೇವಲ ಜ್ಞಾನಕ್ಕಾಗಿ ಎಂದರೆ ಉದ್ಯೋಗಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದಂತಾಗುತ್ತದೆ. ಶಿಕ್ಷಣ ಬೇಕಿರುವುದು ಉದ್ಯೋಗಕ್ಕಾಗಿ ಎಂದರೆ ಶಾಲೆ ಕಾಲೇಜಿನಲ್ಲಿ ಕಲಿಸುತ್ತಿರುವ ಶಿಕ್ಷಣ ಎಂಥದ್ದು ? ಉದ್ಯೋಗ ಸಂಬಂಧಿಯಾ ? ಎಂಬ ಪ್ರಶ್ನೆ ಏಳುತ್ತದೆ. ಶಿಕ್ಷಣ ಬೇಕಿರುವುದು ವ್ಯವಹಾರಕ್ಕಾಗಿ ಎಂದರೆ ಈಗಿರುವ ಪಠ್ಯಪುಸ್ತಕಗಳಲ್ಲಿರುವ ವಿಷಯಗಳು ವ್ಯವಹಾರಕ್ಕೆ ಸಂಬಂಧಿಸಿರೋದಾ ? ಎಂದು ಕೇಳಿಕೊಳ್ಳಬೇಕಾಗುತ್ತದೆ.
ಮಕ್ಕಳಿಗೆ ಅಕ್ಷರಾಭ್ಯಾಸದ ನಂತರ ಬಹುತೇಕ ಪಾಲಕರಿಗಿರೋದು ಹೆಚ್ಚು ಅಂಕ ಪಡೆಯಬೇಕು, ಒಳ್ಳೆಯ ಉದ್ಯೋಗವನ್ನು ದೊರಕಿಸಿಕೊಳ್ಳಬೇಕು. ಹೀಗಾಗಿ ಎಲ್ಲರೂ ಅಂಕಗಳ ಹಿಂದೆ ಶರವೇಗವಾಗಿ ಓಡುತ್ತಿರುತ್ತಾರೆ. ಹೀಗಾಗಿ ಸ್ಪರ್ಧೆಯೂ ಹೆಚ್ಚು.
ಅದಿರಲಿ ಹಳೆಯ ದಿನಗಳಿಂದಲೂ ಶಾಲೆ, ಕಾಲೇಜು ಪಠ್ಯಪುಸ್ತಕಗಳಲ್ಲಿ ಕಲಿಸೋದೇನಿದೆ ಜ್ಞಾನಕ್ಕಾಗಿ ಎನ್ನುವ ರೀತಿಯಲ್ಲಿಯೇ ಇತ್ತು. ಆಗ ಈಗಿನಷ್ಟು ತಂತ್ರಜ್ಞಾನ, ಆಧುನಿಕ ಜಗತ್ತು ಇರಲಿಲ್ಲ. ಯಾವಾಗ ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯತೊಡಗಿತೋ ಆಗ ನಮ್ಮ ಶಿಕ್ಷಣದಲ್ಲಿನ ಪಠ್ಯಗಳು ಹಳತಾಗತೊಡಗಿದವು. ಒಂದಕ್ಕೊಂದು ಸಂಬಂಧವೇ ಇರದಂತಾದವು. ಮೊಬೈಲ್, ಕಂಪ್ಯೂಟರ್ ಗಳು ಬದುಕಿನಲ್ಲಿ ಎಷ್ಟು ಹಾಸುಹೊಕ್ಕಾದುವೆಂದರೆ, ಮಕ್ಕಳು ಇವುಗಳನ್ನು ಬಳಸಿಯೇ ಓದಬಹುದು ಎಂಬಷ್ಟು. ಇವತ್ತು ಮಕ್ಕಳಿಗೆ ಯಾವುದೇ ವಿಷಯವನ್ನು ಬರೆಯಿರಿ ಎಂದರೂ ಕೈಬೆರಳ ತುದಿಯಲ್ಲೇ ಎಲ್ಲ ಮಾಹಿತಿ ಸಿಗುತ್ತದೆ. ಮೊಬೈಲ್ ಗಳಲ್ಲಿ ಕೇಳಿದ ಮಾಹಿತಿ ರಾಶಿ ರಾಶಿ ಬಂದು ಬೀಳುತ್ತವೆ. ಈಗ ಸಮಸ್ಯೆ ಎಂದರೆ ಇರೋ ರಾಶಿ ಮಾಹಿತಿಯನ್ನು ಹೇಗೆ ಕ್ರೋಢೀಕರಿಸಬೇಕೆನ್ನುವುದು.
ಆದರೆ ಶಾಲಾ ಕಾಲೇಜು ಪಠ್ಯಗಳಲ್ಲಿ ಈಗಲೂ ಕೆಲವು ಶಿಕ್ಷಕರು, ಉಪನ್ಯಾಸಕರು ಹಲವಾರು ವರ್ಷಗಳ ಹಿಂದೆ ತಾವು ಸಿದ್ಧಪಡಿಸಿದ ನೋಟ್ಸ್ ಗಳನ್ನೇ ಇಂದಿಗೂ ಬಳಸುತ್ತಿರೋದು. ಆಧುನಿಕ ಜಗತ್ತು ಇಂದು ಬೆರಳ ತುದಿಯಲ್ಲೇ ಇದ್ದರೂ, ಎಷ್ಟೋ ಬದಲಾವಣೆಯಾಗಿದ್ದರೂ ನಮ್ಮ ಶಿಕ್ಷಣ ವ್ಯವಸ್ಥೆ ಮಾತ್ರ ಇನ್ನೂ ಹಲವಾರು ವರ್ಷಗಳ ಹಿಂದೆ ಸಿದ್ಧಪಡಿಸಿರುವ ನೋಟ್ಸ್ ಗಳಲ್ಲೇ ಒದ್ದಾಡುತ್ತಿದೆ. ಹಲವಾರು ವರ್ಷಗಳ ಹಿಂದೆ ಸಿದ್ಧಪಡಿಸಿದ ರೆಫರೆನ್ಸ್ ಬುಕ್ಸ್ ಗಳಲ್ಲೇ ಸಿಕ್ಕಿಹಾಕಿಕೊಂಡಿದೆ. ಹೀಗಾಗಿ ಶಾಲಾ ಕಾಲೇಜಿನ ಗ್ರಂಥಾಲಯಗಳು ಧೂಳು ತಿನ್ನುತ್ತಿವೆ. ಮಕ್ಕಳಿಗೆ ಅಂಗೈಯಲ್ಲಿಯೇ ಎಲ್ಲ ಮಾಹಿತಿ ಇರುವಾಗ ಗ್ರಂಥಾಲಯಗಳಿಗೆ ಹೋಗುವ ಅಗತ್ಯವೇನಿದೆ. ಇನ್ನೂ ಬೇಕಾದರೆ ಪುಸ್ತಕಗಳನ್ನು ಆಡಿಯೋ ಮೂಲಕವೂ ಕೇಳಬಹುದು, ನೋಡಬಹುದು. ಹೀಗಾಗಿ ಪುಸ್ತಕಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಈಗ ಏನಿದ್ದರೂ ಡಿಜಿಟಲ್ ಪುಸ್ತಕಗಳು, ಡಿಜಿಟಲ್ ಗ್ರಂಥಾಲಯಗಳು.
ಇನ್ನು ಶಾಲಾ ಕಾಲೇಜುಗಳಲ್ಲಿ ಕಲಿತ ನಂತರ ಮುಂದೇನು ? ಎಂದಾಗ ವಿವಿಧ ಕ್ಷೇತ್ರಗಳ ಹುದ್ದೆಗಳಿಗಾಗಿ ಪೈಪೋಟಿ. ಕೆಲವು ಇಲಾಖೆಗಳ ಕೆಲಸಗಳಿಗೂ ಓದಿರುವ ವಿಷಯಕ್ಕೂ ಸಂಬಂಧವೇ ಇರುವುದಿಲ್ಲ. ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಅಬಕಾರಿ ಇಲಾಖೆ ಹೀಗೇ…….. ಕಾಲೇಜಿನಲ್ಲಿ ಓದಿರೋ ವಿಷಯಗಳಿಗೂ, ಈ ಇಲಾಖೆಗಳ ಕೆಲಸಕ್ಕೂ ಸಂಬಂಧವೇ ಇರುವುದಿಲ್ಲ. ಇಲ್ಲಿ ಕೆಲಸಕ್ಕೆ ಸೇರಿದ ನಂತರ ಆ ಕಾರ್ಯಕ್ಷೇತ್ರದ ಬಗ್ಗೆ ತಿಳಿದುಕೊಳ್ಳಬೇಕೆ ಹೊರತು ಕಾಲೇಜಿನಲ್ಲಿ ಕಲಿತದ್ದು ಅಲ್ಲ. ಅದರಲ್ಲಿಯೂ ಕಂಪ್ಯೂಟರ್ ಪರಿಜ್ಞಾನ ಅತ್ಯಗತ್ಯ. ಎಷ್ಟು ಶಾಲಾ ಕಾಲೇಜುಗಳಲ್ಲಿ ಕಂಪ್ಯೂಟರ್ ಕಲಿಸಲಾಗುತ್ತಿದೆ ? ಮಾಹಿತಿ ತಂತ್ರಜ್ಞಾನದ ಬಗ್ಗೆ ಹೇಳಿಕೊಡಲಾಗುತ್ತಿದೆ ? ಇನ್ನೂ ಶತಮಾನಗಳ ವಿಷಯಗಳನ್ನೇ ಕಲಿಯುತ್ತ, ಕಲಿಸುತ್ತ ಜಡವಾಗುತ್ತಿದ್ದೇವೆ.
ಈಗ ಬೇಕಾಗಿರೋದು ’ಪ್ರಸ್ತುತ ಜಗತ್ತು, ಮುಂದೆ ಬದಲಾಗುತ್ತಿರುವ ಜಗತ್ತು’ ಈ ವಿಷಯವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಬೇಕಿದೆ. ಮೊದಲೆಲ್ಲ ಕೇವಲ ಬಿಇ, ಮೆಡಿಕಲ್ ಓದಿದರೆ ಸಾಕಿತ್ತು. ಈಗ ಅದೆಲ್ಲ ಸಾಕಾಗೋದೇ ಇಲ್ಲ. ಅವುಗಳಲ್ಲಿಯೇ ಪ್ರತ್ಯೇಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇಷ್ಟಕ್ಕೇ ಮುಗಿಯುವುದಿಲ್ಲ ಆಧುನಿಕ ತಂತ್ರಜ್ಞಾನ, ಕೌಶಲ್ಯತೆಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಿಂತ ನೀರಿನಂತಾಗಿ ಉದ್ಯೋಗ ಸಿಗುತ್ತಿಲ್ಲ ಎಂದು ಪರದಾಡುವಂತೆ ಮಾಡುತ್ತದೆ ಇಂದಿನ ಆಧುನಿಕ ಜಗತ್ತು. ಇವತ್ತು ಎಷ್ಟೋ ಜನ ಪದವೀಧರರು ಉದ್ಯೋಗವಿರದೇ ಪರದಾಡಲು ಇದೂ ಒಂದು ಕಾರಣ.
ಕೌಶಲ್ಯ, ಜಾಣ್ಮೆ ಇರುವವರು ಮಾತ್ರ ಆಯ್ಕೆಯಾಗಿ ಮುಂದೆ ಹೋಗಲು ಸಾಧ್ಯ. ಅಷ್ಟೇ ಅಲ್ಲ ಬದಲಾಗುತ್ತಿರುವ ಜಗತ್ತಿನೊಂದಿಗೆ ಬದಲಾಗುತ್ತಲೇ ಹೋಗಬೇಕು, ಆಧುನಿಕತೆಯನ್ನು ಮೈಗೂಡಿಸಿಕೊಳ್ಳುತ್ತಲೇ ಹೋಗಬೇಕು. ಇಲ್ಲದಿದ್ದರೆ ಈ ಜಗತ್ತು ಹಿಂದೆ ತಳ್ಳಿ ಮೂಲೆಗುಂಪು ಮಾಡಿಬಿಡುತ್ತದೆ. AI ಕೃತಕ ಬುದ್ಧಿಮತ್ತೆ ಬಂದ ಮೇಲಂತೂ ಇದು ಇನ್ನೂ ಸ್ಪಷ್ಟವಾಗುತ್ತಿದೆ.
ಸ್ನಾತಕೋತ್ತರ ಪದವೀಧರರು ಕಾಲೇಜುಗಳಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿರುವಾಗ ವೃತ್ತಿ ಕೌಶಲ್ಯಗಳನ್ನು, ಆಧುನಿಕ ಜಗತ್ತಿನ ಒಳಹೊರಗನ್ನು ಅರಿತ ಸಾಮಾನ್ಯನು ಇವತ್ತು ಸಾಕಷ್ಟು ಹಣವನ್ನು ಗಳಿಸಬಹುದಾಗಿದೆ. ಹೆಚ್ಚು ಓದದೇ ಇರುವ ವ್ಯಕ್ತಿಗೆ ಇವತ್ತು ಅವನ ಜಾಣ್ಮೆ, ಕೌಶಲ್ಯಗಳಿಗೆ ಅನುಗುಣವಾಗಿ ಉದ್ಯೋಗಾವಕಾಶಗಳು ದೊರೆಯುತ್ತಿವೆ. ಇಲ್ಲಿ ಬೇಕಿರುವುದು “ಬದುಕುವುದಕ್ಕೆ ಬೇಕಿರುವ ಜಾಣ್ಮೆ”.
ಮಹಾನಗರಗಳಲ್ಲಿ ಟ್ಯಾಕ್ಸಿ ಚಾಲಕರು, ಹಲವಾರು ಮನೆಗಳಿಗೆ ಬೇಕಿರುವ ಅಗತ್ಯ ಸಾಮಗ್ರಿಗಳನ್ನು ಪೂರೈಸುವ ಏಜಂಟರು, ಮನೆಯ ಅಗತ್ಯ ರಿಪೇರಿ ಕೆಲಸ ಮಾಡುವ ಕುಶಲ ಕರ್ಮಿಗಳು, ಗುಜರಿ ವಸ್ತುಗಳನ್ನು ವಿಲೇವಾರಿ ಮಾಡುವ ಏಜಂಟರು ಒಂದೇ ಎರಡೇ ಇವೆಲ್ಲ ಸಣ್ಣಪುಟ್ಟ ಕೆಲಸಗಳೆನಿಸಬಹುದಾದರೂ ಹಾಗೆ ನೋಡಿದರೆ ಇಂದು ಶಾಲಾ ಕಾಲೇಜುಗಳಲ್ಲಿ ಅರೆಕಾಲಿಕ ಶಿಕ್ಷಕರಾಗಿ, ಉಪನ್ಯಾಸಕರಾಗಿ ದುಡಿಯುತ್ತಿರುವ ಎಷ್ಟೋ ಜನ ಪದವೀಧರರಿಗಿಂತಲೂ ಇವರು ಹೆಚ್ಚು ಹಣ ಪಡೆಯುತ್ತಿದ್ದಾರೆ.
ಹಾಗಾದರೆ ಎಲ್ಲಿ ಏನು ಬದಲಾವಣೆಯಾಗಬೇಕಿದೆ ? ಈಗಿರುವ ಶಿಕ್ಷಣ ವ್ಯವಸ್ಥೆ, ಪಠ್ಯಗಳನ್ನೇ ಅಮೂಲಾಗ್ರವಾಗಿ ಬದಲಾಯಿಸಿ, ಹೊಸ ರೂಪ ಕೊಡಬೇಕಿದೆ. ಅದು ನಾಳಿನ ಆಧುನಿಕ ಜಗತ್ತಿನಲ್ಲಿ ನಮ್ಮ ಮಕ್ಕಳು “ಬದುಕುವ ಕೌಶಲ್ಯ”ವನ್ನು ಕಲಿಯುವ ಬಗೆಯಲ್ಲಿ ರೂಪುಗೊಳ್ಳಬೇಕಿದೆ.
ದುರಂತವೆಂದರೆ ನಮ್ಮ ಶಿಕ್ಷಣ ತಜ್ಞರು, ಇಲಾಖೆಗಳು ಇನ್ನೂ ಧೂಳಿಡಿದ ಗ್ರಂಥಗಳಲ್ಲೇ ಹುಡುಕಾಡಿ ಮಕ್ಕಳಿಗೆ ಪಠ್ಯಗಳನ್ನು ಅಳವಡಿಸುವುದರಲ್ಲಿಯೇ ಬ್ಯುಸಿಯಾಗಿದ್ದಾರೆ. ಯಾರಿಗೆ ಹೇಳೋದು ?

-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ.
