The post ಕನ್ನಡ ಸಾಹಿತ್ಯ ಪರಿಷತ್ತಿಗೆ ಕಟ್ಟಡ ಮತ್ತು ಬುನಾದಿ ಎರಡೂ ಮುಖ್ಯ -ನಾಡೋಜ ಡಾ.ಮಹೇಶ ಜೋಶಿ appeared first on Karnataka Kahale.
]]>
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿಗೆ ಕಟ್ಟಡ ಮತ್ತು ಬುನಾದಿ ಎರಡೂ ಮುಖ್ಯವೆಂದು ರೂಪಕದ ಮೂಲಕ ಹೇಳಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರು ಹೇಳಿದರು.
ಅವರು ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕನ್ನಡ ಪರಿಷತ್ತಿನ ಪ್ರತಿಷ್ಟಿತ ದತ್ತಿ ಪ್ರಶಸ್ತಿಗಳಾದ ಪ್ರೊ.ಸಿ.ಎಚ್.ಮರಿದೇವರು ಪ್ರತಿಷ್ಠಾನ ದತ್ತಿ ಹಾಗೂ ರಾಜಸಭಾ ಭೂಷಣ ಶ್ರೀ ಕರ್ಪೂರ ಶ್ರೀನಿವಾಸ ರಾವ್ ದತ್ತಿ ಹಾಗೂ ಕರ್ಪೂರ ರಾಮರಾವ್ ಜನ್ಮ ಶತಾಬ್ದಿ ದತ್ತಿ ಪುರಸ್ಕಾರಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಆಧುನಿಕತೆಗೆ ಸ್ಪಂದಿಸುವಂತೆಯೇ ತನ್ನ ನಿರ್ಮಾತೃಗಳನ್ನು ಪರಿಷತ್ತು ಸದಾ ಸ್ಮರಿಸುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿ ಇಟ್ಟಿಗೆಯೂ ಕರ್ಪೂರ ಶ್ರೀನಿವಾಸ ರಾಯರು ಪರಿಷತ್ತಿಗೆ ನೀಡಿದ ಕೊಡುಗೆಗಳ ಬಗ್ಗೆ ಹೇಳುತ್ತದೆ ಎಂದು ಹೇಳಿ ಅವರ ಮೊಮ್ಮಗಳು ಮತ್ತು ಅವರ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನಗೆ ಅಪಾರ ಸಂತೋಷ ತಂದಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿಗಳಿಗೆ ವಿಶಿಷ್ಟ ಪರಂಪರೆ ಇದ್ದು ಅದರ ದಾನಿಗಳು ಪರಿಷತ್ತಿನ ಮೇಲೆ ಅಪಾರ ವಿಶ್ವಾಸವನ್ನು ಇಟ್ಟು ಅದನ್ನು ಸ್ಥಾಪಿಸಿದ್ದಾರೆ. ಯಾವುದೇ ಅರ್ಜಿ-ಮರ್ಜಿಗಳಿಲ್ಲದೆ ಅರ್ಹರನ್ನು ಹುಡುಕಿ ಪುರಸ್ಕಾರ ನೀಡುವ ಮೂಲಕ ದತ್ತಿ ದಾನಿಗಳ ಆಶಯವನ್ನು ಸಾರ್ಥಕಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ ಕರ್ಪೂರ ಶ್ರೀನಿವಾಸ ರಾಯರ ಕೊಡುಗೆಗಳನ್ನು ಮತ್ತು ವಿದ್ವತ್ತನ್ನು ಸ್ಮರಿಸಿ ಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರೆಲ್ಲರನ್ನೂ ಕರೆದು ಸನ್ಮಾನಿಸುವ ಕಾರ್ಯವನ್ನು ಶ್ರದ್ಧೆಯಿಂದ ಮಾಡುತ್ತಿದ್ದು ಈಗಾಗಲೇ ಕಿಟಲ್ ವಂಶಸ್ಥರನ್ನು ಗೌರವಿಸಲಾಗಿದೆ. ಮುಂಬರುವ ಬಳ್ಳಾರಿಯಲ್ಲಿ ಅಯೋಜಿತವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಥಾಮಸ್ ಮನ್ರೂ ಅವರ ವಂಶದವರನ್ನು ಗೌರವಿಸಲಾಗುವುದು ಎಂಬ ಮಾಹಿತಿಯನ್ನು ನೀಡಿದರು.
ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಕೃಷ್ಣದೀಕ್ಷಿತ್ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾರಸ್ವತ ಲೋಕದ ಕಿರೀಟ ಎಂದು ಬಣ್ಣಿಸಿ, ಕನ್ನಡ ನಿತ್ಯ ಭಾಷೆಯಾಗ ಬೇಕು, ಕನ್ನಡಿಗರಿಗೆ ಉದ್ಯೋಗಗಳು ದೊರಕಬೇಕು. ಕನ್ನಡದಲ್ಲಿಯೇ ಕಾನೂನು ದೊರೆತರೆ ತೀರ್ಪಿನ ಕುರಿತು ಜನ ಸಾಮಾನ್ಯರಲ್ಲಿ ಅರಿವು ಮೂಡಲಿದೆ. ಎಂದು ಹೇಳಿ ಕನ್ನಡದ ಪರಂಪರೆಯನ್ನು ತಮ್ಮ ಮಕ್ಕಳಿಗೆ ಕಲಿಸುವಂತೆ ಸೂಚಿಸಿದರು.
ಕರ್ಪೂರ ಶ್ರೀನಿವಾಸ ರಾವ್ ಅವರ ಮರಿಮೊಮ್ಮಗಳು ನಿರ್ಮಲ ಕರ್ಪೂರರಾವ್ ಕನ್ನಡ ಸಾಹಿತ್ಯ ಪರಿಷತ್ತನ್ನು ತಮ್ಮ ತವರು ಮನೆ ಎಂದು ಬಣ್ಣಿಸಿ ದೂರದ ಅಮೆರಿಕೆಯಲ್ಲಿ ಕನ್ನಡ ನುಡಿಯನ್ನು ಉಳಿಸಿ ಕೊಳ್ಳಲು ತಾವು ಮಾಡಿದ ಪ್ರಯತ್ನಗಳನ್ನು ವಿವರಿಸಿದರು. ಐ.ಎಸ್.ಐನ ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಕೃಷ್ಣಕುಮಾರ್ ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದರು. ದತ್ತಿದಾನಿಗಳ ಪ್ರತಿನಿಧಿಯಾಗಿ ಎಸ್.ರಾಜಶೇಖರ ಅವರು ಮಾತನಾಡಿದರು.

ತುಮಕೂರು ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ, ಹಿರಿಯ ಲೇಖಕರು, ಶಿಕ್ಷಣ ತಜ್ಞರೂ ಆಗಿದ್ದ ಪ್ರೊ.ಸಿ.ಎಸ್.ಮರಿದೇವರು ಸ್ಥಾಪಿಸಿರುವ ಪುರಸ್ಕಾರಕವನ್ನು 2024ನೆಯ ಸಾಲಿನಲ್ಲಿ ಡಾ.ಬಿ.ವಿ.ವಸಂತ ಕುಮಾರ್ (ಶಿಕ್ಷಣ), ಎಂ.ನಂಜುಂಡ ಸ್ವಾಮಿ ಐಪಿಎಸ್, (ಕನ್ನಡ ಸೇವೆ) ಸುಧಾ ನರಸಿಂಹ ರಾಜು (ಕಲಾ ಸೇವೆ) ಮತ್ತು ಸಿದ್ಧಗಂಗಯ್ಯ ಹೊಲತಾಳು (ಕೃಷಿ ಸೇವೆ) ಅವರು ಭಾಜನರಾಗಿದ್ದಾರೆ. ರಾಜಸಭಾ ಭೂಷಣ ಕರ್ಪೂರ ಶ್ರೀನಿವಾಸ ರಾಯರ ಪುರಸ್ಕಾರವನ್ನು 2023ನೆಯ ಸಾಲಿನಲ್ಲಿ ಸುಪ್ರಿಯ.ಎಸ್.ಆರ್ ಕರ್ಪೂರ ರಾಮರಾಯರ ಜನ್ಮ ಶತಾಬ್ಧಿ ಮಮತಾ.ಎಸ್.ಟಿ ಮತ್ತು ಬಾಲಗೌರಮ್ಮ ಸ್ವೀಕರಿಸಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ನಿರೂಪಿಸಿದರು. ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿಯವರು ಸ್ವಾಗತಿಸಿದರು, ಇನ್ನೋರ್ವ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ವಂದಿಸಿದರು.
ಅಪಾರ ಕನ್ನಡಾಭಿಮಾನಿಗಳು, ಪರಿಷತ್ತಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
—–
The post ಕನ್ನಡ ಸಾಹಿತ್ಯ ಪರಿಷತ್ತಿಗೆ ಕಟ್ಟಡ ಮತ್ತು ಬುನಾದಿ ಎರಡೂ ಮುಖ್ಯ -ನಾಡೋಜ ಡಾ.ಮಹೇಶ ಜೋಶಿ appeared first on Karnataka Kahale.
]]>The post ಕಸಾಪ ಅಧ್ಯಕ್ಷರಿಗೆ ಬಹಿರಂಗ ಪತ್ರ: ತಾರತಮ್ಯದಿಂದ ಕೂಡಿರುವ 86ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಲಾರೆ! -ಎಚ್ ಆರ್ ಸುಜಾತ, ಹಿರಿಯ ಕವಯಿತ್ರಿ appeared first on Karnataka Kahale.
]]>ಮಾನ್ಯರೆ ,
ಹಾವೇರಿಯಲ್ಲಿ ಆಯೋಜಿಸಿರುವ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಿನಾಂಕ 7 .12 .2022 ರಂದು ನಡೆಯಲಿರುವ ಕವಿ ಗೋಷ್ಠಿಗೆ ತಾವು ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುತ್ತೀರಿ.ಅದಕ್ಕಾಗಿ ನಾನು ತಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಈ ಸಂಬಂಧ ನನಗೆ ಡಿಜಿಟಲ್ ಮಾಧ್ಯಮದ ಮೂಲಕ ಆಹ್ವಾನ ಪತ್ರಿಕೆಯೂ ಸಹ ತಲುಪಿದೆ. ಆಹ್ವಾನ ಪತ್ರಿಕೆಯನ್ನು ಗಮನಿಸಿದಾಗ ಅದರಲ್ಲಿನ ವಿವಿಧ ಗೋಷ್ಠಿಗಳಲ್ಲಿ , ವೇದಿಕೆಗಳಲ್ಲಿ ಕನ್ನಡದ ಸಮಕಾಲೀನ ಮಹತ್ವದ ಲೇಖಕ ಲೇಖಕಿಯರ ಹೆಸರುಗಳೇ ಕಂಡು ಬರುತ್ತಿಲ್ಲ. ಅಲ್ಲದೇ ಕನ್ನಡಿಗರೇ ಆಗಿರುವ ಮುಸ್ಲಿಂ ಸಮುದಾಯದ ಲೇಖಕರ ಪ್ರಾತಿನಿಧ್ಯವೇ ಇರುವುದಿಲ್ಲ. ನೂರಾರು ಸಂಖ್ಯೆಯಲ್ಲಿರುವ ಬ್ಯಾರಿ ಸಮುದಾಯದ ಮಹತ್ವದ ಲೇಖಕರನ್ನು ಸಮ್ಮೇಳನದಲ್ಲಿ ಸಂಯೋಜಿಸಿ ಕೊಂಡಿರುವುದಿಲ್ಲ. ಈ ಬಗ್ಗೆ ಕನ್ನಡದ ಹಲವಾರು ಲೇಖಕರು ಮಾಧ್ಯಮದಲ್ಲಿ ತಮ್ಮ ಪ್ರತಿಕ್ರಿಯೆಯನ್ನೂ ಸಹ ವ್ಯಕ್ತ ಪಡಿಸಿರುತ್ತಾರೆ. ಇದಕ್ಕೆ ಪರಿಷತ್ತಿನ ವತಿಯಿಂದ ಯಾವುದೇ ರೀತಿಯ ಸಮಜಾಯಿಷಿ ಹೇಳಿಕೆಗಳೂ ಕೂಡಾ ಬಂದಿರುವುದಿಲ್ಲ. ಈ ಎಲ್ಲ ಘಟನೆಗಳನ್ನು ನೋಡಿದರೆ ಬ್ಯಾರಿ ಸಮುದಾಯದ ಲೇಖಕರನ್ನು ಸಮ್ಮೇಳನದಿಂದ ಬೇಕೆಂದೇ ದೂರವಿಟ್ಟಿರುವಂತೆ ಮೇಲು ನೋಟಕ್ಕೆ ಕಂಡು ಬರುತ್ತಿದೆ.
ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ರೀತಿಯ ತಾರತಮ್ಯ ಇರಬಾರದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ. ಇಂಥ ತಾರತಮ್ಯದಿಂದ ಕೂಡಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುವುದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾನು ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿಲ್ಲ ಎನ್ನುವ ವಿಷಯವನ್ನು ವಿನಮ್ರತೆಯಿಂದ ನಿಮ್ಮಲ್ಲಿ ನಿವೇದಿಸಿ ಕೊಳ್ಳುತ್ತಿದ್ದೇನೆ.
ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿ
ಗೋಷ್ಠಿಯಲ್ಲಿ ಭಾಗವಹಿಸಿ ಅಧ್ಯಕ್ಷತೆ ವಹಿಸಲು ಕನ್ನಡ ಸಾಹಿತ್ಯ ಪರಿಷತ್ ಗೆ ನನ್ನ ಸಮ್ಮತಿಯನ್ನು ನೀಡಿದ್ದಾಗ ಮುಂದೆ ಈ ರೀತಿಯ ಪರಿಸ್ಥಿತಿ ಉದ್ಭವಿಸಬಹುದು ಎನ್ನುವ ಕಲ್ಪನೆ ನನಗೆ ಇರಲಿಲ್ಲ. ಆದರೆ ದುರದೃಷ್ಟವಶಾತ್ ಈ ರೀತಿಯ ಬೆಳವಣಿಗೆಗಳು ಘಟಿಸಿ ನನ್ನ ಮನಸ್ಸಿಗೆ ಕಸಿವಿಸಿ ಉಂಟಾಗಿದೆ. ಕವಿ ಗೋಷ್ಠಿಯ ಅಧ್ಯಕ್ಷತೆಗೆ ಒಪ್ಪಿಗೆ ನೀಡಿ ಈಗ ಅಸಮ್ಮತಿ ಸೂಚಿಸುತ್ತಿರುವುದರಿಂದ ನಿಮಗೆ ಆಗಬಹುದಾದ ಮುಜುಗುರಕ್ಕೆ ವಿಷಾದ ವ್ಯಕ್ತ ಪಡಿಸುತ್ತೇನೆ. ಇನ್ನು ಮುಂದೆ ಇಂಥ ಘಟನೆಗಳು ಪುನರಾವರ್ತನೆ ಆಗದಂತೆ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ತಾವು ಗಮನ ಹರಿಸ ಬೇಕೆಂದು ವಿನಂತಿಸಿ ಕೊಳ್ಳುತ್ತೇನೆ .
ಇನ್ನು ಮುಂದೆ ಇಂಥ ಮುಜುಗುರದ ಸನ್ನಿವೇಶಗಳು ಸಮ್ಮೇಳನದಲ್ಲಿ ಉಂಟಾಗದಿರಲಿ ಎನ್ನುವ ಆಶಯದೊಂದಿಗೆ ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಶ ಕೋರುತ್ತೇನೆ .
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ

-ಎಚ್ ಆರ್ ಸುಜಾತ, ಬೆಂಗಳೂರು
*****
The post ಕಸಾಪ ಅಧ್ಯಕ್ಷರಿಗೆ ಬಹಿರಂಗ ಪತ್ರ: ತಾರತಮ್ಯದಿಂದ ಕೂಡಿರುವ 86ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಲಾರೆ! -ಎಚ್ ಆರ್ ಸುಜಾತ, ಹಿರಿಯ ಕವಯಿತ್ರಿ appeared first on Karnataka Kahale.
]]>