The post ಬಳ್ಳಾರಿ ಮಹಾನಗರ ಪಾಲಿಕೆ ನಿವೃತ್ತ ಅಧಿಕಾರಿ ಸಿ. ಯಮನಪ್ಪ ವಿಧಿವಶ appeared first on Karnataka Kahale.
]]>
ಬಳ್ಳಾರಿ, ಏ.17: ಬಳ್ಳಾರಿ ಮಹಾನಗರ ಪಾಲಿಕೆ ಹಾಗೂ ತೆಕ್ಕಲಕೋಟೆ ಪಟ್ಟಣ ಪಂಚಾಯತಿ ನಿವೃತ್ತ ಅಧಿಕಾರಿ ಸಿ. ಯಮನಪ್ಪ ಅವರು ಗುರುವಾರ ನಿಧನರಾಗಿದ್ದಾರೆ.
ಅವರಿಗೆ 87 ವರ್ಷವಾಗಿತ್ತು. ಪತ್ನಿ ಜಾನಮ್ಮ, ಪುತ್ರರಾದ ಸಿ. ರವೀಂದ್ರ, ಡಾ. ವೈ. ವಿಶ್ವನಾಥ್, ಸಿ.ಗಂಗಾಧರ್, ಪುತ್ರಿಯರಾದ ಪ್ರೊ. ಸುಲೋಚನಾ ಮತ್ತು ಪ್ರೊ. ಶೋಭ ಸೇರಿದಂತೆ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಗುರುವಾರ ಸಂಜೆ ಕೌಲಬಜಾರ್ ನ ಗುಗ್ಗರಹಟ್ಟಿ ರಸ್ತೆಯಲ್ಲಿರುವ ರುದ್ರ ಭೂಮಿಯಲ್ಲಿ ಅಪಾರ ಬಂಧು ಮಿತ್ರರ ಸಮ್ಮುಖದಲ್ಲಿ ಅಂತಿಮಸಂಸ್ಕಾರ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತಮ್ಮ ತಂದೆ ಸಿ.ಯಮನಪ್ಪ ಅವರು ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಆಡಳಿತದಲ್ಲಿ ಕನ್ನಡ ಗರಿಷ್ಟ ಬಳಕೆಗಾಗಿ ಅಂದಿನ ಜಿಲ್ಲಾಉಸ್ತುವಾರಿ ಸಚಿವ ಎಂ.ಪಿ. ಪ್ರಕಾಶ ಅವರು ಜಿಲ್ಲಾಡಳಿತದ ಪರವಾಗಿ ಪ್ರಶಸ್ತಿ ನೀಡಿ ಗೌರವಿಸಿದ್ದರು ಎಂದು ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ವೈ.ವಿಶ್ವನಾಥ್ ಸ್ಮರಿಸಿದ್ದಾರೆ.
ಸಂತಾಪ: ಸಿ. ಯಮನಪ್ಪ ಅವರ ನಿಧನಕ್ಕೆ ಹಿರಿಯ ಸಾಹಿತಿ ಡಾ.ವೆಂಕಟಯ್ಯ ಅಪ್ಪಗೆರೆ, ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ. ಮಂಜುನಾಥ, ಬಳ್ಳಾರಿ ಐಜಿಪಿ ಕಚೇರಿಯ ನಿವೃತ್ತ ಆಡಳಿತಾಧಿಕಾರಿ ಕೆ.ಮಾರುತಿ, ನಿವೃತ್ತ ಪ್ರಾಚಾರ್ಯ ಡಾ. ಸಿ ಎಚ್ ಸೋಮನಾಥ, ತಹಸೀಲ್ದಾರರಾದ ಹೊನ್ನಮ್ಮ, ಬಳ್ಳಾರಿ ಮೆಡಿಕಲ್ ಕಾಲೇಜ್ ಪ್ರಾಧ್ಯಾಪಕ ಡಾ. ವಿಜಯ್ ಅಪ್ಪಗೆರೆ, ಎಸ್.ಪಿ ಕಚೇರಿಯ ಎಎಸ್ಐ ಸಿ. ಹನುಮಂತಪ್ಪ, ಕಾಡಾ ನಿವೃತ್ತ ಅಧಿಕಾರಿ ಗುರುಸ್ವಾಮಿ, ಸಿಎಂಎಸ್ ಮುಖಂಡ ಸಿ. ನರಸಪ್ಪ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
The post ಬಳ್ಳಾರಿ ಮಹಾನಗರ ಪಾಲಿಕೆ ನಿವೃತ್ತ ಅಧಿಕಾರಿ ಸಿ. ಯಮನಪ್ಪ ವಿಧಿವಶ appeared first on Karnataka Kahale.
]]>The post ಡಾ. ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಕೃತಿ ಲೋಕಾರ್ಪಣೆ: ದೇಶದಲ್ಲಿ ಸೌಹಾರ್ದ ಕೆಡಿಸುವ ಯತ್ನ–ಎಚ್ಚರಿಕೆ ಅಗತ್ಯ -ಡಾ. ಕುಂ.ವೀ appeared first on Karnataka Kahale.
]]>
ಹೊಸಪೇಟೆ, ಜ.10: ದೇಶದಲ್ಲಿ ಕಳೆದ 11 ವರ್ಷಗಳಿಂದ ಸೌಹಾರ್ದ ಕೆಡಿಸುವ ಯತ್ನ ನಡೆಯುತ್ತಿದೆ. ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತಿ, ಅದನ್ನು ಲಾಭಕ್ಕೆ ಬಳಸಿಕೊಳ್ಳುವ ಯತ್ನವೂ ನಿರಂತರ ಸಾಗಿದೆ. ಇದರ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹಿರಿಯ ಸಾಹಿತಿ ಡಾ. ಕುಂ.ವೀರಭದ್ರಪ್ಪ (ಕುಂ.ವೀ) ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ಸೌಹಾರ್ದ ಕರ್ನಾಟಕ ಹೊಸಪೇಟೆ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ..’ ಕೃತಿಯನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
ವಿವಿಧ ಜನಾಂಗ, ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಜಗತ್ತಿನಲ್ಲಿ ಆರಂಭವಾದುದು 1914ರ ಸಮಯದಲ್ಲಿ. ಜರ್ಮನಿಯಲ್ಲಿ ಯಹೂದಿಗಳನ್ನು ವಿನಾ ಕಾರಣ ನಿಂದಿಸುವ, ಶಿಕ್ಷಿಸುವ ಕೆಲಸ ನಡೆಯಿತು. ಅದೇ ವಾತಾವರಣ ನಮ್ಮ ದೇಶದಲ್ಲಿ ಕಳೆದ 11 ವರ್ಷಗಳಿಂದ ನಡೆಯುತ್ತಿದೆ. ಮುಸ್ಲಿಮವರನ್ನು ವಿನಾ ಕಾರಣ ದ್ವೇಷಿಸುವ ವಾತಾವರಣ ನಿರ್ಮಿಸಲಾಗಿದೆ ಎಂದು ಕುಂ.ವೀ ಆತಂಕ ವ್ಯಕ್ತಪಡಿಸಿದರು.
ಇಲ್ಲಿನವರಿಂದಲೇ ಕೊಳ್ಳೆ: ‘ವಿಜಯನಗರ ಇತಿಹಾಸವನ್ನೇ ಅವಲೋಕಿಸಿದರೆ, ಇಲ್ಲಿ ಸಹ ಮುಸ್ಲಿಮರಿಂದ ವಿಜಯನಗರ ಸಾಮ್ರಾಜ್ಯ ಕೊಳ್ಳೆ ಹೊಡೆಯಲ್ಪಟ್ಟಿತು ಎಂದೇ ಬಿಂಬಿಸಲಾಗಿದೆ. ವಾಸ್ತವವಾಗಿ ವಿಜಯನಗರದ ಕೊನೆಯ ದೊರೆ ರಾಮರಾಯ ಯುದ್ಧದಲ್ಲಿ ಸೋತದ್ದು ಬಹಳ ದೂರದಲ್ಲಿ, ಆದರೆ ತಕ್ಷಣ ಹಂಪಿ ಭಾಗದಲ್ಲಿ ಕೊಳ್ಳೆ ಹೊಡೆಯುವ ಕೆಲಸ ನಡೆಯಿತು. ಇದನ್ನು ಯಾರು ಮಾಡಿದ್ದು ಎಂದು ಊಹಿಸುವುದು ಕಷ್ವವಲ್ಲ, ಇಲ್ಲಿ ಇದ್ದ ಹಿಂದೂಗಳೇ ರಾಜರ ಮೇಲಿನ ದ್ವೇಷದಿಂದ ಸಾಮ್ರಾಜ್ಯವನ್ನು ಕೊಳ್ಳೆ ಹೊಡೆದರು’ ಎಂದು ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

ವಿಜಯನಗದ ಇತಿಹಾಸ ಗಮನಿಸಿದರೆ ಇಲ್ಲಿ ರಚನೆಯಾದ ಸಾಹಿತ್ಯಗಳಲ್ಲಿ ರಾಜರನ್ನು ಹೊಗಳುವ, ಅವರ ಸಾಧನೆ ತಿಳಿಸುವ ಅಂಶ ಕಾಣಿಸುವುದಿಲ್ಲ, ಬದಲಿಗೆ ಇಲ್ಲಿನ ಜಾನಪದ ಸಾಹಿತ್ಯಗಳಲ್ಲಿ ಕುಮಾರರಾಮ, ಪಾಳೆಗಾರರು, ಜನಸಾಮಾನ್ಯರನ್ನು ಹೊಗಳುವ ಪರಿಪಾಠ ಕಾಣಿಸುತ್ತದೆ. ರಾಜರಿಂದ ಜನರಿಗೆ, ಜನಸಾಮಾನ್ಯರಿಗೆ ನೆಮ್ಮದಿ ಇರಲಲ್ಲ ಎಂಬುದನ್ನು ಇದು ಸೂಚಿಸುತ್ತದೆ, ಇದರ ಫಲವಾಗಿಯೇ ರಾಜ್ಯ ಪತನವಾದಾಗ ಕೊಳ್ಳೆ ಹೊಡೆದು ಸೇಡು ತೀರಿಸಿಕೊಳ್ಳುವ ಕೆಲಸ ಇಲ್ಲಿ ನಡೆದಂತೆ ಕಾಣಿಸುತ್ತದೆ ಎಂದು ಅವರು ವಿವರಿಸಿದರು.
ಸಾಹಿತ್ಯದ ಮೂಲವೇ ಸೌಹಾರ್ದ: ಸೌಹಾರ್ದತೆ ಎಂಬುದು ಈ ದೇಶದ ಮೂಲಭೂತ ಗುಣ. ಹಲವು ಹಳಗನ್ನಡ, ನಡುಗನ್ನಡ ಸಾಹಿತ್ಯ ಕೃತಿಗಳಲ್ಲಿ ಇದನ್ನೇ ಪ್ರಧಾನವಾಗಿ ಪರಿಗಣಿಸಲಾಗಿದೆ. ವಚನ ಸಾಹಿತ್ಯದ ಆಶಯವೂ ಇದೇ ಆಗಿದೆ. ಇನ್ನೊಂದು ಧರ್ಮವನ್ನು, ವಿಚಾರಗಳನ್ನು ಗೌರವಿಸು ಎಂದೇ ಎಲ್ಲಾ ದಾರ್ಶನಿಕರೂ, ಸಾಹಿತಿಗಳೂ ಹೇಳಿದ್ದಾರೆ. ಆದರೆ ನಾವು ಈ ಮೂಲ ತತ್ವವನ್ನೂ ಕಳೆದ 11 ವರ್ಷಗಳಿಂದ ಮರೆತಂತೆ ವರ್ತಿಸುತ್ತಿದ್ದೇವೆ ಎಂದು ಕುಂ.ವೀ ವಿಷಾದ ವ್ಯಕ್ತಪಡಿಸಿದರು.
ದೇಶದ 700 ವರ್ಷದ ಇತಿಹಾಸದಲ್ಲಿ ಸುಮಾರು 300 ವರ್ಷಗಳಷ್ಟು ಅವಧಿಯನ್ನು ಅನಕ್ಷರಸ್ಥ ಮುಸ್ಲಿಂ ದೊರೆಗಳೇ ಆಳಿದ್ದಾರೆ. ಆದರೆ ಮತಾಂತರ, ಧರ್ಮದ್ವೇಷದಂತಹ ಉದಾಹರಣೆಗಳು ಹೆಚ್ಚೇನೂ ಸಿಗುವುದಿಲ್ಲ. ಹಿಂದೂಗಳಲ್ಲೇ ಹಲವು ಪಂಗಡಗಳು ಬಲಾತ್ಕಾರದಿಂದ ಮತಾಂತರ ಮಾಡಿಸಿಕೊಂಡ ನಿದರ್ಶನವೂ ಇದೆ. ಹೀಗಾಗಿ ಒಂದು ನಿರ್ದಿಷ್ಟ ಧರ್ಮವನ್ನೇ ಗುರಿಯಾಗಿಸಿ ಅವರಿಂದಲೇ ಎಲ್ಲವೂ ನಡೆಯುತ್ತಿದೆ ಎಂದು ಹೇಳುವುದು ಸರಿಯಲ್ಲ ಎಂದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹಳಷ್ಟು ಮುಸ್ಲಿಮರು ಬಲಿದಾನ ಮಾಡಿದ್ದಾರೆ ಎಂದ ಅವರು, ತಾವು ದೇಶಪ್ರೇಮಿಗಳು ಎಂದು ಹೇಳಿಕೊಳ್ಳುವ ಸಂಘಟನೆಯವರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡೇ ಇಲ್ಲ ಎಂದರು.

ಕಲಿತವರಿಂದಲೇ ತೊಂದರೆ: ‘ಸೌಹಾರ್ದ ಭಾರತ’ ಕೃತಿಯ ಕುರಿತು ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಅಮರೇಶ ನುಗಡೋಣಿ, ಇಂದು ದೇಶದಲ್ಲಿ ವಿದ್ಯೆ ಕಲಿತವರಿಂದಲೇ ಅಧಿಕ ಅಪಾಯ ಎದುರಾಗಿದೆ ಎಂದರು.
ಕನ್ನಡ ಸಾಹಿತ್ಯದಲ್ಲಿ ಸೌಹಾರ್ದತೆ ಬಿಟ್ಟರೆ ಇನ್ನೊಂದು ಮಾತಿಲ್ಲ. ಕೂಡಿ ಬಾಳಬೇಕು ಎಂದೇ ಎಲ್ಲರೂ ಹೇಳಿದ್ದಾರೆ. ಪಂಪನಿಂದ ಹಿಡಿದು ವಚನಕಾರರು, ಕುವೆಂಪು ತನಕ ಎಲ್ಲರದೂ ಇದೇ ಆಶಯವಾಗಿದೆ. ಅಕ್ಷರ ಕಲಿತರವಿಗೆ ಇದನ್ನು ಮತ್ತೆ ತಿಳಿಹೇಳುವ ಅಗತ್ಯ ಎದುರಾಗಿದೆ ಎಂದು ಅವರು ಹೇಳಿದರು.
ಗಾಂಧಿ, ವಿವೇಕಾನಂದರ ಹಲವು ವಿಚಾರಗಳನ್ನು ಎತ್ತಿಕೊಂಡ ಬರಗೂರು ಅವರು ತಮ್ಮ ಕೃತಿಯಲ್ಲಿ ಸೌಹಾರ್ದತೆಯ ಅಗತ್ಯವನ್ನು ತಿಳಿಸಿದ್ದಾರೆ, ಈ ಕೃತಿಯನ್ನು ಶಾಲಾ, ಕಾಲೇಜುಗಳಲ್ಲಿ ಹಂಚಿ, ಯುವಜನಾಂಗದವರಿಗೆ ಸೌಹಾರ್ದದ ಬಗ್ಗೆ ಮನವರಿಕೆ ಮಾಡುವ ಅಗತ್ಯ ಇದೆ ಎಂದರು.
ದ್ವೇಷ ಸರಿಯಲ್ಲ: ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಂ ನಿಯಾಜಿ ಮಾತನಾಡಿ, ಧರ್ಮಗಳ ಸಾರ ಕೂಡಿ ಬಾಳುವುದೇ ಹೊರತು ದ್ವೇಷ ಸಾಧಿಸುವುದಲ್ಲ, ಆದರೆ ಇಂದು ಕಾಲೇಜುಗಳಲ್ಲಿ ಸಹ ವಿದ್ಯಾರ್ಥಿಗಳಲ್ಲಿ ಗುಂಪುಗಳು ರಚನೆಗೊಂಡು ದ್ವೇಷದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಸತ್ಯನಾರಾಯಣ ಮಾತನಾಡಿ, ಜಿಲ್ಲೆಯಲ್ಲಿ ಪತ್ರಕರ್ತರಿಗೆ ಹಲವು ಸಂಘಟನೆಗಳ ಜತೆಗೆ ಸೌಹಾರ್ದತೆ ಇರುವ ಕಾರಣಕ್ಕೆ ಇಂತಹ ಕಾರ್ಯಕ್ರಮ ಸಂಘಟಿಸುವುದು ಸಾಧ್ಯವಾಯಿತು ಎಂದರು.
ರಂಗ ಕಲಾವಿದೆ ನಾಗರತ್ನಮ್ಮ, ವಕೀಲ ಗುಜ್ಜಲ್ ನಾಗರಾಜ ಮಾತನಾಡಿದರು. ಸೌಹಾರ್ದ ಕರ್ನಾಟಕದ ಜಿಲ್ಲಾ ಸಂಚಾಲಕ ಎ.ಕರುಣಾನಿಧಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ರಾಜ್ಯದ 23 ಜಿಲ್ಲೆಗಳಲ್ಲಿ ‘ಸೌಹಾರ್ದ ಭಾರತ’ ಕೃತಿ ಜನಾರ್ಪಣೆ ಏಕಕಾಲದಲ್ಲಿ ನಡೆದಿದೆ ಎಂದರು.

ಕೆ.ಲಕ್ಷ್ಮಣ್ಗೆ ಸನ್ಮಾನ: ಮಾಧ್ಯಮ ಪ್ರಶಸ್ತಿಗೆ ಪಾತ್ರರಾಗಿರುವ ನಗರದ ಹಿರಿಯ ಪತ್ರಕರ್ತ, ‘ಸಂಯುಕ್ತ ಕರ್ನಾಟಕ’ದ ಜಿಲ್ಲಾ ವರದಿಗಾರ ಕೆ.ಲಕ್ಷ್ಮಣ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂಘದ ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬ ನಾಯಕ, ಡಿಎಚ್ಎಸ್ ಮುಖಂಡ ಎಂ.ಜಂಬಯ್ಯ ನಾಯಕ, ಸಂಘದ ಉಪಾಧ್ಯಕ್ಷ ಸಿ.ಕೆ.ನಾಗರಾಜ, ಕಾರ್ಯದರ್ಶಿಗಳಾದ ಸುರೇಶ್ ಚವ್ಹಾಣ್ ಇತರರು ಇದ್ದರು. ಬಿ.ಮಹೇಶ್ ನಿರೂಪಿಸಿದರು. ಉಮಾಮಹೇಶ್ವರ ವಂದಿಸಿದರು.
The post ಡಾ. ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಕೃತಿ ಲೋಕಾರ್ಪಣೆ: ದೇಶದಲ್ಲಿ ಸೌಹಾರ್ದ ಕೆಡಿಸುವ ಯತ್ನ–ಎಚ್ಚರಿಕೆ ಅಗತ್ಯ -ಡಾ. ಕುಂ.ವೀ appeared first on Karnataka Kahale.
]]>The post ಬಾಲ್ಯದಲ್ಲಿ ಜೀತ ಮಾಡುತ್ತಾ ಅಕ್ಷರ ಕಲಿತ ಹೊಸಪೇಟೆಯ ಕೆ.ಲಕ್ಷ್ಮಣನಿಗೆ ಒಲಿದು ಬಂತು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ appeared first on Karnataka Kahale.
]]>
(ಸಿ.ಮಂಜುನಾಥ)
ಹೊಸಪೇಟೆ(ವಿಜಯನಗರ), ಜ. 10: ಬಡವರಿಗೆ ಮಕ್ಕಳು ಹೆಚ್ಚೆನ್ನುವಂತೆ ಹೊಸಪೇಟೆ ತಾಲೂಕಿನ
ತಿಮ್ಮಲಾಪುರ ಗ್ರಾಮದ ನಿಂಗಪ್ಪ ಮತ್ತು ಹನುಮವ್ವ ದಂಪತಿಗಳಿಗೆ ಬರೋಬ್ಬರಿ 14 ಜನ ಮಕ್ಕಳು! ಅದು 80ರ ದಶಕ…ಕಿತ್ತು ತಿನ್ನುವ ಬಡತನ ಜತೆಗೆ ಆ ವರ್ಷ ಬರಗಾಲ! ಕುಟುಂಬ ಸಲುಹಲು ಗುಳೇ ಹೋದದ್ದು ಕಂಪ್ಲಿ- ರಾಮಸಾಗರ ಸಮೀಪದ ಮುದ್ದಾಪುರ-೧೦ ಗ್ರಾಮಕ್ಕೆ! ಗ್ರಾಮದ ನೀರಗಂಟಿಯಾಗಿ ಕೆಲಸ ಆರಂಭಿಸಿ ಕುಟುಂಬ ನಿರ್ವಹಿಸುತ್ತಿದ್ದರು. ನಿಂಗಪ್ಪನಿಗೆ ಮನೆ ತುಂಬಾ ಮಕ್ಕಳಿದ್ದರೆ ಹೊಸಪೇಟೆಯ ಚಿತ್ತವಾಡ್ಗಿಯಲ್ಲಿದ್ದ ತರಕಾರಿ ಮಾರಿ ಹೊಟ್ಟೆ ತುಂಬಿಕೊಳ್ಳುತ್ತಿದ್ದ ತಂಗಿ ಸಣ್ಣ ದುರುಗಮ್ಮ ಇರುವ ಒಬ್ಬ ಮಗನನ್ನು ಮಕ್ಕಳಿಲ್ಲದ ತಳವಾರ ಕೇರಿಯಲ್ಲಿದ್ದ ದೊಡ್ಡಕ್ಕನ ಮನೆಯಲ್ಲಿ ಬಿಟ್ಟಳು.
ಮನೆ ಬೀಕೋ ಎನ್ನುತ್ತಿದ್ದಾಗ ಅಣ್ಣನ ನೆನಪಾಗಿ ಏಳೆಂಟು ವರ್ಷದ ಲಕ್ಷ್ಮಣನನ್ನು ನಾನು ಸಾಕುವೆ ಕಳುಹಿಸಿ ಕೊಡು ಎಂದು ಕೇಳಿಕೊಂಡಾಗ ಅಣ್ಣ ನಿಂಗಪ್ಪನಿಗೆ ಇಲ್ಲವೆನ್ನಲಾಗಲಿಲ್ಲ. 12 ನೇ ಮಗನಾಗಿದ್ದ ಲಕ್ಷ್ಮಣನನ್ನು ತಂಗಿಯ ಮಡಲಿಗೆ ಹಾಕಿದರು. ಹೀಗೆ ಚಿತ್ತವಾಡ್ಗಿ ಬಂದ ಲಕ್ಷ್ಮಣ ಅಣ್ಣನ ಮದುವೆಗೆ ಅಪ್ಪ ಸಾಲ ಮಾಡಿದ್ದಕ್ಕಾಗಿ ಮೂರು ವರ್ಷ ಒಬ್ಬರ ಮನೆಯಲ್ಲಿ ಜೀತಕ್ಕೆ ದುಡಿದರು. ವರ್ಷಕ್ಕೆ 150 ರೂ. ಉಡಲು ಬಟ್ಟೆ, ಊಟ ನೀಡುತ್ತಿದ್ದರು. ಜೀತ ಇದ್ದ ಮನೆಯಲ್ಲಿದ್ದ ದನಗಳನ್ನು ಮೇಯಿಸುವುದು, ಮೇವು ತರುವುದು ಬಾಲಕ ಲಕ್ಷ್ಮಣನ ದಿನ ನಿತ್ಯದ ಕಾಯಕ. ಹೀಗೆ ದನಕಾಯುತ್ತಿದ್ದ ಹುಡುಗ ವಿನೋಭಬಾವೆ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಕೆ. ಭಗವಂತರಾವ್ ಅವರ ಕಣ್ಣಿಗೆ ಬಿದ್ದದ್ದೇ ಕೇಳಿ ಬಿಟ್ಟರು…. ಏನಪಾ ಶಾಲೆಗೆ ಸೇರ್ತೀಯಾ ಅಂತಾ! ತಿಮ್ಮಲಾಪುರ ಶಾಲೆಯಲ್ಲಿ ಒಂದನೇ ತರಗತಿ ಓದಿದ್ದ ಹುಡುಗನ ಸಂತೋಷಕ್ಕೆ ಪಾರವೇ ಇರಲಿಲ್ಲ. ನೇರವಾಗಿ ನಾಲ್ಕನೇ ತರಗತಿಗೆ ಪ್ರವೇಶ ಪಡೆದು ಶಾಲೆಗೆ ಹೋಗಿ, ಓದಲು ಆರಂಭಿಸಿದ ಲಕ್ಷ್ಮಣ ನಿಲ್ಲಿಸಿದ್ದು ಪ್ರಸಿದ್ಧ ವಿಜಯನಗರ ಕಾಲೇಜಿನಲ್ಲಿ ಬಿ.ಎ ಪದವಿ ಪೂರೈಸಿದಾಗ! ಹಾಗಂತ ಶಾಲಾ ಕಾಲೇಜು ದಿನಗಳಲ್ಲಿ ಕಷ್ಟಗಳೇ ಇರಲಿಲ್ಲ ಎಂದರೆ ತಪ್ಪಾಗುತ್ತದೆ! ಹೌದು….ಎಸ್ ಎಸ್ ಎಲ್ ಸಿ, ಪಿಯುಸಿ ಮತ್ತು ಪದವಿ ಓದುವಾಗಲೂ ಬೆಳಗಿನ ಜಾವ ಮನೆ ಮನೆಗೆ ಪತ್ರಿಕೆ ಹಾಕುವುದು, ಎಂದಿನಂತೆ ಬೆಳಿಗ್ಗೆ-ಸಂಜೆ ಗದ್ದೆಗೆ ಹೋಗಿ ಮೇವು ತರುವುದು, ರಜೆಯ ದಿನಗಳಲ್ಲಿ ಕಬ್ಬು, ಬಾಳೆ ಕಡಿಯಲು ಹೋಗಿ ಹಣ ಸಂಪಾದಿಸುವುದು….. ಕಾಲೇಜು ಫೀಜು ಮತ್ತಿತರ ಖರ್ಚಿಗೆ ಹೊಂದಿಸಿ ಕೊಳ್ಳುವುದು….ಹೀಗೆ ಜೀವನ ನಡೆಯುತ್ತಿದ್ದಾಗ ಲಕ್ಷ್ಮಣನಿಗೆ 1993ರಲ್ಲಿ ಅದೃಷ್ಟ ಒದಗಿ ಬರುತ್ತದೆ. ಮನೆ ಮನೆಗೆ ಸಂಕ ಪತ್ರಿಕೆ ಹಾಕುತ್ತಿದ್ದ….ಲಕ್ಷ್ಮಣನಿಗೆ! ಸಂಯುಕ್ತ ಕರ್ನಾಟಕ ಮತ್ತು ಹಿಂದು ಪತ್ರಿಕೆಗಳ ಏಜೆಂಟ್ ರು ಕಾರಣಾಂತರಗಳಿಂದ ಏಜೆನ್ಸಿ ಬಿಡುವ ಸಂದರ್ಭ ಬರುತ್ತದೆ. ಇದೇ ವೇಳೆ ಹೊಸಪೇಟೆಗೆ ಬಂದಿದ್ದ ಹೆಸರಾಂತ ಪತ್ರಕರ್ತ, ಲೋಕಶಿಕ್ಷಣ ಟ್ರಸ್ಟ್ ನ ಟ್ರಸ್ಟಿ, ಸಂಪಾದಕ ಕೆ. ಶಾಮರಾವ್ ಅವರ ಪರಿಚಯವಾಗಿ ಸಂಯುಕ್ತ ಕರ್ನಾಟಕ(ಸಂಕ) ಪತ್ರಿಕೆಯ ಹೊಸಪೇಟೆ ನಗರದ ಏಜೆಂಟ್ ಆಗುತ್ತಾರೆ. ಅಂದು1200 ಪ್ರಸಾರವಿದ್ದ ಸಂಕ ಪತ್ರಿಕೆಗೆ ಸಾಲ ಸೋಲ ಮಾಡಿ 35 ಸಾವಿರ ಠೇವಣಿ ಹೊಂದಿಸುತ್ತಾರೆ.

1993 ರಿಂದ ಆರಂಭವಾದ ಸಂಕ ದೊಂದಿಗಿನ ಬಾಂಧವ್ಯ 2026 ರಲ್ಲೂ ಮುಂದುವರೆದಿದೆ.
1994ರಲ್ಲಿ ಏಜೆನ್ಸಿಯೊಂದಿಗೆ ಗೌರವ ಬಿಡಿ ಸುದ್ದಿಗಾರರಾಗಿ, 1996ರಲ್ಲಿ ತಾಲೂಕು ವರದಿಗಾರರಾಗಿ, ನಾಲ್ಕು ವರ್ಷಗಳ ಹಿಂದೆ ನೂತನವಾಗಿ ವಿಜಯನಗರ ಜಿಲ್ಲೆಯಾದಾಗ ಸಂಕ ಜಿಲ್ಲಾ ವರದಿಗಾರರಾಗಿ ನೇಮಕ ವಾಗುತ್ತಾರೆ. ಮೂರು ದಶಕಗಳಲ್ಲಿ ಜನಮುಖಿ ವರದಿಗಾರಿಕೆಯಿಂದ, ಸರಳ ಸಜ್ಜನಿಕೆ ವ್ಯಕ್ತಿತ್ವದಿಂದ ಜನಪ್ರಿಯರೂ ಆಗುತ್ತಾರೆ.
ಜೀತ ದುಡಿಯುತ್ತಿದ್ದ ಬಾಲಕ ಲಕ್ಷ್ಮಣರ ಅಕ್ಷರ ವ್ಯಾಮೋಹ, ಪತ್ರಿಕಾರಂಗಕ್ಕೆ ಸಲ್ಲಿಸಿದ ಗಣನೀಯ ಸೇವೆಗಾಗಿ 2025 ರ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಯೂ ಹುಡುಕಿಕೊಂಡ ಬಂದಿದೆ.
ಹಲವು ಉತ್ತಮ ವರದಿಗಳು ಸಮಾಜ, ಸಂಘ ಸಂಸ್ಥೆಗಳ ಗಮನ ಸೆಳೆದಿದ್ದು ದಶಕಗಳ ಹಿಂದೆಯೇ ಬಳ್ಳಾರಿಯ ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ನೀಡುವ ಡಾ.ಅಂಬೇಡ್ಕರ್ ಸ್ಮಾರಕ ಮಾಧ್ಯಮ ಪ್ರಶಸ್ತಿಗೆ ಲಕ್ಷ್ಮಣ ಭಾಜನರಾಗಿದ್ದಾರೆ. ಹೊಸಪೇಟೆ ಸೇರಿದಂತೆ ಜಿಲ್ಲೆಯ ಹಲವು ಸಂಘ ಸಂಸ್ಥೆಗಳು ಸತ್ಕರಿಸಿ ಗೌರವಿಸಿವೆ.

ತಾನು ಓದಿದ ವಿನೋಬಾಭಾವೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ತಮ್ಮ ಅವಧಿಯಲ್ಲಿ 21 ನೂತನ ಕೊಠಡಿಗಳನ್ನು ಸರಕಾರದಿಂದ ಮಂಜೂರು ಮಾಡಿಸಿ ನಿರ್ಮಿಸಿರುವುದು ನನ್ನ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಲಕ್ಷ್ಮಣ ಅವರು! ಸಮಾಜ ಸೇವೆ ಜತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿ ಕಳೆದ ನಾಲ್ಕು ವರ್ಷಗಳಿಂದ ವಿಜಯನಗರ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿಯಾಗಿ ಸಂಘಟನೆ, ಪತ್ರಕರ್ತರ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರತಿಷ್ಠಿತ ಮಾಧ್ಯಮ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ‘ಕರ್ನಾಟಕ ಕಹಳೆ ಡಾಟ್ ಕಾಮ್’ ಮಾತನಾಡಿಸಿದಾಗ ಆನಂದದಿಂದ ಕಣ್ಣೀರಾದ ಲಕ್ಷ್ಮಣ ಅವರು, ಬಾಲ್ಯದಲ್ಲಿ ಜೀತಮಾಡುತ್ತಿದ್ದ ನನಗೆ ಅಕ್ಷರದ ಮೂಲಕ ರಾಜ್ಯಮಟ್ಟದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಬಂದಿದೆ ಎಂದರೆ ನಂಬಲಾಗುತ್ತಿಲ್ಲ. ಮೂರು ದಶಕಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಸಂಕದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಪ್ರಶಸ್ತಿ, ಜವಾಬ್ದಾರಿಯನ್ನು ಹೆಚ್ಚಿಸಿದೆ. ಇನ್ನೂ ಉತ್ತಮವಾಗಿ ಕೆಲಸಮಾಡಲು ಸ್ಫೂರ್ತಿ ನೀಡಿದೆ ಎಂದರು. ಅಕ್ಷರ ವಂಚಿತ ಸಮುದಾಯದ, ಕಷ್ಟಗಳ ಸರಮಾಲೆಯಲ್ಲಿ ವಿದ್ಯೆ ಪಡೆದು ಇತರರಿಗೆ ಮಾದರಿಯಾದ ಕೆ.ಲಕ್ಷ್ಮಣ ಅವರಿಗೆ ಮತ್ತಷ್ಟು ಗೌರವಗಳು ಹುಡುಕಿಕೊಂಡು ಬರಲಿ ಎಂಬುದು ಕರ್ನಾಟಕ ಕಹಳೆ ಡಾಟ್ ಕಾಮ್ ನ ಹಾರೈಕೆ.

-ಸಿ. ಮಂಜುನಾಥ, ಸಂಪಾದಕರು: karnatakakahale.com, ಬಳ್ಳಾರಿ
The post ಬಾಲ್ಯದಲ್ಲಿ ಜೀತ ಮಾಡುತ್ತಾ ಅಕ್ಷರ ಕಲಿತ ಹೊಸಪೇಟೆಯ ಕೆ.ಲಕ್ಷ್ಮಣನಿಗೆ ಒಲಿದು ಬಂತು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ appeared first on Karnataka Kahale.
]]>The post ‘ಬರವಣಿಗೆ ಕೌಶಲ್ಯ ಕರಗತ ಮಾಡಿಕೊಳ್ಳಿ’ ಡಾ.ಎಸ್.ವೈ.ಸೋಮಶೇಖರ್ ಸಲಹೆ appeared first on Karnataka Kahale.
]]>
ತೆಕ್ಕಲಕೋಟೆ: ಪತ್ರಿಕೋದ್ಯಮದಲ್ಲಿ ಬರವಣಿಗೆ ಮಹತ್ವವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಬರವಣಿಗೆ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಹಂಪಿಯ ಕನ್ನಡ ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎಸ್.ವೈ.ಸೋಮಶೇಖರ್ ಹೇಳಿದರು.
ಹಂಪಿಯ ಕನ್ನಡ ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಾಗೂ ತೆಕ್ಕಲಕೋಟೆಯ ಶ್ರೀಮತಿ ಹೊನ್ನುರಮ್ಮ ದಿ.ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಟಿವಿ ಬರವಣಿಗೆ, ನಿರೂಪಣೆ ಹಾಗೂ ಟಿವಿ ಕಾರ್ಯಕ್ರಮ ನಿರ್ಮಾಣ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಬರೆಯುವ ಮೊದಲು ಅಧ್ಯಯನ ಅಗತ್ಯ. ಅಧ್ಯಯನಕ್ಕೆ ಆದ್ಯತೆ ನೀಡಬೇಕು. ಟಿವಿ ವೀಕ್ಷಿಸಬೇಕು, ರೇಡಿಯೊ ಆಲಿಸಬೇಕು, ಪತ್ರಿಕೆಗಳನ್ನು ಓದಬೇಕು. ದಿನಾಲೂ ಪತ್ರಿಕೆ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ಪತ್ರಿಕೆ ಮತ್ತು ಟಿವಿ ಬರವಣಿಗೆಯಲ್ಲಿ ಬಹಷ್ಟು ವ್ಯತ್ಯಾಸ ಇದೆ. ಪತ್ರಿಕೆ ಬರವಣಿಗೆಯಲ್ಲಿ
ಅಕ್ಷರ ಮಾತನಾಡಿದರೆ, ಟಿವಿಯಲ್ಲಿ ದೃಶ್ಯ(ವೀಡಿಯೊ) ಗಳು ಮಾತನಾಡುತ್ತವೆ. ಹೀಗಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಎರಡು ಮಾಧ್ಯಮಗಳ ಬರಣಿಗೆ ಬಗ್ಗೆ ತಿಳಿದು ಕೊಳ್ಳಬೇಕು. ಜೀವನದಲ್ಲಿಸಿಕ್ಕ ಅವಕಾಶವನ್ನು ಸಮರ್ಪಕ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅತಿಥಿ ಅಧ್ಯಾಪಕಿ ಪದ್ಮಾವತಿ ಕೆ.ಮಾತನಾಡಿ, ಪತ್ರಿಕೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿದ್ದು, ಓದುವ ಸಂದರ್ಭದಲ್ಲಿ ಚೆನ್ನಾಗಿ ಓದಬೇಕು. ಪ್ರತಿಯೊಂದು ವಿಷಯದ ಮಾಹಿತಿ ಪಡೆದುಕೊಳ್ಳಬೇಕು. ಮಾಧ್ಯಮ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಎಂದು ತಿಳಿಸಿದರು.
ಅಧ್ಯಯನ, ಭಾಷಾ ಜ್ಞಾನ, ಬರವಣಿಗೆ, ನಿರೂಪಣೆ, ಭಾಷಾಂತರ ಕಲೆ, ಮಾತನಾಡುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿತೆಕ್ಕಲಕೋಟೆಯ ಶ್ರೀಮತಿ ಹೊನ್ನುರಮ್ಮ ದಿ.ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಾದ ಶ್ರೀಮತಿ ವರಲಕ್ಷ್ಮಿ, ಡಾ.ರಾಜಣ್ಣ .ಡಿ ಹಾಗೂ ವಿಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.
—–

The post ‘ಬರವಣಿಗೆ ಕೌಶಲ್ಯ ಕರಗತ ಮಾಡಿಕೊಳ್ಳಿ’ ಡಾ.ಎಸ್.ವೈ.ಸೋಮಶೇಖರ್ ಸಲಹೆ appeared first on Karnataka Kahale.
]]>The post ಹೊಸಪೇಟೆಯಲ್ಲಿ ಸೆ.22ರಂದು ಹಬೊ ಹಳ್ಳಿ ಜೆಸ್ಕಾಂ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ appeared first on Karnataka Kahale.
]]>
ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿರುವ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಜೆಸ್ಕಾಂ) ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಚ್.ಟಿ ಮತ್ತು ಇ.ಎಚ್.ಟಿ ಗ್ರಾಹಕರ ಕುಂದುಕೊರತೆ ಸಭೆ ಸೆ. 22ರಂದು ಸೋಮವಾರ ಬೆಳಿಗ್ಗೆ 11ಗಂಟೆಗೆ ಹೊಸಪೇಟೆಯ ಜೆಸ್ಕಾಂನ ಕಾರ್ಯ ಮತ್ತು ಪಾಲನೆ ವಿಭಾಗದ ನಗರ ವಿಭಾಗ ಕಚೇರಿಯಲ್ಲಿ ನಡೆಯಲಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿಯ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವೃತ್ತದ ಸೂಪರಿಟೆಂಡೆಂಟ್ ಎಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಗ್ರಾಹಕರ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸಿ ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.
—–
The post ಹೊಸಪೇಟೆಯಲ್ಲಿ ಸೆ.22ರಂದು ಹಬೊ ಹಳ್ಳಿ ಜೆಸ್ಕಾಂ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ appeared first on Karnataka Kahale.
]]>The post ವಿಜಯನಗರ ನೂತನ ಜಿಲ್ಲಾಧಿಕಾರಿಯಾಗಿ ಕವಿತಾ ಎಸ್ ಮನ್ನಿಕೇರಿ ಅಧಿಕಾರ ಸ್ವೀಕಾರ appeared first on Karnataka Kahale.
]]>
ವಿಜಯನಗರ(ಹೊಸಪೇಟೆ), ಸೆ.10: ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಕವಿತಾ ಎಸ್ ಮನ್ನಿಕೇರಿ ಐಎಎಸ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ದಿವಾಕರ ಅವರು ಕವಿತಾ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು.
ಪರಿಚಯ: ಕೆಎಎಸ್ ಉತ್ತೀರ್ಣರಾದ ಬಳಿಕ 2007ರಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಮಂಡ್ಯದಲ್ಲಿ ಸೇವೆ ಆರಂಭಿಸಿದ ಕನ್ನಡತಿ ಕವಿತಾ ಮನ್ನಿಕೇರಿ ಅವರು ಬಳಿಕ ಸೇಡಂನ ಉಪವಿಭಾಗಾಧಿಕಾರಿಯಾದರು. ಯಾದಗಿರಿಯಲ್ಲಿ ಉಪವಿಭಾಗಾಧಿಕಾರಿಯಾಗಿ ಅನುಭವ ಗಳಿಸಿ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಕವಿತಾ ಅವರು 2012ರಲ್ಲಿ ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದರು. ವಿಜಯಪುರ ಎಡಿಸಿಗಳಾಗಿ ಬಳಿಕ ಮಹಿಳಾ ಆಯೋಗದ ಕಾರ್ಯದರ್ಶಿಯಾಗಿ, ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಕೆಎಸ್ಆರ್ಟಿಸಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಳಿಕ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ 2 ವರ್ಷ ಕರ್ತವ್ಯ ನಿರ್ವಹಿಸಿ ನಂತರ ಕೆಎಚ್ಬಿ ಆಯುಕ್ತರಾಗಿ ಆಡಳಿತದಲ್ಲಿ ಅಪಾರ ಅನುಭವಗಳಿಸಿದ್ದಾರೆ. ವಿಜಯನಗರ ಜಿಲ್ಲೆಯ ಪ್ರಥಮ ಮಹಿಳಾ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆಗೂ ಕವಿತಾ ಅವರು ಪಾತ್ರರಾಗಿದ್ದಾರೆ.
The post ವಿಜಯನಗರ ನೂತನ ಜಿಲ್ಲಾಧಿಕಾರಿಯಾಗಿ ಕವಿತಾ ಎಸ್ ಮನ್ನಿಕೇರಿ ಅಧಿಕಾರ ಸ್ವೀಕಾರ appeared first on Karnataka Kahale.
]]>The post ವಿಜಯನಗರ ಜಿಲ್ಲಾ ನೂತನ ಎಸ್ಪಿ ಜಾಹ್ನವಿ ಎಸ್ appeared first on Karnataka Kahale.
]]>ಈವರೆಗೆ ಎಸ್ಪಿಯಾಗಿದ್ದ .ಎಲ್. ಶ್ರೀಹರಿಬಾಬು ಅವರು ಅಧಿಕಾರ ಹಸ್ತಾಂತರಿಸಿದರು.
The post ವಿಜಯನಗರ ಜಿಲ್ಲಾ ನೂತನ ಎಸ್ಪಿ ಜಾಹ್ನವಿ ಎಸ್ appeared first on Karnataka Kahale.
]]>The post ನಮ್ಮ ಕೂಡ್ಲಿಗಿ ನೇರಳೆ ಹಣ್ಣು ತಿಂದಿರಾ ? -ಸಿದ್ಧರಾಮ ಕೂಡ್ಲಿಗಿ appeared first on Karnataka Kahale.
]]>ಸ್ವಲ್ಪ ಒಗರು, ಸಿಹಿ ತುಂಬಿದ ಈ ಹಣ್ಣು ಹೆಸರಿಗೆ ತಕ್ಕಂತೆ ನೇರಳೆ ಬಣ್ಣ. ಬಣ್ಣದ ಗಾಢತೆ ನೋಡಿದರೂ ಸಾಕು ಯಾರಿಗಾದರೂ ಬಾಯಲ್ಲಿ ನೀರೂರದೇ ಇರದು. ಗಾಢ ನೀಲಿ ಹಣ್ಣನ್ನು ತಿಂದೊಡನೆ ನಾಲಗೆಯ ಮೇಲೆ ನೀಲಿ ಬಣ್ಣವೇ ಬರುತ್ತದೆ. ಅಷ್ಟು ಬಣ್ಣ ಇದರದ್ದು. ಆದರೆ ನೈಸರ್ಗಿಕವಾಗಿಯೂ, ಯಾವುದೇ ರಾಸಾಯನಿಕ ಗೊಬ್ಬರ, ಔಷಧಿ ಸಿಂಪರಣೆ ಇಲ್ಲದಿರುವುದರಿಂದಲು ಈ ಹಣ್ಣು ಆರೋಗ್ಯಕ್ಕೆ ತುಂಬಾ ಹಿತಕರ.
ಪ್ರತಿವರ್ಷ ಹಣ್ಣುಗಳ ಸೀಸನ್ ಇದು. ಆಯಾ ಸೀಸನ್ ಗೆ ತಕ್ಕಂತೆ ನಾವೂ ಸಹ ಹಣ್ಣುಗಳನ್ನು ಸಮೃದ್ಧವಾಗಿಯೇ ತಿನ್ನುತ್ತೇವೆ. ಈಗ ಪ್ರತಿದಿನವೂ ಮನೆಯ ಬಳಿ ನೀರಲ ಹಣ್ಣು ಬರುತ್ತವೆ. ಧಂಡಿಯಾಗಿ ಆಯಾ ಸೀಸನ್ ಗೆ ತಕ್ಕಂತೆ ಹಣ್ಣು ತಿಂದುಬಿಡುತ್ತೇವೆ.
ನಾವು ಚಿಕ್ಕವರಿದ್ದಾಗ ಶಾಲೆಯ ಬಳಿ ಪುಟ್ಟಿಯಲ್ಲಿ ಕಡುನೀಲಿ ಬಣ್ಣದ ಈ ನೀರಲಹಣ್ಣನ್ನು ಮಾರಲು ಹೆಣ್ಣುಮಕ್ಕಳು ಬರುತ್ತಿದ್ದರು. ಐದು ಪೈಸೆಯೋ ಹತ್ತು ಪೈಸೆಯೋ ಕೊಟ್ಟರೆ, ಒಂದು ಕೊಳವೆಯೊಳಗೆ ನೀರಲಹಣ್ಣುಗಳನ್ನೂ, ಉಪ್ಪನ್ನು ಹಾಕಿ ಕುಲುಕಿ ಒಂದು ಕಾಗದದಲ್ಲಿ ಹಾಕಿಕೊಡುತ್ತಿದ್ದರು. ಅದೆಂಥ ರುಚಿ, ಸವಿ.
ನೇರಳೇ ಹಣ್ಣಿನಲ್ಲಿ ಔಷಧೀಯ ಗುಣವಿದೆ, ಸಕ್ಕರೆ ಕಾಯಿಲೆಗೆ ಒಳ್ಳೆಯದು ಎಂದು ವೈದ್ಯರೂ ಹೇಳಿರುವುದರಿಂದಲೇ ಈಗ ನೇರಳೆ ಹಣ್ಣಿಗೆ ಇನ್ನಿಲ್ಲದ ಬೇಡಿಕೆ. ಇಲ್ಲದಿದ್ದಲ್ಲಿ ನೇರಳೆಹಣ್ಣಿಗೆ ಅಷ್ಟೊಂದು ಬೇಡಿಕೆಯಿರಲಿಲ್ಲ. ಕೇವಲ 20ರಿಂದ 30 ರೂ.ಗಳಿಗೆ ಕೆ.ಜಿಯಂತೆ ಕೊಡುತ್ತಿದ್ದರು. ಈಗ 200 ರೂ.ಗಳಿಗೂ ಮಿಕ್ಕು ಕೆ.ಜಿಯಂತೆ ಮಾರಾಟವಾಗುತ್ತಿದೆ. ಇದಕ್ಕೆಲ್ಲ ಕಾರಣ ವೈದ್ಯರು. ಇದೇ ರೀತಿಯಲ್ಲಿಯೇ ಉಳಿದ ಕಾಡುಹಣ್ಣುಗಳಿಗೂ ವೈದ್ಯರು ಹೇಳಿಬಿಟ್ಟರೆ ಅವುಗಳಿಗೂ ಬೇಡಿಕೆ ಹೆಚ್ಚಿದರೆ ಅಶ್ಚರ್ಯವೇನಿಲ್ಲ.
ಅಧರಕ್ಕೂ ಉದರಕ್ಕೂ ಸಿಹಿಯಾಗಿರುವ ನೇರಳೆಹಣ್ಣು ಜೂನ್ ತಿಂಗಳಲ್ಲಿ ಸಮೃದ್ಧವಾಗಿ ದೊರೆಯುತ್ತದೆ. ಈಗ ನಮ್ಮ ಭಾಗದಲ್ಲಿ ಸಾಕಷ್ಟು ಹಣ್ಣು ದೊರೆಯುತ್ತಿದೆ.
ನಮ್ಮ ಕೂಡ್ಲಿಗಿ ತಾಲೂಕಿನ ಕಕ್ಕುಪ್ಪಿ, ಸೂಲದಹಳ್ಳಿಗಳಲ್ಲಿ ಹೇರಳವಾಗಿ ನೇರಳೆಹಣ್ಣುಗಳು ದೊರೆಯುತ್ತವೆ. ಇದರ ಹಿಂದೆ ಲಕ್ಷಾಂತರ ರೂ.ಗಳ ವಹಿವಾಟೂ ಇದೆ.
ಸುಮಾರು 30 ಮೀಟರ್ಗಳಷ್ಟು ಎತ್ತರ ಬೆಳೆಯುವ ನೇರಳೆಹಣ್ಣಿನ ಮರ ಸಿಜಿಗಿಯಮ್ ಕುಮಿನಿ ಎಂಬ ಸಸ್ಯವರ್ಗಕ್ಕೆ ಸೇರಿದುದು. ಈ ಮರ 100 ವರ್ಷಗಳವರೆಗೆ ಬಾಳುತ್ತದೆ. ಮೊದಲೆಲ್ಲ ರೈತರು ತಮ್ಮ ಹೊಲಗಳ ಬೇಲಿ ಸಾಲಿನಲ್ಲಿ ಇವುಗಳನ್ನು ಬೆಳೆಯುತ್ತ್ದಿದರು. ರೈತರಿಗೆ ಇದು ಪರ್ಯಾಯ ಬೆಳೆಯೂ ಆಗಿದೆ. ವರ್ಷಕ್ಕೊಮ್ಮೆ ಮಾತ್ರ ಹಣ್ಣುಗಳನ್ನು ಕೊಡುವುದರಿಂದ ಇದೀಗ ಇವುಗಳ ಸಂಖ್ಯೆ ಕಡಿಮೆಯಾಗಿದೆ. ಮಾರ್ಚ, ಎಪ್ರಿಲ್ನಲ್ಲಿ ನೇರಳೆಮರ ಹೂ ಬಿಡಲಾರಂಭಿಸುತ್ತದೆ. ನಂತರ ಹಸಿರು ಬಣ್ಣದ ಪುಟ್ಟಕಾಯಿಗಳು ಗೊಂಚಲು ಗೊಂಚಲಾಗಿ ಕಾಣಿಸಿಕೊಳ್ಳುತ್ತವೆ. ತಿಳಿಗುಲಾಬಿ ಬಣ್ಣಕ್ಕೆ ತಿರುಗುವ ಕಾಯಿಗಳು ಬೆಳೆದು ಹಣ್ಣಾಗತೊಡಗಿದಂತೆ ಗಾಢ ನೀಲ ಬಣ್ಣವನ್ನು ಹಾಗೂ ತೀವ್ರ ಹೊಳಪನ್ನು ಹೊಂದುತ್ತವೆ. ಮರದಲ್ಲಿಯೇ ಹಣ್ಣಾಗುವ ನೇರಳೆಹಣ್ಣುಗಳನ್ನು ಕೂಲಿಯಾಳುಗಳಿಂದ ಬಿಡಿಸಲಾಗುತ್ತದೆ.
ನಮ್ಮ ತಾಲೂಕಿನ ಕಕ್ಕುಪ್ಪಿಯೊಂದರಲ್ಲೇ ಸುಮಾರು 50 ಮರಗಳಿವೆ. ಜೂನ್ ತಿಂಗಳಾದ್ಯಂತ ಹಣ್ಣು ಕೊಡುವ ಒಂದು ಮರ ಒಟ್ಟು 2 ಕ್ವಿಂಟಾಲ್ನಷ್ಟು ಹಣ್ಣುಗಳನ್ನು ಕೊಡುತ್ತದೆ. ಪ್ರತಿದಿನವೂ 120-140 ಕೆ.ಜಿಯಷ್ಟು ಹಣ್ಣನ್ನು ಒಂದು ಮರ ಕೊಡುತ್ತದೆ. ಇತ್ತೀಚೆಗೆ ಮಳೆ ಕಡಿಮೆಯಾಗುತ್ತಿರುವುದರಿಂದ, ರೈತರು ಪರ್ಯಾಯ ಬೆಳೆಯಾಗಿ ನೇರಳೆಹಣ್ಣನ್ನು ಬೆಳೆಯಬಹುದಾಗಿದೆ.
ನೇರಳೆಹಣ್ಣುಗಳ ತಿರುಳನ್ನು ವೈನ್, ವಿನೆಗರ್, ಜೆಲ್ಲಿ, ಜಾಮ್ ತಯಾರಿಕೆಗೆ ಬಳಸಲಾಗುತ್ತದೆ. ಇದರ ಬೀಜಗಳನ್ನು ಆಯುರ್ವೇದ, ಯುನಾನಿ, ಚೀನಿ ಔಷಧಿಯಾಗಿಯೂ ಬಳಸಲಾಗುತ್ತದೆ. ಬೀಜದಲ್ಲಿ ಪ್ರೊಟೀನ್, ಕಾರ್ಬೊಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳಿರುತ್ತವೆ ಎಂದು ವೈದ್ಯರು ಹೇಳುತ್ತಾರೆ. ನೇರಳೆಹಣ್ಣಿನ ಪಾನೀಯ ಪಚನಕ್ರಿಯೆಗೆ ಉತ್ತಮವಾದುದಾಗಿದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿದ್ದವರು ಪ್ರತಿದಿನ ನೇರಳೆಹಣ್ಣುಗಳನ್ನು ತಿಂದರೆ ಕಾಯಿಲೆಯನ್ನು ನಿಯಂತ್ರಿಸಬಹುದೆಂದು ವೈದ್ಯವಿಜ್ಞಾನ ತಿಳಿಸುತ್ತದೆ. ಸವಿ, ಒಗರು ರುಚಿಯನ್ನು ಹೊಂದಿರುವ ನೇರಳೆಹಣ್ಣನ್ನು ಉಪ್ಪಿನೊಂದಿಗೆ ತಿಂದರೆ ಬಲುರುಚಿ.

-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ.
The post ನಮ್ಮ ಕೂಡ್ಲಿಗಿ ನೇರಳೆ ಹಣ್ಣು ತಿಂದಿರಾ ? -ಸಿದ್ಧರಾಮ ಕೂಡ್ಲಿಗಿ appeared first on Karnataka Kahale.
]]>The post ಬಳ್ಳಾರಿಯ 88ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಚರಿತ್ರೆ ಸೃಷ್ಟಿಸಲಿದೆ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ appeared first on Karnataka Kahale.
]]>
ಬೆಂಗಳೂರು,ಜು.1: ಬಳ್ಳಾರಿಯಲ್ಲಿ ಜರುಗಲಿರುವ 88 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹೊಣೆಗಾರಿಕೆ ನಮಗೆ ದೊರೆತಿರುವುದು ಅದೃಷ್ಟವಾಗಿದ್ದು, ಇದನ್ನು ಚಾರಿತ್ರಿಕವಾಗಿಸಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಅವರು ಹೇಳಿದರು.
ಮಂಗಳವಾರ ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಏರ್ಪಡಿಸಿದ್ದ 88 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡಿಗರ ಹೆಮ್ಮೆಯ ಉತ್ಸವವನ್ನು ಚಾರಿತ್ರಿಕವಾಗಿ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಇದಕ್ಕೆ ಜಿಲ್ಲಾಡಳಿತವು ಸಂಪೂರ್ಣ ಸಜ್ಜುಗೊಳಿಸಿ ಸರ್ಕಾರದಿಂದ ಬೇಕಾದ ಎಲ್ಲಾ ಸೌಲಭ್ಯ, ನೆರವು ದೊರಕಿಸಿ ಕೊಡಲಾಗುವುದು. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರ ಇನ್ನಷ್ಟು ನಿಕಟವಾಗಿ ಕೆಲಸ ಮಾಡಲಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ಮಾತನಾಡಿ, ಇಲ್ಲಿಯವರೆಗೆ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಐದು ಸಮ್ಮೇಳನಗಳು ನಡೆದಿದ್ದು, ಇದು ಆರನೆಯದು ಮತ್ತು ಸ್ವಾತಂತ್ರ್ಯ ನಂತರ ಎರಡನೆಯದಾಗಿದೆ. 68 ವರ್ಷಗಳ ನಂತರ ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದು ವಿವರಿಸಿದರು.
ಈಗಾಗಲೇ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ 88 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೂಕರ್ ಪುರಸ್ಕಾರದ ಮೂಲಕ ಜಾಗತಿಕ ಮನ್ನಣೆ ಪಡೆದಿರುವ ಬಾನು ಮುಷ್ತಾಕ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಇದಕ್ಕೆ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಅವರು ಪ್ರತಿಕ್ರಿಯಿಸಿ, ಈ ಆಯ್ಕೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಐದನೆಯ ಮಹಿಳೆ ಮತ್ತು ಮೊದಲ ಅಲ್ಪಸಂಖ್ಯಾತ ಮಹಿಳೆ ಆಗಲಿದ್ದಾರೆ ಎಂಬ ಸಂಗತಿ ಸಂತೋಷ ತರುವಂತಹದ್ದಾಗಿದೆ. ಹೆಚ್ಚಿನದಾಗಿ ಬಳ್ಳಾರಿಯಲ್ಲಿ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಹರ್ಷ ವ್ಯಕ್ತಪಡಿಸಿದರು.
ಬಳಿಕ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಇತಿಹಾಸ ವಿವರಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು, ಸಮ್ಮೇಳನಗಳಿರುವ ಚಾರಿತ್ರಿಕ ಪರಂಪರೆಗೆ ಒತ್ತು ನೀಡಬೇಕಿದೆ ಎಂದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, 88 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಬಳ್ಳಾರಿಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಇದಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಿ ಯಶಸ್ವಿಗೊಳಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 2012ರಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿದ್ದ ಸಚಿವ ಬಿ.ಝೆಡ್.ಜಮೀರ್ ಅಹ್ಮದ್ ಖಾನ್ ಅವರಿಗೆ ಸಾಂಕೇತಿಕವಾಗಿ ವಿಶೇಷ ಗುರುತಿನ ಚೀಟಿ ನೀಡಲಾಯಿತು.
ಬಳಿಕ ಸಚಿವರು ಮತ್ತು ಬಳ್ಳಾರಿ ಜಿಲ್ಲಾಡಳಿತದ ಅಧಿಕಾರಿಗಳು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಹೊರ ಮತ್ತು ಒಳ ಆವರಣ ವೀಕ್ಷಿಸಿ ಪರಂಪರೆ ಮತ್ತು ಆಧುನಿಕತೆ ಬೆಸೆದಿರುವ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ.ಎಂ. ಪಟೇಲ್ ಪಾಂಡು, ಮಾಧ್ಯಮ ಸಂಚಾಲಕರಾದ ಎನ್.ಎಸ್.ಶ್ರೀಧರಮೂರ್ತಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಸಚಿವರ ಆಪ್ತ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಇದ್ದರು.
———
The post ಬಳ್ಳಾರಿಯ 88ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಚರಿತ್ರೆ ಸೃಷ್ಟಿಸಲಿದೆ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ appeared first on Karnataka Kahale.
]]>The post ಮಕ್ಕಳ ಉತ್ತಮ ಭವಿಷ್ಯಕ್ಕೆ ಪಾಲಕರು ಅಧ್ಯಾಪಕರೊಂದಿಗೆ ಕೈ ಜೋಡಿಸಬೇಕು. -ಪ್ರಾಚಾರ್ಯ ಡಾ. ಹೆಚ್.ಕೆ ಶಂಕರಾನಂದ appeared first on Karnataka Kahale.
]]>ಕಾಲೇಜಿನ ಪ್ರಾಚಾರ್ಯ ಡಾ. ಹೆಚ್. ಕೆ. ಶಂಕರಾನಂದ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ನಿಮ್ಮ ಆಯ್ಕೆ ಯಾವ ವಿಭಾಗವಾದರೂ ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆಯಿರಲಿ ಎಂದು ಹೇಳಿದರು.
ನಿಮ್ಮ ಸಾಧನೆ ಇತರರಿಗೆ ಮಾದರಿಯಾಗ ಬೇಕೆಂದು ಕಿವಿ ಮಾತು ಹೇಳಿದರು.
ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಪಾಲಕ, ಪೋಷಕರಲ್ಲಿ ಮನವಿ ಮಾಡಿದರು.
ಸಂಸ್ಥೆಯ ಉಪಕಾರ್ಯದರ್ಶಿ ಟಿ. ಎಂ. ವಿಜಯ್ ಕುಮಾರ್ ಅವರು ಈ ಕಾಲೇಜಿನಲ್ಲಿ ಜ್ಞಾನಾರ್ಜನೆ ಪಡೆದಿರುವ ಹಲವಾರು ವಿದ್ಯಾರ್ಥಿಗಳು ಇಂದು, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಗುರುತಿಸಿ ಕೊಂಡಿದ್ದಾರೆ. ಬರೀ ಅಂಕಗಳನ್ನು ಗಳಿಸುವುದು ಗುರಿ ಆಗಿರದೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು. ಕಾಲೇಜಿನ ಉಪ ಪ್ರಾಚಾರ್ಯ ನಜಿರುದ್ದೀನ್ ಅವರು ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ನಾವು ನಡೆದುಕೊಳ್ಳುವ ರೀತಿ ನಮ್ಮನ್ನು ಗುರುತಿಸುವಂತೆ ಮಾಡುತ್ತದೆ ಎಂದು ತಿಳಿಸಿದರು.
ಪ್ಲೇಸ್ ಮೆಂಟ್ ಹಿನ್ನೆಲೆಯಲ್ಲಿ ವಿವಿಧ ಕಂಪನಿಗಳ ಬಗ್ಗೆ ಮಾಹಿತಿ ನೀಡಿದರು. ಸಮಯ ಪಾಲನೆ, ಸಮವಸ್ತ್ರದ ಬಗ್ಗೆ ಮಾರ್ಗದರ್ಶನ ಹಾಗೂ ಜೀವನದ ಮೌಲ್ಯಗಳ ಬಗ್ಗೆ ಉಪಕಥೆಗಳ ಮೂಲಕ ತಿಳಿಸಿದರು.
ಕಛೇರಿಯ ಅಧೀಕ್ಷಕ ನಿಂಗಪ್ಪ ಅವರು ಮಾತನಾಡಿದರು. ವೇದಿಕೆಯಲ್ಲಿ ವಿವಿಧ ವಿಭಾಗದ ಮುಖ್ಯಸ್ಥರಾದ ಧನಂಜಯ್, ಲಕ್ಷ್ಮೀರೆಡ್ಡಿ, ಚಂದ್ರಶೇಖರ್, ಮಹೇಶ್ ಕುಮಾರ್, ಯೋಗಾನಂದ, ಡಾ. ಶಿವರಾಜ್, ಗ್ರಂಥಪಾಲಕ ಯೋಗೀಶ್ವರ್ ಉಪಸ್ಥಿತರಿದ್ದರು.
ಉಪನ್ಯಾಸಕಿ ಯಮುನಾ ಕುಲಕರ್ಣಿ ಪ್ರಾರ್ಥಿಸಿದರು. ಉಪನ್ಯಾಸಕ ಗವಿಸಿದ್ದೇಶ ಹನುಮನಾಳ್ ಸ್ವಾಗತಿಸಿದರು. ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಶಿವರಾಜ್ ಹಾಗೂ ಯಮುನಾ ಅವರು ನಿರೂಪಿಸಿದರು. ಕಛೇರಿ ಅಧೀಕ್ಷಕ ಶಿವಕುಮಾರ ಅವರು ವಂದಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಮತ್ತು ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಮತ್ತು ಪಾಲಕ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
The post ಮಕ್ಕಳ ಉತ್ತಮ ಭವಿಷ್ಯಕ್ಕೆ ಪಾಲಕರು ಅಧ್ಯಾಪಕರೊಂದಿಗೆ ಕೈ ಜೋಡಿಸಬೇಕು. -ಪ್ರಾಚಾರ್ಯ ಡಾ. ಹೆಚ್.ಕೆ ಶಂಕರಾನಂದ appeared first on Karnataka Kahale.
]]>