ಅನುದಿನ ಕವನ-೧೭೦೧, ಕವಿ: ಮೇದರದೊಡ್ಡಿ ಹನುಮಂತ, ಕನಕಪುರ, ಕವನದ ಶೀರ್ಷಿಕೆ:ನಿಸರ್ಗದ ಗುಟುಕ ಚಹಾ!

ನಿಸರ್ಗದ ಗುಟುಕ ಚಹಾ!

ಗಡಿಗಳಿಲ್ಲದ ಬಟಾ ಬಯಲು
ಕಾಡಂಚಿನ
ಹೊಲದ ಬಳಿ
ಸೌದೆ ಪಿಳ್ಳೆಗಳ ಆಯ್ದು
ಹಸುವಿನಲಿ ಹಾಲು ಕರೆದು
ಬೆಂಕಿ ಹೊತ್ತಿಸಿ
ಹದವಾಗಿ
ಟೀ ಕಾಯಿಸಿ ಗುಟುಕು ಹೀರುವುದೆಂದರೆ
ವಾರೆವ್ಹಾ!
ರೋಮಾಂಚನ!

ಗ್ಯಾಸ್ ಸ್ಟೌ ಯಾಂತ್ರಿಕತೆಗೆ
ಒಗ್ಗಿಕೊಂಡ ದೇಹ ಮನಸು
ಚಹಾದ ನೊರೆಯೊಳಗೆ
ಮಿಂದಷ್ಟೇ.. ಖುಷಿ
ಮೇರೆ ಇಲ್ಲದ ಆತ್ಮಾನಂದ!

ನೈಸರ್ಗಿಕವಾಗಿ
ನಿಸರ್ಗ ಕೂಸಾಗ
ಮಾಡಿದ ಟೀಯ ಗಮಲಿನಲಿ
ಒಂದು ಕ್ಷಣ
ಪೂರ್ವಿಕರ ಬದುಕು ಕಾಣಿಸಿತು!
ಒಂದು ಕ್ಷಣ ಪರಿಪೂರ್ಣ
ಸಂತೃಪ್ತ ಭಾವ

✍️-ಮೇದರದೊಡ್ಡಿ ಹನುಮಂತ, ಕನಕಪುರ