ಅನುದಿನ ಕವನ-೧೯೦೭, ಕವಯತ್ರಿ: ವಿಶಾಲ ಆರಾಧ್ಯ, ಬೆಂಗಳೂರು

ಕವಿತೆಯ ದಿನಕ್ಕೊಂದು ಒಲವಕವಿತೆ

ಮಳೆಯಾಗಿದೆ
ಬಾ ಒಮ್ಮೆ ನೀನು ಅಂಗಳಕೆ ಕಾಲಿಟ್ಟು
ನೋಡು ಉದುರಿವೆಲೆ ತಂಗಾಳಿಗೆ ಮೈಬಿಟ್ಟು
ಸೋನೆ ಹನಿಯೇ ಮಲ್ಲಿಗೆಗೆ ಅಭಿಷೇಕ
ಘಮ್ಮೆನುವ ಕಂಪದು ತಂದಿಹುದು ಮೈಪುಳಕ

ಕಾದ ಧರಣಿಯ ಮೈ ಹನಿತಾಗಿ ಕೆರಳಿ
ಹರಡಿಹುದು ಸುತ್ತಲೂ
ಮಣ್ಣ ಘಮದೋಕುಳಿ
ಕರಚಾಚಿ ನೀಳಾಗಿ ಹಿಡಿಯೋಣು ಬಾರಾ
ಹನಿಗಳಿಗೆ ಮುಖಮಾಡಿ
ನೆನೆಯೋಣು ಬಾರಾ

ಬಳಸಿ ತೋಳಲಿ ತೋಳ ತೂಗೋಣ ಬಾ
ಕಣ್ಣ ಬಾಣಗಳ ಹೂಡಿ
ಕಾಯೋಣ ಬಾ
ಹನಿ ಹರಿದ ಕಿವಿಗಲ್ಲ ಕಚಗುಳಿಸಿವೆ ಬಾ
ಎದೆಯ ಭಾವಗಳ ಚೆಲ್ಲಿ
ಹಾಡೋಣ ಬಾ


-ವಿಶಾಲ ಆರಾಧ್ಯ, ಬೆಂಗಳೂರು
—–