ಹಳಗನ್ನಡ : ಅಭಿವ್ಯಕ್ತಿಯ ಕೌಶಲಗಳ ಶೋಧನೆ ಅಗತ್ಯ

ಶಂಕರಘಟ್ಟ(ಶಿವಮೊಗ್ಗ): ವರ್ತಮಾನದಲ್ಲಿ ಕನ್ನಡ ನಾಡು ನುಡಿ ಆತಂಕವನ್ನು ಎದುರಿಸುತ್ತಿದ್ದು, ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಇಂದು ಗಳಿಸಿಕೊಳ್ಳಬೇಕಿದೆ ಎಂದು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಭಾರತಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಹಳಗನ್ನಡ ಓದು’ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿರುವ ಇಂದಿನ ಸಂದರ್ಭ ಕನ್ನಡ ಮಾತ್ರವಲ್ಲ ಭಾರತೀಯ ಎಲ್ಲಾ ಭಾಷೆಗಳಿಗೂ ಆತಂಕ ತಂದು ಒಡ್ಡಿದೆ. ಸ್ಥಳೀಯ ಸಂಸ್ಕೃತಿ ನಾಡು-ನುಡಿಯ ಬಗೆಗೆ ಸರ್ಕಾರಕ್ಕೆ ಕಾಳಜಿ ಇಲ್ಲವಾಗಿದೆ. ಕುಂಟು ನೆಪಗಳನ್ನು ಒಡ್ಡಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ವಿದ್ಯಮಾನ ನಮ್ಮ ಪರಂಪರೆ ಇತಿಹಾಸಕ್ಕೆ ಅಪಚಾರ ಎಸಗಿದಂತೆ ಭಾಸವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಹಳಗನ್ನಡ ಕಾವ್ಯಗಳನ್ನು ಕೇವಲ ವಿಚಾರದ ನೆಲೆಯಲ್ಲಿ ನೋಡದೆ ತರಗತಿಯಲ್ಲಿ ಆಕರ್ಷಕವಾಗಿ ಮಂಡಿಸುವ ಕೌಶಲಗಳ ಬಗೆಗೆ ಚಿಂತಿಸಬೇಕಿದೆ. ಕನ್ನಡ ಭಾಷೆಯು ಅನ್ಯ ಭಾಷೆಗಳೊಟ್ಟಿಗೆ ಯಾವ ರೀತಿಯಾದ ಸಂಬಂಧವನ್ನು ಹೊಂದಿದೆ ಎಂಬುದನ್ನು ಹಾಗೂ ಕನ್ನಡ ಸಂಸ್ಕೃತಿಯ ಅಂತಸತ್ವವನ್ನು ಸರಿಯಾದ ಕ್ರಮದಲ್ಲಿ ಅರಿಯುವ ವಿಧಾನಗಳನ್ನು ಇಂದು ರೂಢಿಸಿಕೊಳ್ಳಬೇಕಿದೆ. ಹಳಗನ್ನಡ ಓದು ಅನ್ನುವುದು ತರಗತಿಯಲ್ಲಿ ಕಾವ್ಯವನ್ನು ಆಕರ್ಷಕವಾಗಿ ದಾಟಿಸುವ ಕೌಶಲಗಳ ಶೋಧನೆಗೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಾಜ್ಯಾದ್ಯಂತ ಪದವಿ ಕಾಲೇಜುಗಳ ಆಧ್ಯಾಪಕರಿಗೆ ಹಳಗನ್ನಡ ಓದು ಎನ್ನುವ ಕಾರ್ಯಕ್ರಮವನ್ನು ನಿರಂತರವಾಗಿ ಏರ್ಪಡಿಸುತ್ತಿದೆ. ಈ ಹಿನ್ನಲೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಿಗಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ್ ಎನ್. ಚಲವಾದಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಹಿತಿ ನೀಡಿದರು.

ಆಧುನಿಕ ಸಂದರ್ಭದಲ್ಲಿ ಭಾಷೆ, ಸಂಸ್ಕೃತಿ ಹಿಂದೆ ಸರಿಯದಂತೆ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಈ ಕಾರ್ಯಗಾರಗಳ ಮೂಲಕ ಮೂಡಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಭಾರತಿ ನಿರ್ದೇಶಕ ಪ್ರೊ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕರಾದ ಎಚ್. ಉಮೇಶ್, ಚಿತ್ರದುರ್ಗ ಜಿಲ್ಲಾ ಸಹಾಯಕ ನಿರ್ದೇಶಕರಾದ ಡಾ. ಬಿ.ಎಂ. ಗುರುನಾಥ್ ಉಪಸ್ಥಿತರಿದ್ದರು.

ನಂತರ ನಡೆದ ಗೋಷ್ಠಿಗಳಲ್ಲಿ ಪ್ರೊ. ಬಿ. ರಾಜಶೇಖರಪ್ಪ ಅವರು ‘ಶಿವಕೋಟ್ಯಾಚಾರ್ಯ ಪಂಪ ಮತ್ತು ರನ್ನ’ ಎನ್ನುವ ವಿಷಯದ ಕುರಿತು ವಿಚಾರ ಮಂಡಿಸಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ. ಬಸವರಾಜ ಕಲ್ಗುಡಿ ಅವರು  ‘ಪೊನ್ನ, ಜನ್ನ ಮತ್ತು ಕುಮಾರವ್ಯಾಸ’ ಎನ್ನುವ ವಿಷಯದ ಕುರಿತು ವಿಚಾರ ಮಂಡಿಸಿದರು. ಡಾ. ಎಸ್ ವಿ ಪುರುಷೋತ್ತಮ ಕಾರ್ಯಕ್ರಮ ನಿರೂಪಿಸಿದರು. ಡಾ. ನವೀನ್ ಮಂಡಗದ್ದೆ ವಂದಿಸಿದರು. ಡಾ. ರಾಜೇಂದ್ರ ಅವರು ಪ್ರಾರ್ಥನೆ ಮಾಡಿದರು

Leave a Reply

Your email address will not be published. Required fields are marked *