ಕೋಲಾರ: ದಲಿತ ಹೋರಾಟಗಾರ ಸಿ.ಎಂ.ಮುನಿಯಪ್ಪಆತ್ಮಚರಿತ್ರೆ ಕಾಲಡಿಯ ಕಣ್ಣು ದಲಿತ ಲೋಕ ಕಥನವಾಗಿ ಲೋಕಾರ್ಪಣೆ

ಹೋರಾಟಗಾರ, ಪತ್ರಕರ್ತ ಸಿ.ಎಂ.ಮುನಿಯಪ್ಪ

ಕೋಲಾರ: ದಲಿತ ಚಳವಳಿಯ ಕಥನದ ಕಾಲಡಿಯ ಕಣ್ಣು ಕೃತಿಯನ್ನು ಕೃತಿಕಾರ ಸಿ.ಎಂ.ಮುನಿಯಪ್ಪ ಶುಕ್ರವಾರ ತಮ್ಮ ಸಂಚಿಕೆ ಕಚೇರಿಯಲ್ಲಿ ಸರಳವಾಗಿ ಲೋಕಾರ್ಪಣೆ ಮಾಡಿದರು.

ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ ಪತ್ರಕರ್ತ ಸಿ.ಎಂ.ಮುನಿಯಪ್ಪರ ನಾಲ್ಕು ದಶಕಗಳ ಚಳವಳಿಯ ಬದುಕು ಹಾಗೂ ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ಚಾರಿತ್ರಿಕ ಹೋರಾಟದ ಕಥನವು ಕಗ್ಗತ್ತಲಲ್ಲಿದ್ದ ದಮನಿತ ಲೋಕದ ಒಡಲಾಳದ ಧ್ವನಿಯಾಗಿದೆ.

ಆತ್ಮ ಚರಿತ್ರೆಯ ರೂಪದಲ್ಲಿ ಅನುಭವದ ಕಥನವನ್ನು ಬರವಣಿಗೆಯ ಮೂಲಕ ದಾಖಲಿಸಲು ಮುಂದಾಗಿ ಅಂತಿಮವಾಗಿ ದಲಿತ ಚಳವಳಿಯ ಕಥನವಾಗಿ ಏಳು ಅಧ್ಯಾಯಗಳಲ್ಲಿ ಸಿ.ಎಂ.ಮುನಿಯಪ್ಪರ ಜೀವನ ಮತ್ತು ಚಳವಳಿಯ 140 ಅನುಭವದ ಪ್ರಸಂಗಗಳು 748 ಪುಟಗಳಾಗಿ ಹೊರ ಹೊಮ್ಮಿದೆ.

ಕಳೆದ 11 ವರ್ಷಗಳಿಂದಲೂ ವ್ಯಯಕ್ತಿಕ ಹಾಗೂ ಸಾಂಸ್ಕೃತಿಕವಾದ ಹಲವಾರು ಸಂಕಟ, ಸವಾಲುಗಳ ನಡುವೆ ಸರಿ ಸುಮಾರು 11 ವರ್ಷಗಳ ಕಾಲ ಪರಿಶ್ರಮ ಪಟ್ಟು ದಲಿತ ಲೋಕದ ಅನುಭವ ಕಥನಗಳನ್ನು ಬರೆದಿರುವ ಅವರು, ಕೋಲಾರ ಜಿಲ್ಲೆ ಮಾತ್ರವಲ್ಲದೆ ಕರ್ನಾಟಕದ ಇತರೆ ಜಿಲ್ಲೆಗಳ ದಲಿತ ಹೋರಾಟಗಳನ್ನು ದಾಖಲೀಕರಿಸಬೇಕೆಂಬ ಹಂಬಲದಲ್ಲಿ ಬೃಹತ್‌ ಕೃತಿಯು ರೂಪುಗೊಂಡಿದೆ.

ದೊಡ್ಡ ಕಾರ್ಯಕ್ರಮದ ಮೂಲಕ ಈ ಕೃತಿಯನ್ನು ಲೋಕಾರ್ಪಣೆಗೊಳಿಸುವ ಉದ್ದೇಶ ಇತ್ತಾದರೂ, ಕೃತಿಕಾರರ ಆರೋಗ್ಯದಲ್ಲಿನ ಏರುಪೇರಿನ ಕಾರಣ ಕೃತಿಯು ಸರಳವಾಗಿ ಕೃತಿಕಾರರಿಂದಲೇ ಜುಲೈ 10 ಶುಕ್ರವಾರ ಲೋಕಾಪರ್ಣೆಗೊಂಡಿದೆ.

ಸಾಹಿತಿಗಳು, ಚಿಂತಕರು, ದಲಿತ ಸಂಘಟನೆಯ ಒಡನಾಡಿಗಳು, ಮಿತ್ರರ ಪ್ರೀತಿಯ ಕೋರಿಕೆ ಮತ್ತು ನಿರೀಕ್ಷೆಯಂತೆ ಕಾಲಡಿಯ ಕಣ್ಣು ಕೃತಿ ಓದುಗರ ಮುಂದಿದ್ದು, ರಾಜ್ಯಾದ್ಯಂತ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಶನಿವಾರದಿಂದ ಮಾರಾಟಕ್ಕೆ ಸಿಗುತ್ತದೆ.

ಮಹಾರಾಷ್ಟ್ರದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ರ ಅರಿವಿನ ಮಾರ್ಗದರ್ಶನದಲ್ಲಿ ಮೈದಳೆದಿದ್ದ ದಲಿತ ಪ್ಯಾಂಥರ್ಸ್‌ ಬಿತ್ತಿದ ಹೋರಾಟ ಕಾವು ಕರ್ನಾಟಕಕ್ಕೂ ವ್ಯಾಪಿಸಿ ದಲಿತ ಸಂಘರ್ಷ ಸಮಿತಿಯಾಗಿ ರೂಪುಗೊಂಡು ದಮನಿತ ಸಮುದಾಯಗಳಲ್ಲಿ ಅದಮ್ಯ ಸ್ವಾಭಿಮಾನ ಮೂಡಿಬಂದು, ಜೀವನ ಸುಧಾರಣೆಗೊಂಡು ಸಬಲೀಕರಣ ಸಾಧ್ಯವಾಗಿರುವ ಕರ್ನಾಟಕ ಸಾಂಸ್ಕೃತಿಕ ಚರಿತ್ರೆಗೆ ಸೇರಿದ ಸುವರ್ಣ ಅಧ್ಯಾಯಗಳನ್ನು ಕಾಲಡಿಯ ಕಣ್ಣು ಕೃತಿ ಒಳಗೊಂಡಿದೆ.

ದಲಿತ ಸಂಘರ್ಷ ಸಮಿತಿ ಒಂದು ಸಾಂಸ್ಕೃತಿಕ ಸಂಘಟನೆಯಾಗಿ ಕರ್ನಾಟಕದಲ್ಲಿ 1975 ರಿಂದ 1990 ರವರೆಗೆ ಯಾವುದೇ ರೋಗ ರುಜಿನ, ಭಿನ್ನಾಭಿಪ್ರಾಯ, ಸ್ವಾರ್ಥ, ಸ್ವಜಾತಿ ಹಾಗೂ ಉಪಜಾತಿ ಮಮಕಾರಗಳಿಲ್ಲದೆ ಆರೋಗ್ಯದಿಂದ ಉತ್ತುಂಗದಲ್ಲಿತ್ತು. ಮುಂದಿನ ತಲೆಮಾರಿಗೆ ದಸಂಸ ಚರಿತ್ರೆ ತಿಳಿಯದಿದ್ದರೆ ತುಂಬಲಾರದ ನಷ್ಟವೆಂಬ ಭಾವನೆಯಲ್ಲಿ, ದಲಿತ ಚಳವಳಿ ಆರಂಭವಾಗಿ 50 ವರ್ಷಗಳು ಕಳೆದಿರುವ ಸಂದರ್ಭದಲ್ಲಿ ಸಿಎಂ ಮುನಿಯಪ್ಪ ರ ಆತ್ಮಕಥೆಯು ದಸಂಸ ಆತ್ಮಕಥೆಯಂತೆ ಹೊರಬಂದಿದೆ.

ದಲಿತ ಚಳವಳಿಯ ಮಹಾಸಮುದ್ರದಿಂದ ಒಂದು ಬೊಗಸೆಯಷ್ಟು ನೀರನ್ನು ಮಾತ್ರವೇ ತೆಗೆದುಕೊಂಡಿರುವೆ ಎನ್ನುವ ಕೃತಿಕಾರ ಸಿಎಂ ಮುನಿಯಪ್ಪರ ಅನಿಸಿಕೆಯು ದಲಿತ ಚಳವಳಿಯ ಬೀರಿದ ಸಾಮಾಜಿಕ ಪರಿಣಾಮಗಳ ಅಗಾಧತೆಯ ಸಂಕೇತವಾಗಿದೆ.

ದಲಿತ ಚಳವಳಿಯ ಕುರಿತು ಅನೇಕ ಅಪಕಲ್ಪನೆಗಳು, ಅಪ‍ವ್ಯಾಖ್ಯಾನಗಳು ಆಗುತ್ತಿರುವ ಈ ಸಂದರ್ಭದಲ್ಲಿ ಇವುಗಳ ಹಿಂದಿನ ಸತ್ಯಾಸತ್ಯತೆಯನ್ನು ಅರಿವುದಕ್ಕೆ ಕಾಲಡಿಯ ಕಣ್ಣು ಸಹಕಾರಿಯಾಗಲಿದೆ. ದಲಿತ ಚಳವಳಿಯ ನೈಜ ಕಥನ ಇಲ್ಲಿ ದಾಖಲಾಗಿದೆ. ಹೊಸ ತಲೆ ಮಾರಿನ ಹೋರಾಟಗಾರರು ಹಾಗೂ ಬರಹಗಾರರು ಈ ಕೃತಿಯ ಮೂಲಕ ನಮ್ಮ ನೆಲದ ಗತಚರಿತ್ರೆ ಹಾಗೂ ಸಾಮಾಜಿಕ ವಾಸ್ತವಗಳನ್ನು ಅರಿತುಕೊಂಡು, ತಮ್ಮ ಅರಿವನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಸಮಾಜದಲ್ಲಿ ದ್ವೇಷರಹಿತ ಸಾಮರಸ್ಯ ಹಾಗೂ ಸದ್ವಿವೇಕಗಳು ಸದೃಢವಾಗಿ ಬೆಳೆಯುವಂತಾಗಲಿ ಎಂಬ ಆಶಯವನ್ನು ಕಾಲಡಿಯ ಕಣ್ಣು ಕೃತಿಯು ಹೊಂದಿದೆ.

ಸಾವಿರಾರು ವರ್ಷಗಳಿಂದ ಅಕ್ಷರ ಸಂಸ್ಕೃತಿಯಿಂದಲೇ ವಂಚಿತವಾಗಿದ್ದ ಸಮುದಾಯದ ಕಥನವನ್ನು ಹೊಂದಿರುವ ಕಾಲಡಿಯ ಕಣ್ಣು ಕೃತಿಯನ್ನು ಕನ್ನಡ ನಾಡು ಪ್ರೀತಿಯಿಂದ ಸ್ಪೀಕರಿಸಿ, ಮುಕ್ತ ಮನಸ್ಸಿನಿಂದ ಓದಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಜನಪರ ಚಳವಳಿ ಚೇತನಗಳಿಗೆ ಬೆಂಬಲವಾಗಿ ನಿಲ್ಲಬೇಕೆಂದು ಕೃತಿಕಾರ ಸಿ.ಎಂ.ಮುನಿಯಪ್ಪ ಕೋರಿದ್ದಾರೆ.

Leave a Reply

Your email address will not be published. Required fields are marked *