ಅನುದಿನ ಕವನ-೨೧೪, ಕವಿ:ಡಾ.ಅಶೋಕ ಕುಮಾರ್ .ಎಸ್ ಮಟ್ಟಿ ಮೀನಕೇರಿ, ಯಾದಗಿರಿ ಕವನದ ಶೀರ್ಷಿಕೆ:ಗಾಳಿಗಿಲ್ಲ ಯಾವ ಜಾತಿ, ರಾಗ ಸಂಯೋಜನೆ&ಗಾಯನ: ವಿದ್ವಾನ್ ವಿದ್ಯಾಶಂಕರ, ಮಂಡ್ಯ

ಗಾಳಿಗಿಲ್ಲ ಯಾವ ಜಾತಿ

ಬೀಸುವ ಗಾಳಿಗಿಲ್ಲ ಯಾವ ಜಾತಿ
ಮನದಲ್ಲೇಕೆ ಜಾತಿ ಭೇದದ ಅನೀತಿ
ಮನುಷ್ಯರಲ್ಲೇಕೆ ಮೇಲು ಕೀಳು ಜಾತಿ.

ಬೀಸುವ ಗಾಳಿಗಿಲ್ಲ ಯಾವ ಜಾತಿ
ಮನಸಿನಲ್ಲೇಕೆ ಮತ್ತೆ ಜಾತಿ ಕಿತಾಪತಿ
ಒಬ್ಬನಲ್ಲವೆ ಪರಿಪಾಲಿಸುವ ಲೋಕಕಧಿಪತಿ.

ಬೀಸುವ ಗಾಳಿಗಿಲ್ಲ ಯಾವ ಜಾತಿ
ಹರಿವ ನೀರು ಕೇಳೋದಿಲ್ಲ ಅನುಮತಿ
ಮೇಲು ಕೀಳು ಸಮಾಜದ ಅಧೋಗತಿ.

ಬೀಸುವ ಗಾಳಿಗಿಲ್ಲ ಯಾವ ಜಾತಿ
ಮನಸು ತುಕ್ಕು ಹಿಡಿದರೆ ಅವನತಿ
ಶುದ್ಧ ನೀರಿನಂತಿರಲಿ ಮನುಜ ಮತಿ.

ಬೀಸುವ ಗಾಳಿಗಿಲ್ಲ ಯಾವ ಜಾತಿ
ಮನುಜ ಬಯಸುವುದಾದರೆ ಸದ್ಗತಿ
ಸಮಾನತೆಯಾಗಲಿ ಜೀವನ ಸಂಗಾತಿ.

ಬೀಸುವ ಗಾಳಿಗಿಲ್ಲ ಯಾವ ಜಾತಿ
ಭೇದಭಾವ ಅಳಿಯಲಿ ಜಾತಿ ಬೇರು ಕಿತ್ತಿ
ಬೆಳಕು ನೀಡಲಿ ಸಮಾನತೆಯ ದೀಪ ಹೊತ್ತಿ.

ಬೀಸುವ ಗಾಳಿಗಿಲ್ಲ ಯಾವ ಜಾತಿ
ಮೇಲೆ ನೋಡಿದರೆ ಬೆಳ್ಳಗಿರುವ ಹತ್ತಿ
ಅಂತರಾಳದಲ್ಲಿ ಕಪ್ಪನೆಯ ಬೀಜ ಒತ್ತಿ.

ಬೀಸುವ ಗಾಳಿಗಿಲ್ಲ ಯಾವ ಜಾತಿ
ಬೀಸಲು ಕೇಳುವುದಿಲ್ಲ ಅನುಮತಿ
ಸರ್ವರಿಗು ತೋರುವುದು ಸಹಾನುಭೂತಿ.

ಬೀಸುವ ಗಾಳಿಗಿಲ್ಲ ಯಾವ ಜಾತಿ
ಸಮಾಜದಲ್ಲೇಕೆ ಜಾತಿಯೆನ್ನುವ ಕೋತಿ
ಜಾತಿ ಭೇದಭಾವವಲ್ಲ ಜಗದ ನ್ಯಾಯನೀತಿ.

👆ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ. ಪ್ರಾಧ್ಯಾಪಕರು, ಸರಕಾರಿ ಪದವಿ ಕಾಲೇಜು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಯಾದಗಿರಿ. &
ಜಿಲ್ಲಾಧ್ಯಕ್ಷರು, ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ ಘಟಕ

*****

👆ರಾಗ ಸಂಯೋಜನೆ &                                     ಗಾಯನ: ವಿದ್ವಾನ್ ವಿದ್ಯಾಶಂಕರ,                        ಖ್ಯಾತ ಸಂಗೀತಗಾರರು, ಮಂಡ್ಯ

*****

Leave a Reply

Your email address will not be published. Required fields are marked *