ಅನುದಿನ‌ ಕವನ-೨೯೮, ಕವಿ: ಮಾಲತೇಶ ನಾ ಚಳಗೇರಿ, ಹಿರೇಹಳ್ಳಿ ಬ್ಯಾಡಗಿ , ಕವನದ ಶೀರ್ಷಿಕೆ: ತಿಳಿದು ಬಾಳು ತುಳಿದು ಬೇಡ

ತಿಳಿದು ಬಾಳು ತುಳಿದು ಬೇಡ


ಹಳಿದು ಬೆಳೆಯಬೇಕು ಎಂಬ
ಹುಂಬತನವು ಏತಕೆ?
ತುಳಿದು ಬಾಳಬೇಕು ಎಂಬ
ದುಷ್ಟತನವು ಏತಕೆ?


ಹಳಿದು ಬೆಳೆಯುವುದಕ್ಕಿಂತ
ಬೆಳೆಸಿ ಬೆಳೆಯ ಬೇಕಿದೆ
ತುಳಿದು ಬಾಳುವುದಕ್ಕಿಂತ
ತಿಳಿದು ಬಾಳ ಬೇಕಿದೆ


ಹೋಲಿಸಿಕೊಳುತ ಬದುಕುವುದು
ಹೊಲಸಿಗಿಂತ ಕೀಳಿದೆ
ಹೊಗಳಿ ಬಾಳುತಲಿರುವುದು
ಅದಕ್ಕಿಂತ ಕೀಳಿದೆ


ಬೊಗಳು ಶುನಕವೆಂದು ಕಚ್ಚ
ದೆಂದು ಜನರು ಕರೆವರು
ಉಗುಳಿ ಜಾಸ್ತಿ ಇರಲು ರೋಗ
ತಗಲಿ ನಾಶವಾಗ್ವರು


ಹುಳುಕು ಮನಸು ಕೊಳಕ ಬಿತ್ತಿ
ಸೆಳೆಯ ಬಯಸಿ ಸತ್ಯವ
ತಳುಕು ಮಾತು ಕುತ್ತು ತಂದು
ಹಳಿದು ಹಾಕಿ ನಿತ್ಯವು


ಗಂಜಿಗಾಗಿ ಅಂಜಿ ನಡೆದು
ಪಂಜಿನಂತೆ ಬದುಕು
ಮಂಜಿನಂತೆ ಕರಗೊ ಜೀವ
ಇದ್ದಲ್ ದೇವರ ಹುಡುಕು


ಬದುಕು ನಂದು ಬವಣೆ ನಂದು
ಇಂದು ಅಂದು ಮುಂದು
ಕೆದಕಬೇಡ ನನ್ನ ಹುಳುಕು
ತಂದು ಏನೊ ಒಂದು


ಕೈಯ ಹಿಡಿವ ದೇವನಿಹನು
ಎನ್ನ ಕಾಯ್ವನೆಂದೂ
ಮೈಯಿ ಮನವ ನೀಡಿ ಅವಗೆ
ನಿಷ್ಠೆ ಇಡುವೆನೆಂದೂ


ಖೂಳ ಜನರ ಕ್ಷಮಿಸಿ ಬಿಡು
ಬಾಳು ಹಸನವಾಗಲಿ
ತಾಳಿ ಬಾಳಿ ಸೋಲ ಕಳೆದು
ತೇಲಿ ಹರುಷ ತುಂಬಲಿ

-ಮಾಲತೇಶ ನಾ ಚಳಗೇರಿ
ಜಿ ಎಚ್ ಎಸ್, ಹಿರೇಹಳ್ಳಿ ಬ್ಯಾಡಗಿ
ಹಾವೇರಿ (ಜಿ)

Leave a Reply

Your email address will not be published. Required fields are marked *