ಅನುದಿನ ಕವನ-೧೬೩೮, ಕವಿ: ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ:ಗಿಳಿ ಶಕುನ

ಗಿಳಿ ಶಕುನ

ಹೊಸ ಕವಿತೆಯ ಸಾಲುಗಳಲ್ಲಿ
ನನ್ನವೇ ಹಳೆಯ ಕವಿತೆಯ ಪದಗಳು
ಮತ್ತೆ ಮತ್ತೆ ಮರುಕಳಿಸಿದಾಗ
ಓದುಗರು ಕರೆ ಮಾಡಿ ತಿದ್ದುತ್ತಾರೆ

ಕವಿತೆಯನ್ನು
ಸುಪ್ತ ಪ್ರಜ್ಞೆಯಲ್ಲಿ ಬರೆಯಬೇಕು;
ಪ್ರಜ್ಞಾ ಪೂರ್ವಕವಾಗಿ ತಿದ್ದಬೇಕು:

ಕವಿ ಮಿತ್ರ ಗದರುತ್ತಾನೆ!

ಈಗೀಗ ಮರೆವು ;

ನಾಲಿಗೆ ತುದಿಯಲ್ಲಿರುವ
ಹಳೆಯ ಗಾಯಕನ ಹೆಸರು
ಥಟ್ಟನೇ ನೆನಪಾಗುವುದೇ ಇಲ್ಲ !

ಹಳೆಯ ಜೋಕುಗಳನ್ನೇ ಮತ್ತೆ
ಮತ್ತೆ ಹೇಳಿ ನಗೆಪಾಟಲಿಗೀಡಾಗಿದ್ದೇನೆ
ಎಷ್ಟೋ ಸಲ!

ನೆನಪು ಉದ್ದೀಪಿಸಲು ವೈದ್ಯರು
ಸೂಚಿಸಿದ ಗುಳಿಗೆ ಸೇವಿಸುವುದನ್ನೂ
ಕೆಲವೊಮ್ಮೆ ಮರೆತು ಬಿಡುತ್ತೇನೆ !

ಬೆಂಗಳೂರಿನ ರೈಲು
ಹತ್ತುವ ಬದಲು ಮಂಗಳೂರಿನ
ರೈಲು ಹತ್ತಿ ಒಮ್ಮೆ ಬಲು ಫಜೀತಿಯಾಗಿತ್ತು!

ಬಿಡಿ ,ಈಗೆಲ್ಲಾ ಅವು ಯಾಕೆ
ನಿಮಗೆ ಸುಮ್ಮನೆ !

ಕಾಲ ಬಹಳಷ್ಟು ಸರಿದಿದೆ;
ಬರಿಗಾಲಿನಲಿ ನಡೆದ ಹಳೆಯ ಕಾಲಿನ ಗಾಯಗಳನ್ನು ಕಾಲವೇ ವಾಸಿ ಮಾಡಿದೆ:
ಹೊಸ ಗಾಯಗಳ ಭಯಕೆ
ದುಬಾರಿ ಚಪ್ಪಲಿ ಧರಿಸಿರುವೆ!

ಸುಳ್ಳು ಹೇಳಿದರೆ ಪಾಪ
ತಗಲುತ್ತದೆ; ಸತ್ಯ ನುಡಿದರೆ ಬೆಂಕಿ
ತಾಗುತ್ತದೆ:

ಪರಿಚಿತ ದಾರಿಯೂ
ಅಪರಿಚಿತವಾಗುವ ಈ ವಯಸಿನಲಿ!

ಕೈ ಹಿಡಿಯಬೇಕಿದ್ದವಳೊಬ್ಬಳು
ಕೈ ಕೊಟ್ಟ ಆ ಗಳಿಗೆಯನ್ನು ಮರೆವ
ದಾರಿಗಳ ಹುಡುಕುತ್ತ
ಗಿಳಿ ಶಕುನದವನಿಗೆ ನನ್ನ ಅಂಗೈ ಒಪ್ಪಿಸಿ
ಕುಳಿತಿರುವೆ
ನಿನಗೆ ಬೇಕಾದ ಸಂಪತ್ತು ಕೊಡುವೆ
ದೊರೆಯೇ !
ಹೇಳು ! ಹೇಳು ನಿಜ ಹೇಳು !
ಅವಳ ಹೆಸರು ಯಾವಾಗ ಮರೆಯುತ್ತೇನೆ
ಸರಿಯಾಗಿ ಹೇಳು!


-ಎಲ್ವಿ(ಡಾ. ಲಕ್ಷ್ಮಣ ವಿ.ಎ)  ಬೆಂಗಳೂರು
—–