ಅನುದಿನ ಕವನ-೧೮೬೪, ಕವಿ:ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ:ಲ್ಯಾಂಡ್ ಲಾರ್ಡ್….

ಲ್ಯಾಂಡ್ ಲಾರ್ಡ್….

ಬಡವನೆದೆಯ ಬೆಂಕಿ ಜ್ವಾಲೆ ಆರದು
ಉಕ್ಕಿ ಹರಿದ ನೆಲದ ಲಾವಾರಸವದು
ಯಾರು ಏನೇ ಅಂದರೂ
ಮುಂದೆ ನಾವು ನಡೆವೆವು
ಭೂಮಿಗಾಗಿ ನಮ್ಮ ಹೋರಾಟ
ನಡೆಯುತ್ತಲೇ ಇದೆ ನಮ್ಮ ಕಾದಾಟ…

ಜಾತಿ ಶೋಷಣೆ
ಮೇಲುಕೀಳೆಂಬ ಧೋರಣೆ
ದೇವದಾಸಿ ಪದ್ದತಿ
ಜಾತಿ ಪದ್ದತಿ
ಎಲ್ಲದಕ್ಕೂ ಮೈಯೊಡ್ಡಿ ನಿಂತಿದ್ದ ಜನ
ಸಂವಿಧಾನದ ನೆರಳಲ್ಲಿ ಈಗಾ ಬದುಕಿದ್ದಾರೆ…

ಈ ಭೂಮಿಗೆ ಒಡೆಯರಾಗಿದ್ದವರು
ಮೋಸ ವಂಚನೆಗೆ ಸಿಕ್ಕಿ
ಜಾತಿಯ ಹೆಸರಿನಲ್ಲಿ ಕೀಳೆಂಬ ಹಣೆಪಟ್ಟೆ ಹೊತ್ತು
ಊರ ಹೊರಗಿದ್ದು ಅಸಮತೆಯಿಂದ
ಉಸಿರಾಡಲು ಒದ್ದಾಡಿ ಬದುಕಿದ್ದ ಜನ
ಈಗಾ ಸಂವಿಧಾನದ ನೆರಳಲ್ಲಿ ಉಸಿರಾಡುತ್ತಿದ್ದಾರೆ…

ನೀರಿಲ್ಲದೆ ನೆರಳಿಲ್ಲದೆ
ಒಪ್ಪೊತ್ತಿನ ಕೂಳಿಗೂ ಗತಿ ಇಲ್ಲದೆ
ಬಿಸಿಲು ಬಿರುಗಾಳಿಗೆ
ಚರ್ಮವ ಸೊಕ್ಕುಗಟ್ಟಿಸಿ
ಸೂರಿಲ್ಲದೆ ಮಾರಿಲ್ಲದೆ
ಪಾದವ ಸವೆಸಿ
ನೆತ್ತಿ ಸುಡುವ ಸೂರ್ಯನ ಬಿಸಿಯ
ಮೈಗೆ ಕುಡಿಸಿ ನರಳಿ ಬದುಕಿದ್ದ ಜನ
ಈಗಾ ಬಾಬಾ ಸಾಹೇಬರ‌ಕಾರಣಕ್ಕೆ
ನೆಮ್ಮದಿಯಿಂದ ಜೀವಿಸುತ್ತಿದ್ದಾರೆ….


-ಸಿದ್ದು ಜನ್ನೂರ್, ಚಾಮರಾಜನಗರ