ಅನುದಿನ ಕವನ-೧೯೦೧, ಕವಿ:ಜಬೀವುಲ್ಲಾ ಎಂ. ಅಸದ್, ಹಿರಿಯೂರು, ಕಾವ್ಯ ಪ್ರಕಾರ: ಗಜಲ್

ಗಜಲ್

ಇರಲಿಲ್ಲಿ ಇಲ್ಲವೊಂದು ನನಗಿಲ್ಲಿ ಯಾವ ಸರಿ ಕಾರಣವು
ನೀನಿರದೆ ಬಾಳಿನಲಿ ನೆಪವೊಂದು ಹುಡುಕುತಿದೆ ಮನವು

ಪಂಜರ ಮುರಿದರು ಹಾರದೆ ಹಕ್ಕಿ ಇಲ್ಲಿಯೇ ಉಳಿದಿದೆ ಏಕೋ
ಬಂಧನವೆ ಹಿತವಾಗಿ ನೀಲ ಬಾನಾಗಿದೆ ಈಗ ನೋವು

ಏನಿಲ್ಲ, ಏನಿದೆಯೋ, ಅದಾರ ಕೇಡು ದೃಷ್ಟಿ ತಾಗಿತೊ ಏನೋ
ಕಂಡ ಕನಸುಗಳ ಕನ್ನಡಿ ಕಣ್ಣ ಮುಂದೆಯೇ ಚುರಾಯಿತು ಹಲವು

ಕೊಂದುಕೊಳ್ಳಲಾಗದ ಪ್ರೀತಿ ಅಣುಅಣುವಾಗಿ ಕೊಲ್ಲುತಿದೆ ನನ್ನನೇ
ಇರದ ಭಾಗ್ಯವಾ ನೆನೆದು ನಿಲ್ಲದಾಗಿದೆ ಆಳುವು

ಕಣ್ಮುಚ್ಚಿ ಕೂತರೆ ನೀನು ಲೋಕಕೆ ಕತ್ತಲಾಗದು ಅಸದ್
ನಿಜ ಗೊತ್ತಿದ್ದು ನಗುತಿದೆ ನೋಡು ಸಂಜೆಗೆ ಸಾಯುವ ಹೂವು

◼️

-ಜಬೀವುಲ್ಲಾ ಎಂ. ಅಸದ್, ಹಿರಿಯೂರು
—–