ಪತ್ರಕರ್ತರ ಬೇಡಿಕೆಗಳಿಗೆ ಸದಾ ಸ್ಪಂದನೆ: ನಿಕಟಪೂರ್ವ ಸಿಎಂ ಸಿದ್ದರಾಮಯ್ಯಗೆ ಕೆಯುಡಬ್ಲ್ಯೂಜೆ ಕೃತಜ್ಞತೆ

ಬೆಂಗಳೂರು: ತಮ್ಮ ಅಧಿಕಾರವಧಿಯಲ್ಲಿ ಪತ್ರಕರ್ತರ ಬೇಡಿಕೆಗಳಿಗೆ ಸದಾ ಸ್ಪಂದಿಸುತ್ತಿದ್ದ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಧನ್ಯವಾದಗಳನ್ನು ತಿಳಿಸಿದೆ.

ಗೃಹ ಕಚೇರಿ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ಸಿದ್ದರಾಮಯ್ಯ ಅವರಿಗೆ ಹೂಗುಚ್ಚ ನೀಡಿ ಕೆಯುಡಬ್ಲೂೃಜೆ ಕೃತಜ್ಞತೆ ಸಲ್ಲಿಸಿದರು.

ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪತ್ರಕರ್ತರ ಬೇಡಿಕೆಗಳನ್ನು ಸಂಯಮದಿಂದ ಆಲಿಸಿ ನಿಮ್ಮ ಸಲಹೆಗಾರರಾಗಿದ್ದ ಕೆ.ವಿ.ಪ್ರಭಾಕರ್ ಮೂಲಕ ಈಡೇರಿಸುವ ಪ್ರಯತ್ನ ಮಾಡಿರುವುದನ್ನು ಸಂಘ ಮರೆಯುವುದಿಲ್ಲ ಎಂದು ಅವರಿಗೆ ತಿಳಿಸಿದರು.

38ನೇ ದಾವಣಗೆರೆ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಘೋಷಿಸಿದ್ದೀರಿ. ತುಮಕೂರಿನಲ್ಲಿ ನಡೆದ 39ನೇ ರಾಜ್ಯ ಸಮ್ಮೇಳನದಲ್ಲಿ ಪತ್ರಕರ್ತರಿಗಾಗಿ ಮುಖ್ಯಮಂತ್ರಿಗಳ ಆರೋಗ್ಯ ಸಂಜೀವಿನಿ ಯೋಜನೆಯನ್ನು ಘೋಷಿಸಿ ಜಾರಿಗೆ ನೀಡಿದ್ದೀರಿ ಎನ್ನುವುದನ್ನು ಅವರಿಗೆ ನೆನಪಿಸಿದಾಗ, ನನ್ನ ಜವಬ್ದಾರಿ ಇದ್ದುದರಿಂದ ಮಾಡಿದ್ದೇನೆ. ನಿಮಗೆಲ್ಲ ಒಳ್ಳೆಯದಾಗಲಿ ಎಂದು ಸಿದ್ದರಾಮಯ್ಯ ಹೇಳಿದರು.

ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಯೋಜನೆ ಜಾರಿಗೆ ಅಡ್ಡಿಯಾಗಿದ್ದ ಕಠಿಣ ಷರತ್ತುಗಳನ್ನು ತೆಗೆದು, ನಿಯಮಾವಳಿ ಸರಳೀಕರಣ ಮಾಡಬೇಕು ಎಂದು ಬೀದರನಲ್ಲಿ ನಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಒತ್ತಾಯಕ್ಕೆ ಸ್ಪಂದಿಸಿದ್ದ ತಾವು, ಅದೇ ವೇದಿಕೆಯಲ್ಲಿ ಕಠಿಣ ಷರತ್ತುಗಳನ್ನು ಕೈಬಿಡುವುದಾಗಿ ಭರವಸೆ ನೀಡಿದ್ದೀರಿ. ಹಾಗೆಯೇ ನಿಮ್ಮ ಅಧಿಕಾರವಧಿ ಕೊನೆಯಲ್ಲಿ ಆದೇಶ ಮಾಡಿದ್ದು, ಈಗ ನಿಯಮಾವಳಿ ಸರಳೀಕರಣವಾಗಿದೆ ಎಂದು ತಿಳಿಸಿ ಶಿವಾನಂದ ತಗಡೂರು ಧನ್ಯವಾದಗಳನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಎಚ್.ಎನ್.ನಾಗಮೋಹನದಾಸ್ ಅವರು, ಲೇಬರ್ ಯೂನಿಯನ್ ಆಗಿರುವ ಕೆಯುಡಬ್ಲೂೃಜೆ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಅವರಿಗೂ ತಿಳಿಸಿ ಪ್ರಶಂಸೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *