ಅನುದಿನ ಕವನ-೧೬೬೬, ಹಿರಿಯ ಕವಿ: ಶ್ರೀನಾಥ್ ರಾಯಸಂ, ಬೆಂಗಳೂರು, ಕವನದ ಶೀರ್ಷಿಕೆ:ಹೇಗೆ ಬರೆಯಬೇಕು ಕವಿತೆ ?!

ಹೇಗೆ ಬರೆಯಬೇಕು ಕವಿತೆ ?!

ಕವಿತೆ ಬರೆಯಬೇಕು,

ಬರೆದದ್ದು ಎಲ್ಲರೂ ಓದುವಂತಿರಬೇಕು

ಓದಿ ಮಲುಕು ಹಾಕುವಂತಿರಬೇಕು

ರಮ್ಯತೆ ಇರಬೇಕು
ರಮ್ ಕುಡಿದಂತಿರಬೇಕು

ಅಸಹ್ಯವಾಗಬಾರದು, ಅಶ್ಲೀಲವಿರಬಾರದು

ಹೊಗಳಿರಬೇಕು,
ನೇರ ಟೀಕೆಯಂತಿರಬಾರದು

ಓದಿದವರೆಲ್ಲ
ಇಂಥದು ನನಗೂ ಇರಬೇಕು
ಅನ್ನುವಂತಿರಬೇಕು

ಆತುರದಲ್ಲಿ
ಕವಿತೆ ಗದ್ಯದಂತಾಗಬಾರದು
ಗದ್ಯ ಬಂದರೂ ಕೂಡ ಕವಿತೆಯ ಸಾಲಾಗಿ ನಿಲ್ಲಬೇಕು;

ಇಷ್ಟೆಲ್ಲ ಹೇಳುತ್ತಿರುವ ನಾನು
ಕವಿಯೂ ಅಲ್ಲ
ವಿಮರ್ಶಕಳೂ ಅಲ್ಲ,
ನಿನ್ನ ಓದುಗಳೂ ಅಲ್ಲ
ನಾನೇ ಒಂದು ಕವಿತೆ
ನಿನ್ನಲ್ಲಿ ಸ್ಪೂರ್ತಿ ತುಂಬುವ ಪ್ರೇಮಮತ್ತೆ!

-ಶ್ರೀನಾಥ್ ರಾಯಸಂ, ಬೆಂಗಳೂರು
—–