ಅನುದಿನ ಕವನ-೧೫೦೭, ಕವಿ: ಲಕ್ಷ್ಮಣ ಕೆ.ಪಿ, ಬೆಂಗಳೂರು, ಕವನದ ಶೀರ್ಷಿಕೆ: ಮನವೆಲ್ಲವೂ ಬಯಲಾಗಿದೆ

ಮನವೆಲ್ಲವೂ ಬಯಲಾಗಿದೆ

ಮನವೆಲ್ಲವೂ ಬಯಲಾಗಿದೆ
ಕಣ್ಣಂಚ ನೋಟವೇ
ಎದೆಪದಕೆ ಪೀಠಿಕೆ
ಉಸಿರೊಂದು ಕೊಳಲಾ ಹುಡುಕಿದೆ

ಪ್ರೀತಿ ಪರಿಷೆ ಎದೆಯಲ್ಲಿ
ತೇಲಿ ತೇರು ರಂಗೋಲಿ
ಎದೆ ತಮಟೆ ಗಸ್ತಿಗೆ
ನಿನ್ನ ನೋಟ ಮತ್ತಿಗೆ
ಎದೆ ಕೋಡಿ ಹರಿದೂ ಹಾಡಿದೆ

ರಾಗಿ ಹೊಲದ ಬಯಲಲ್ಲಿ
ಹುಚ್ಚಳ್ಳು ಹೂಬಳ್ಳಿ
ತೆನೆ ತೆನೆಯು ತೂಗಿದೆ
ನಿನ್ನ ಹಾಡೆ ಹಾಡಿದೇ
ನನ್ನ ಪೈರು ನೀನೆ ಅಲ್ಲವೇ

ಕೋಡಿಹಳ್ಳಿ ಬೀದಿಯಲಿ
ನೀ ನಡೆವ ಹಾದಿಯಲಿ
ನಾ ನಡೆಯಲಾರೆನು
ನಿನ್ನ ಮುಟ್ಟಲಾರೆನು
ನನ್ನ ಜಾಗ ಬೇರೆ ಅಲ್ಲವೇ..

ಆಕಾಶದಲ್ಲಿ ಚುಕ್ಕಿಯಂತೆ ನೀನು
ಸೇರುವಾಸೆ ಮಾಡಿದೆ
ಬಯಸಿ ತಪ್ಪು ಮಾಡಿದೆ
ನನ್ನ ಹಾಡು ಬೇರೆ ಅಲ್ಲವೇ..


-ಲಕ್ಷ್ಮಣ ಕೆ.ಪಿ, ಬೆಂಗಳೂರು
——

Leave a Reply

Your email address will not be published. Required fields are marked *