“ಇದು ನಮ್ಮ ನಿಮ್ಮದೇ ಬದುಕಿನ ಯಕ್ಷಪ್ರಶ್ನೆಗಳ ನಿತ್ಯ ಸತ್ಯ ಕವಿತೆ. ಯುಗ ಯುಗಗಳ ಜಗದ ಮನುಜರ ವಿಸ್ಮಯ ಮನಸ್ಥಿತಿಯ ಚಿರಭಾವಗೀತೆ. ನಿಸರ್ಗ ಎಷ್ಟೆಲ್ಲ ನಿಜ ತತ್ವಗಳ ಸಾಕಾರವಾಗಿಸಿದರೂ, ಬದುಕು ಏನೇನೆಲ್ಲ ಸತ್ಯಗಳ ಸಾಕ್ಷಾತ್ಕಾರವಾಗಿಸಿದರೂ, ನಾವು ಪರಿವರ್ತನೆ ಆಗುವುದೇ ಇಲ್ಲ. ಲೋಕ ಹೇಗೆಲ್ಲ ಗುದ್ದಿ ತಿದ್ದಿ ಹೇಳಿದರೂ ನಮ್ಮ ನಡೆ-ನುಡಿ ಸ್ವಭಾವಗಳು ಬದಲಾಗುವುದೇ ಇಲ್ಲ. ಉತ್ತರವಿಲ್ಲದ ಈ ಯಕ್ಷಪ್ರಶ್ನೆಗಳು ನಮ್ಮೆಲ್ಲರನ್ನು ಕಾಡುತ್ತಲೇ ಇರುತ್ತವೆ. ಏನಂತೀರಾ..?”
– ಪ್ರೀತಿಯಿಂದ ಎ.ಎನ್.ರಮೇಶ್,ಗುಬ್ಬಿ.
👇🍀👇🌺
ಯಕ್ಷಪ್ರಶ್ನೆಗಳು..!
ಸತ್ಯವನ್ನು ಮತ್ತೆ ಮತ್ತೆ ಮುಟ್ಟಿ ಮುಟ್ಟಿ
ಬಾರಿಬಾರಿ ಪರೀಕ್ಷಿಸಿ ನೋಡುವ ನಾವು
ಸುಳ್ಳನ್ನು ಕಣ್ಮುಚ್ಚಿ ನಂಬಿ ಬಿಡುತ್ತೇವೇಕೆ?
ವಾಸ್ತವವನ್ನು ಆದರಿಸಿ ಒಪ್ಪದೆ ಅಪ್ಪದೆ
ತರ ತರಾವರಿಗಳಲಿ ಪ್ರಶ್ನಿಸುವ ನಾವು
ಭ್ರಮೆಗಳನು ತಕ್ಷಣ ತಬ್ಬಿ ಬಿಡುತ್ತೇವೇಕೆ?
ಪ್ರಾಮಾಣೀಕತೆಯನು ಅಳೆದು ತೂಗಿ
ವಿಧ ವಿಧದಿ ಪರಾಮರ್ಶಿಸುವ ನಾವು
ವಂಚನೆಗೆ ತಟ್ಟನೆ ಶರಣಾಗುತ್ತೇವೇಕೆ,?
ಪಡೆವಾಗ ಎಡಬಿಡದಂತೆ ಎಡತಾಕಿ
ಪದೇ ಪದೇ ನೆನಪಿಸಿ ಕೇಳುವ ನಾವು
ಕೊಡುವಾಗ ಮರತೇ ಬಿಡುವುದೇಕೆ.?
ಬೇರೆಯವರ ನ್ಯೂನ್ಯತೆ ದೋಷಗಳ
ಹೆಕ್ಕಿ ಹೆಕ್ಕಿ ತಡಕಿ ಹುಡುಕುವ ನಾವು
ನಮ್ಮ ತಪ್ಪುಗಳನು ನುಡಿವುದಿಲ್ಲವೇಕೆ?
ಸಂಕಟದಿ ಸಾವಿರ ಸಾವಿರಸಲ ನೆನೆದು
ಗುಡಿ ಗೋಪುರಗಳ ಸುತ್ತುವ ನಾವು
ಸಂತಸದಿ ಮರೆತು ಮೆರೆಯುವುದೇಕೆ,?
ಜಗಕೆ ಜನಕೆ ಸಹಸ್ರ ಸತ್ಯ ಸತ್ವ ತತ್ವ
ಬಗೆ ಬಗೆಯಲಿ ಭೋದಿಸುವ ನಾವು
ಸ್ವತಃ ಅಳವಡಿಸಿಕೊಳ್ಳದೆ ನಡೆವುದೇಕೆ.?
ಬದುಕು ಬಾಳ ಪಠ್ಯ ಸಾಕ್ಷೀಕರಿಸಿದರು
ನಿತ್ಯಸತ್ಯ ನೋಡಿ ಕಲಿಯದವರು ನಾವು
ಎಂದೆಂದಿಗೂ ಬದಲಾಗುವುದಿಲ್ಲವೇಕೆ.?
-ಎ.ಎನ್.ರಮೇಶ್,ಗುಬ್ಬಿ.