ಮೈಸೂರು, ನ.26: ಮುದ್ರಣ ಮಾಧ್ಯಮದಂತೆ ಡಿಜಿಟಲ್ ಮಾಧ್ಯಮ ವಿಶ್ವಾಸರ್ಹತೆ ಗಳಿಸುವುದು ಅತ್ಯಂತ ಸವಾಲಿನ ಕೆಲಸ ಎಂದು ವಿಧಾನ ಪರಿಷತ್ ಸದಸ್ಯರೂ ಆಗಿರುವ ಪತ್ರಕರ್ತ ಕೆ. ಶಿವಕುಮಾರ್ ಅವರು ಅಭಿಪ್ರಾಯ ಪಟ್ಟರು.
ಜಸ್ಟ್ ಕನ್ನಡ ಆನ್ಲೈನ್ ಸುದ್ದಿ ಮಾಧ್ಯಮಕ್ಕೆ ಹದಿನೈದು ವರ್ಷ ತುಂಬಿದಹನ್ನೆಲೆಯಲ್ಲಿ ಬುಧವಾರ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ “ಜಸ್ಟ್ ಕನ್ನಡ@15 ವಿಶೇಷ ಸಂಚಿಕೆ” ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಸಾಮಾಜಿಕ ಮಾಧ್ಯಮಗಳ ಪರಿಣಾಮ ಡಿಜಿಟಲ್ ಮಾಧ್ಯಮ ಮೇಲೆ ಬೀರುತ್ತಿದೆ. ಈ ನಿಟ್ಟಿನಲ್ಲಿ ಜನರ ವಿಶ್ವಾಸ ಗಳಿಸುವುದಕ್ಕೆ ಹೆಚ್ಚಿನ ಪಾರದರ್ಶಕತೆ ಮತ್ತು ಪರಿಣಾಮಕಾರಿಯಾಗಿ ಸುದ್ದಿ ಭಿತ್ತರಿಸಬೇಕು ಎಂದು ಸಲಹೆ ನೀಡಿದರು.

ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಜಸ್ಟ್ ಕನ್ನಡ 15 ವರ್ಷಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಇಂಗ್ಲಿಷ್ನಲ್ಲೂ ಸುದ್ದಿ ಪ್ರಕಟಿಸಿ, ಜಾಗತೀಕವಾಗಿ ಮಾಹಿತಿ ನೀಡುವ ಕೆಲಸ ಮಾಡಬೇಕು. ಯಾಕೆಂದರೆ ಬಹುಭಾಷಾ ಮಾಧ್ಯಮ ಈಗ ಹೆಚ್ಚುತ್ತಿದೆ. ಆದ್ದರಿಂದ ಕನ್ನಡದ ಜೊತೆಗೆ ಇಂಗ್ಲಿಷ್ ನಲ್ಲಿಯೂ ಜಸ್ಟ್ ಕನ್ನಡ ಬರಬೇಕು ಎಂದರು.
ಡಿಜಿಟಲ್ ಮಾಧ್ಯಮ ಈಗ ಹೆಚ್ಚು ಬಳಕೆಗೆ ಬರುತ್ತಿದೆ. ಹೀಗಾಗಿ ಡಿಜಿಟಲ್ ಮಾಧ್ಯಮಗಳ ಜಾಹೀರಾತುಗಳನ್ನು ಹೊಸದಾಗಿ ರೂಪಿಸಬೇಕು. ಹೀಗಾಗಿ ಡಿಜಿಟಲ್ ಮಾಧ್ಯಮಗಳಿಗೆ ಹೊಸ ಜಾಹೀರಾತು ನೀತಿ, ಪತ್ರಕರ್ತರ ಸಮಸ್ಯೆಗಳ ಬಗ್ಗೆ ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ ಎಂದು ಹೇಳಿದರು.
ಕೋವಿಡ್ ವೇಳೆ ಅನೇಕ ಹಿರಿಯ ಪತ್ರಕರ್ತರು ಕೆಲಸ ಕಳೆದುಕೊಂಡು ತಮ್ಮದೇ ಸ್ವಂತ ಡಿಜಿಟಲ್ ಮಾಧ್ಯಮವನ್ನು ಸ್ಥಾಪಿಸಿ ಜಗತ್ತಿನಾದ್ಯಂತ ಖ್ಯಾತಿ ಪಡೆದಿದ್ದಾರೆ. ಡಿಜಿಟಲ್ ಮಾಧ್ಯಮವು ಕೇವಲ ಸುದ್ದಿ ನೀಡುವುದು ಮಾತ್ರವಲ್ಲದೆ ಅನೇಕ ಪ್ರಚಲಿತ ಘಟನೆಗಳನ್ನು ಕುರಿತು ತಮ್ಮದೇ ಆದ ವ್ಯಾಖ್ಯಾನ ಮಾಡಬೇಕಿದೆ. ಎಂದು ತಿಳಿಸಿದರು.
ಯಾವುದೇ ಪ್ರಭುತ್ವದ ಕಾರ್ಯವೈಖರಿ ಕುರಿತು ಬರೆದ ಸುದ್ದಿಯಲ್ಲಿನ ಟೀಕೆ, ಟಿಪ್ಪಣಿಗಳನ್ನು ಸಕಾರಾತ್ಮವಾಗಿ ಸ್ವೀಕರಿಸಬೇಕು. ಅದನ್ನು ಸಹಿಸದೆ ಸುದ್ದಿ ಮಾಧ್ಯಮಗಳನ್ನು ನಿಷೇಧಿಸುವ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶನ ಮಾಡಬಾರದು. ಇದು ಮಾಧ್ಯಮಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡಿದಂತಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಜಸ್ಟ್ ಕನ್ನಡ ಸಿಬ್ಬಂದಿಗಳಾದ ಉಪ ಸಂಪಾದಕ ಪ್ರಶಾಂತ, ವಿಡಿಯೋ ಸಂಪಾದಕ ಆಸಿಮ್, ವಿಡಿಯೋ ಜರ್ನಲಿಸ್ಟ್ ಸುದೀಂದ್ರ ಕುಮಾರ್, ಫೋಟೊ ಜರ್ನಲಿಸ್ಟ್ ವಾಟಾಳ್ ಆನಂದ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು, ಡಾ.ಯೋಗೇಶ್ ಅವರು, ಹಿರಿಯ ಪತ್ರಕರ್ತ ಚಿ.ಜ.ರಾಜೀವ್ ಅವರು, Just ಕನ್ನಡ ಸುದ್ದಿ ಸಂಸ್ಥೆಯ ಮುಖ್ಯಸ್ಥ ಕೊಳ್ಳೇಗಾಲ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
