ಅನುದಿನ ಕವನ-೧೯೦೯, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ:ಕವಿ

ವಿಶ್ವ ಕವಿತಾ ದಿನದ ಶುಭಾಶಯಗಳೊಂದಿಗೆ….

ಕವಿ

ನನ್ನಂತೆಯೇ ನಿಮ್ಮಂತೆಯೇ
ಹುಲು ಮಾನವನು….
ಜಂಭ ಪಡಲು
ಅವನಿಗೆ ಕೊಂಬೇನೂ ಇಲ್ಲ !
ಎಲ್ಲರಂತೆ ಅವನು
ಕೊಳಕು ನೀರಿನಲ್ಲಿ
ಜಳಕ ಮಾಡುವನು.
ಹುಳುಕನೆತ್ತಿ ತೋರಿ ಆಡುವನು…

ನೋವಿಗೆ ಸಾವಿಗೆ ತುಸು ಹೆಚ್ಚೇ
ಮರುಗುವನು ಕರಗುವನು….

ಜಡ ಚೇತನಗಳ ಮುಟ್ಟಿ ಮಾತಾಡಿಸಿ
ಶಬುದಗಳನೆತ್ತಿ ಇಡುವನು
ಕೊಡುವನು ಜತನದಿಂದ….

ಕಲ್ಲು ಕರಗುವ ಸಮಯ ಕಾಣಬಲ್ಲವನು
ಇರುವೆಯ ಕಾಲ ಸಪ್ಪಳ ಕೇಳಬಲ್ಲವನು

ಬತ್ತಲೆಗೆ ಬಟ್ಟೆ ನೇಯುವನು
ಕತ್ತಲೆಯ ಬೆಳಕು ಮಾಡುವನು….!!


-ಸವಿತಾ ನಾಗಭೂಷಣ, ಶಿವಮೊಗ್ಗ