ಅನುದಿನ ಕವನ- ೪೮೬, ಕವಿ: -ಡಾ.ಶಿವಕುಮಾರ ಮಾಲಿಪಾಟೀಲ ಗಂಗಾವತಿ

ದ್ವೇಷದಿಂದ ಭೂಮಿ ಮೇಲೆ
ಗೆದ್ದೋರು ಯಾರಿಲ್ಲ
ಆದರೂ ಒಬ್ಬರನೊಬ್ಬರು
ಪ್ರೀತಿಸೋದು ಕಲಿತಿಲ್ಲ

ಯುದ್ದದಿಂದ ಗೆದ್ದ ಕೋಟೆ
ಒಂದು ಉಳಿದಿಲ್ಲ
ಆದರೂ ಒಗ್ಗಟ್ಟಾಗಿ
ಬಾಳೋದು ಕಲಿತಿಲ್ಲ

ಎಲ್ಲ ಉಟ್ಟು ಇಲ್ಲೆ ಬಿಟ್ಟು
ಹೋಗುವುದು ಅರಿತಿಲ್ಲ
ಎಲ್ಲ ಮಾಯೆಯ ಬೆನ್ನು
ಬಿದ್ದು ಹೊರಗೆ ಬರುತಿಲ್ಲ

ಜಾತಿ ಮತದ ಗಡಿ ಮೀರಿ
ಮನುಜರಾಗತಿಲ್ಲ
ಶತ ಶತಮಾನ ಕಳೆದರೂ
ಮಾನವೀಯತೆ ಒಪ್ಪಲಿಲ್ಲ

ಶರಣ ಸಂತರ ಶರೀಫರ ಮಾತು ಮನಸಿಗೆ ನಾಟಲಿಲ್ಲ
ಅಜ್ಞಾನದ ಸಂತೆಯಲ್ಲಿ
ಬಿದ್ದು ಒದ್ಯಾಡೋದು ತಪ್ಪಲಿಲ್ಲ

ಮಾಡಿದ ಪಾಪ ಬೆನ್ನಿನ ಹಿಂದೆ ಅನುಭವಿಸಲೇ ಬೇಕಲ್ಲ
ಹೇಗೋ ಬದುಕಿ ಪಾರಾಗಲೂ
ಆ ದೇವರು ಬಿಡೊದಿಲ್ಲ

ಜೀವ ದೇವರ ಕೊಟ್ಟ ಪ್ರಸಾದ
ಅರಿಯಬೇಕಲ್ಲ
ಅರಿಷ್ಡ್ವರ್ಗಗಳ
ಗೆಲ್ಲೋದು ಕಲಿಯಬೇಕಲ್ಲ

ಶ್ರೇಷ್ಠ ಮಾನವನ ಜನ್ಮ
ಹಾಳಾಗಿ ಹೋಗಬಾರದಲ್ಲ
ಪ್ರೀತಿಯಿಂದ ಭೂಮಿನೇ
ಸ್ವರ್ಗ ಮಾಡಬಹುದಲ್ಲ?

ಮತ್ತೊಂದು ಜನ್ಮ ನಮಗೆ
ಯಾರಿಗೂ ಬೇಕಿಲ್ಲ
ಈ ಜನ್ಮವನ್ನೆ ಸಾರ್ಥಕ
ಮಾಡಿಕೊಂಡರೆ ಸಾಕಲ್ಲ?

-ಡಾ.ಶಿವಕುಮಾರ ಮಾಲಿಪಾಟೀಲ
ದಂತ ವೈದ್ಯರು
ಗಂಗಾವತಿ
*****

Leave a Reply

Your email address will not be published. Required fields are marked *