
ಬಳ್ಳಾರಿ, ಜು.7: ಕೆಲ ಕಾರಣಗಳಿಂದ ಶ್ರೀಮಹರ್ಷಿ ವಾಲ್ಮೀಕಿಯವರ ಪುತ್ಥಳಿಯ ಅನಾವರಣ ಕಾರ್ಯಕ್ರಮ ಮುಂದೂಡಲ್ಪಟ್ಟಿದ್ದು, ಅತಿ ಶೀಘ್ರ ಅನಾವರಣ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಮಂಗಳವಾರ ನಗರದ ಸೊಂತ ಲಿಂಗಣ್ಣ ಕಾಲೋನಿಯಲ್ಲಿ ಏರ್ಪಡಿಸಿದ್ದ ಪಾರ್ಕ್ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ಹಿಂದೆ ಒಂದು ದುರ್ಘಟನೆ ನಡೆದು ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು, ಆದರೆ ಈಗ ಯಾರೇ ಅಡ್ಡ ಬಂದರೂ ಕಾರ್ಯಕ್ರಮ ನಿಲ್ಲುವುದಿಲ್ಲ, ಈ ಹಿಂದೆ ಅಂದುಕೊಂಡದ್ದಕ್ಕಿಂತ ಅದ್ಧೂರಿಯಾಗಿ ಅನಾವರಣ ಕಾರ್ಯಕ್ರಮ ಏರ್ಪಡಿಸಲಿದ್ದೇವೆ ಎಂದರು.
ಕೊಳಗಲ್ ರಸ್ತೆಯ ಅಭಿವೃದ್ಧಿಗೆ ಸಂಬಂಧಿಸಿ ಮರಗಳ ತೆರವು ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ನಾರಾ ಭರತ್ ರೆಡ್ಡಿ, ರಸ್ತೆ ಸೇರಿದಂತೆ ಯಾವುದೇ ರೀತಿಯ ಅಭಿವೃದ್ಧಿ ಮಾಡುವಾಗ ಮರ ಸೇರಿದಂತೆ ವಿವಿಧ ಅಡೆತಡೆಗಳನ್ನು ತೆರವು ಮಾಡುವುದು ಸಹಜ, ಮರಗಳ ತೆರವನ್ನು ಪ್ರಶ್ನಿಸುವವರು ಯಾರೂ ಒಂದು ಮರ ನೆಡುವುದಿಲ್ಲ, ಹೆಸರಿಗೆ ಪರಿಸರ ಪ್ರೇಮಿ ಎಂದು ಹೇಳಿಕೊಳ್ಳುತ್ತಾರೆ, ನಾನು ಶಾಸಕನಾದ ಒಂದೇ ವರ್ಷಕ್ಕೆ ಮಿಯಾವಾಕಿ ಮಾದರಿಯಲ್ಲಿ 25 ಸಾವಿರ ಸಸಿಗಳನ್ನು ನೆಟ್ಟಿರುವೆ, ಜಿಪಂ ಸದಸ್ಯ ಆಗಿದ್ದ ವೇಳೆ ಕೊರ್ಲಗುಂದಿ ಕ್ಷೇತ್ರದಲ್ಲಿ 45 ಸಾವಿರ ಸಸಿಗಳನ್ನು ನೆಟ್ಟಿರುವೆ, ನಗರವನ್ನು ಪ್ರವೇಶಿಸುವ ರಸ್ತೆಗಳು ಅಭಿವೃದ್ಧಿ ಆಗಲೇ ಬೇಕು, ಇಲ್ಲದಿದ್ದರೆ ಅಭಿವೃದ್ಧಿ ಕುಂಠಿತ ಆಗುತ್ತದೆ ಎಂದರು.
ಜಿಲ್ಲೆಯ ಶಾಸಕರ ಬೆಂಬಲವಿದ್ದವರಿಗೆ ಸಚಿವ ಸ್ಥಾನ: ನೀವು ಸಚಿವ ಸ್ಥಾನ ಆಕಾಂಕ್ಷಿಯೇ? ಯುವಕರ ಕೋಟಾದಲ್ಲಿ ನಿಮಗೆ ಅವಕಾಶ ಸಿಗಲಿದೆಯೇ? ಎಂದು ಕೇಳಿದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕ ನಾರಾ ಭರತ್ ರೆಡ್ಡಿ ಅವರು, ನನ್ನ ಮೇಲಿನ ಅಭಿಮಾನಕ್ಕೆ ನನ್ನ ಸಹೋದ್ಯೋಗಿ ಶಾಸಕರು ನನಗೆ ಸಚಿವ ಸ್ಥಾನ ಸಿಗಲಿ ಎಂದಿದ್ದಾರೆ, ಅದು ಅವರ ಪ್ರೀತಿ ಅಭಿಮಾನ. ಯುವಕರ ಕೋಟಾದಡಿ ಅವಕಾಶ ಸಿಗುವುದಾದರೆ ಶಾಸಕರಾದ ಬಸವರಾಜ ಶಿವಗಂಗಾ ಹಾಗೂ ರವಿ ಗಣಿಗ ಅವರಿಗೆ ಅವಕಾಶ ಸಿಗಲಿ ಎಂದರು.
ಮುಂದುವರಿದು; ಜಿಲ್ಲೆಯಲ್ಲಿ ನಾವು ಈಗಾಗಲೇ ಯಾರಿಗೆ ಕೊಡಬೇಕು ಎಂದು ಹೇಳಿದ್ದೇವೆಯೋ ಅವರಿಗೆ ಸಚಿವ ಸ್ಥಾನದ ಅವಕಾಶ ಸಿಗಲಿದೆ ಎಂದರು.
ಪಾರ್ಕ್’ಗಳ ಅಭಿವೃದ್ಧಿಗೆ ಸಂಬಂಧಿಸಿ, ಸಾರ್ವಜನಿಕರು ಆಸ್ಥೆ ವಹಿಸಿ ಪಾರ್ಕ್’ಗಳ ಅಭಿವೃದ್ಧಿಗೆ ಮುಂದಾಗಬೇಕು, ಪಾರ್ಕ್ ಸಮಿತಿಗಳನ್ನು ಮಾಡಿಕೊಂಡರೆ ಪಾಲಿಕೆಯಿಂದ ಮಾಸಿಕ 10 ಸಾವಿರ ರೂ.ಗಳನ್ನು ನಿರ್ವಹಣಾ ವೆಚ್ಚ ನೀಡಲಾಗುವುದು ಎಂದರು.
ಎಪಿಎಂಸಿಯಲ್ಲಿ ನಿಯಮ ಮೀರಿ ಅಂಗಡಿಗಳನ್ನು ವ್ಯಾಪಾರಿಗಳಿಗೆ ನೀಡಬಾರದು ಎಂದ ಅವರು, ಇತ್ತೀಚೆಗೆ ನಗರದಲ್ಲಿ ನಡೆಯುತ್ತಿರುವ ಲೋಕಾಯುಕ್ತ ದಾಳಿಗಳನ್ನು ಸಮರ್ಥಿಸಿದರಲ್ಲದೇ ಲೋಕಾಯುಕ್ತರಿಗೆ ಬೆಂಬಲಿಸುವುದಾಗಿ ಹೇಳಿದರು.
ಈ ಸಂದರ್ಭ ಪಾಲಿಕೆಯ ವಾರ್ಡಿನ ಸದಸ್ಯ ಹನುಮಂತಪ್ಪ, ಮೇಯರ್ ಪಿ.ಗಾದೆಪ್ಪ, ಪಾಲಿಕೆಯ ಇತರ ಸದಸ್ಯರಾದ ನೂರ್ ಮೊಹಮ್ಮದ್, ಕುಬೇರಾ, ಕಾಂಗ್ರೆಸ್ ಮುಖಂಡರಾದ ಬಜ್ಜಪ್ಪ, ದುರ್ಗಾ ಮೋಹನ್, ಯರಗುಡಿ ಸೋಮಣ್ಣ, ನಾಗರಾಜ್, ಬಿಆರೆಲ್ ಸೀನಾ, ಹೊನ್ನಪ್ಪ, ಪರಶುರಾಮುಡು, ಹಗರಿ ಗೋವಿಂದ, ಚಾನಾಳ್ ಶೇಖರ್, ಪದ್ಮಾ ಮತ್ತಿತರರು ಇದ್ದರು.
