ಅನುದಿನ ಕವನ-೨೮೮, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಒಮ್ಮೆ ಕ್ಷಮಿಸುಬಿಡು ಅಣ್ಣ

ಒಮ್ಮೆ ಕ್ಷಮಿಸಿಬಿಡು ಅಣ್ಣ


ಕ್ಷಮಿಸಿಬಿಡು ಅಣ್ಣ
ಜಾತಿ, ಧರ್ಮಗಳ ಮೀರಿದ
ನಿನ್ನನ್ನು ಜಾತಿ, ಧರ್ಮಗಳ
ಮಧ್ಯೆ ಬಂದಿಯಾಗಿಸಿದ್ದಕ್ಕೆ,
ಸ್ಥಾವರಕ್ಕಳಿವುಂಟು ಎಂದ
ನಿನ್ನನ್ನೇ ಸ್ಥಾವರವನ್ನಾಗಿಸಿದ್ದಕ್ಕೆ

ಕ್ಷಮಿಸಿಬಿಡು ಅಣ್ಣ
ಎಲ್ಲರೊಳೊಂದಾಗಿರಬೇಕೆಂದ
ನಿನ್ನನ್ನೇ ದೇವರನ್ನಾಗಿಸಿ
ದೂರವಿರಿಸಿದುದಕ್ಕೆ
ನಿನ್ನ ಹೆಸರಿನ ಭಜನೆಯಿಂದಲೇ
ಹೊನ್ನು ಪಡೆಯುತಿರುವುದಕ್ಕೆ

ಕ್ಷಮಿಸಿಬಿಡು ಅಣ್ಣ
ನಿನ್ನನ್ನು ನಿನ್ನ ವಿಚಾರಗಳನ್ನೂ
ಅರಿಯದೆ ಅರಿವಿಲ್ಲದಂತೆ
ನಡೆಯುತ್ತಿರುವುದಕ್ಕೆ
ನಡೆ ನುಡಿ ಒಂದಾಗದಿರುವುದಕ್ಕೆ

ಕ್ಷಮಿಬಿಸಿಡು ಅಣ್ಣ
ನಿನ್ನ ವಚನಗಳ ಗರಿಗಳ
ಸಿಕ್ಕಿಸಿಕೊಂಡೇ ಇವನಮ್ಮವ
ಇವನಮ್ಮವ ಎಂದು
ಬಡಿದಾಡುತ್ತಿರುವುದಕ್ಕೆ
ನುಡಿಯೊಳಗಾಗಿ
ನಡೆಯದಿರುವುದಕ್ಕೆ

ಕ್ಷಮಿಸಿಬಿಡು ಅಣ್ಣ
ಆಗಸದಷ್ಟು ಎತ್ತರವಿರುವ
ನಿನ್ನನ್ನು ಯಾರಿಗೂ
ಕಾಣದಂತೆ ಗೋಡೆಗಳ ಮಧ್ಯೆ
ಬಚ್ಚಿಟ್ಟಿರುವುದಕ್ಕೆ
ಪ್ರೀತಿಯನ್ನೇ ತುಂಬಿಕೊಂಡ
ನಿನ್ನ ವಚನಗಳನ್ನು
ಅರ್ಥೈಸಿಕೊಳ್ಳದಿರುವುದಕ್ಕೆ

ಕ್ಷಮಿಸಿಬಿಡು ಅಣ್ಣ
ನೀನು ತೋರಿದ ಸರಳ
ದಾರಿಯನ್ನೀಗ ಯಾರು ಯಾರೋ
ಗುತ್ತಿಗೆ ಹಿಡಿದಿದ್ದಾರೆ
ಸುಲಭವಾದ ನಡೆಗೆ
ಅಡೆತಡೆಗಳನ್ನೊಡ್ಡಿದ್ದಾರೆ
ಮಾನವೀಯ ಮಿಡಿತವೇ
ತುಂಬಿರುವ ವಚನಗಳಿಗೆ
ನೂರೆಂಟು ಅರ್ಥಗಳ ಕಲ್ಪಿಸಿದ್ದಾರೆ

ಸಾಧ್ಯವಾದರೆ ಕ್ಷಮಿಸಿಬಿಡು
ಅಣ್ಣ ಬಸವಣ್ಣ
ನೀನೆಂದರೆ ಏನೆಂದೇ
ಅರಿತುಕೊಳ್ಳದೇ ನಿನ್ನ
ಮೆರವಣಿಗೆ ಮಾಡುತಿರುವುದಕ್ಕೆ
ಚಿನ್ನದ ಖರೀದಿಯ
ದಿನವಾಗಿಸಿದುದಕ್ಕೆ

-ಸಿದ್ಧರಾಮ ಕೂಡ್ಲಿಗಿ
*****

Leave a Reply

Your email address will not be published. Required fields are marked *