ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ 7 ನೇ ಪುಣ್ಯ ಸ್ಮರಣೆ: ಇಂದು(ಜ.23) ವಿಮ್ಸ್ ಆವರಣದಲ್ಲಿ ಅನ್ನ ದಾಸೋಹ, ಗಣ್ಯರಿಗೆ ಪ್ರಶಸ್ತಿ ಪ್ರದಾನ

ಬಳ್ಳಾರಿ, ಜ. 23: ತ್ರಿವಿಧ ದಾಸೋಹಿಯಾಗಿದ್ದ ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ 7 ನೇ ಪುಣ್ಯ ಸ್ಮರಣೆಯ ಅಂಗವಾಗಿ ಮಠದ ಹಳೆಯ ವಿದ್ಯಾರ್ಥಿ ಬಳಗದಿಂದ ನಗರದ‌ ವಿಮ್ಸ್ ಆವರಣದಲ್ಲಿ ಶುಕ್ರವಾರ ಅನ್ನ ದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಮುಖಂಡ ಕವಿ ಶ್ರೀನಿವಾಸ ಮುಕುಂದ ತಿಳಿಸಿದ್ದಾರೆ.
ದಾಸೋಹ ದಿನದ ನೆನಪಿನಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾಹಿತಿ ಪತ್ರಕರ್ತರಿಗೆ ಸಿದ್ಧಗಂಗಾ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ಮಾಹಿತಿ ನೀಡಿದರು.
ಅನ್ನ, ಅಕ್ಷರ ಮತ್ತು ಜ್ಞಾನ ದಾಸೋಹದ ಮೂಲಕ ಪೂಜ್ಯ ಶ್ರೀ ಗಳು ಲಕ್ಷಾಂತರ ಬಡ ಮಕ್ಕಳಿಗೆ ಸೇವೆ ಸಲ್ಲಿಸಿದ್ದಾರೆ. ಈ ಬಡಮಕ್ಕಳಲ್ಲಿ ತಾವು ಒಬ್ಬನಾಗಿದ್ದು ಕಳೆದ ಆರು ವರ್ಷ ವರ್ಷಗಳಿಂದ ಸಮಾನ ಮನಸ್ಕ ಗೆಳೆಯರೊಂದಿಗೆ ವಿಮ್ಸ್ ಆವರಣದಲ್ಲಿ ಅನ್ನ ದಾಸೋಹ ಕಾರ್ಯಕ್ರಮ ಆಯೋಜಿಸಿ ತೃಪ್ತಿ ಕಾಣುತ್ತಿದ್ದೇವೆ ಎಂದರು.
ವಿಮ್ಸ್ ಆವರಣದಲ್ಲಿರುವ ಇಂದಿರಾ‌ ಕ್ಯಾಂಟೀನ್ ಸಮೀಪ ಶುಕ್ರವಾರ ಮಧ್ಯಾಹ್ನದಿಂದ ಅನ್ನದಾಸೋಹ‌ ನಡೆಯಲಿದ್ದು ನೂರಾರು ಜನರು ಪಾಲ್ಗೊಳ್ಳುವರು ಎಂದು ಶ್ರೀನಿವಾಸ ಮುಕುಂದ ತಿಳಿಸಿದರು.