“ಮಾತಿನ ಸುತ್ತ-ಮುತ್ತ ಹನಿ ಹನಿ ಮಿನಿಗವನ. ಮಾತು-ಮೌನಗಳ ನಡುವಿನ ಚಿತ್ತ-ಚಿತ್ತಾರಗಳ ಚಿಟ ಚಿಟ ಚುಟುಕು ಸಂಕೀರ್ತನ. ಮಾತಿನಿಂದಲೇ ರಾಗ-ವಿರಾಗ. ಮಾತಿನಿಂದಲೇ ಆಹ್ಲಾದ-ಆಕ್ರಂದ. ಮಾತು ಉಕ್ಕಿದರೆ ಭಾವಾಭಿವ್ಯಕ್ತಿ. ಮಾತು ಬತ್ತಿದರೆ ಭಾವಮುಕ್ತಿ. ಏನಂತೀರಾ..?”
-ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ವಿಕರ್ಷಣೆ.!
ಮಾತಾಡಲು ಬಿಡುವಿಲ್ಲ
ಎಂದರೆ… ಕಾಯಬಲ್ಲೆ.!
ಮಾತಾಡಲು ಮನಸಿಲ್ಲ
ಎಂದರೆ.. ಕಾಯಲೊಲ್ಲೆ.!!
ಮಾತು ಸಾಕೆನಿಸಿದರೆ…
ಹೇಳಿಬಿಡು ನಿಲ್ಲಿಸುವೆ.!
ಮಾತೇ ಬೇಡೆನಿಸಿದರೆ..
ಹೇಳು ನಡೆದುಬಿಡುವೆ.!!
ಮಾತಾಡಲು ಮನಸಿಲ್ಲವೆಂದರೆ
ಓಕೆ ಸರಿಬಿಡು ಪರವಾಗಿಲ್ಲ.!
ಮನದಲಿ ನಾನೆ ಇಲ್ಲವೆಂದರೆ…
ಬೇಡಬಿಡು ಮಾತೇ ಬೇಕಾಗಿಲ್ಲ.!!

-ಎ.ಎನ್.ರಮೇಶ್. ಗುಬ್ಬಿ.
