ಅನುದಿನ‌ ಕವನ-೬೭೧, ಕವಯತ್ರಿ:ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ನ್ಯಾಯದ ಹರತಾಳ

ನ್ಯಾಯದ ಹರತಾಳ

ಬಾಗಿ ಬಗ್ಗಿ ಸೋತ ದೇಹಕ್ಕೆ
ವಾಸ್ತವ್ಯದ ಒಳ ಹರಿವು
ಗುಲಾಬಿಯ ತಳದ
ಮುಳ್ಳ ಹಬೆಯು….

ಕವಲಾದ ನದಿಯ ಮನಕೆ
ದೇಸಿ ಬಂದೂಕುಗಳು
ಎಡರಿಲ್ಲದೆ ನಗುತಿವೆ…..

ನ್ಯಾಯದ ಹರತಾಳಕೆ
ಮರೆಮಾಚಿದೆ ಬೆನ್ನ ಚೂರಿ….
ಗೌರವದ ಸೀರೆಯ
ಅರಿಷಿಣ ಕುಂಕುಮಕೆ
ದೈವ ದೀಪ ಕಾಯದೇ
ಹಣದ ಅಂತಸ್ತ ಹೊಸ್ತಿಲಲಿ
ಜೋತು ಬಿದ್ದಿದೆ…..

ಕೊನೆಗೊಳಿಸುತಿವೆಯೇ ನೊಂದ ಹೊಸ-     ಚಿಲುಮೆಗಳು?
ಇಲ್ಲ, ಬರೀ ಭ್ರಮೆಗಳು…..

ಸುತ್ತಲೂ ಕಣ್ಗಾವಲಾಗಿದೆ
ಒಣ ಒಗುಡ ಬೆಂಕಿ,,

ಸುಡುಗಾಡ ಸೆಳೆತಕೆ
ಕಪ್ಪು ಚೌಕದಲಿ ಸುಮ್ಮನಿರದೆ
ಬಡಿಯುತ್ತಿದೆ ಜೀವದ ಸೆಳೆವು…..

ಹೊತ್ತಿಗೆಯ ಕುತ್ತಿಗೆಗೆ ಮಸಿ
ಬಳಿದಿದೆ ಬೆದರಿಕೆಯ ಅನೀತಿ,
ಇದಕೆ ಮೌನದಿ ಕಣ್ಮುಚ್ಚಿ
ತಪ ಗೈಯ್ಯುತಿದೆ
ಪ್ರಭುದ್ಧತೆಯ ಅರಿವು…..

ಅರೆ ಕ್ಷಣದ ಚಪ್ಪಾಳೆಗೆ
ಹಗ್ಗವಾಗಿದೆ ದುರಾಸೆಯ ಹಾರ?..

ಪರಿಪೂರ್ಣತೆಯಿಲ್ಲದ
ವಿರಾಮಕ್ಕೆ ಹವನದ ಹೊಗೆ
ಸುತ್ತಲೂ ಸುತ್ತುತಿದೆ….
ಎಲುಬುಗಳ ಸೋರೆ
ಬುರುಡೆಯ ಬಾಯಲ್ಲಿ
ಸಾಗುತಿದೆ ಹಸಿ ಗೋಡೆಯ ಹರಳು?…..

ಆದರೂ ಖಚಿತತೆಯಲ್ಲವೆ
ಸಮಾಜದ ಅಂತಿಮ ಯಾತ್ರೆ……


-ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ವಿಜಯನಗರ ಜಿಲ್ಲೆ.
*****

Leave a Reply

Your email address will not be published. Required fields are marked *