ಅನುದಿನ ಕವನ-೧೨೨೬, ಕವಯಿತ್ರಿ: ರಂಹೊ, ತುಮಕೂರು, ಕವನದ ಶೀರ್ಷಿಕೆ:ಒಂದಿಷ್ಟು ಪ್ರಾರ್ಥನೆಗಳು

ಒಂದಿಷ್ಟು ಪ್ರಾರ್ಥನೆಗಳು

ಮೋಡಗಳು ಕದಡಿ ಮಳೆ ಸುರಿಯಲಿ
ಬಿದ್ದ ಮಳೆ ಬದುಕಿನ ಬೀದಿಗಿಡದಿರಲಿ….

ಅನ್ನದಾತ ಕುಣಿಕೆಗೆ ಕೊರಳೊಡ್ಡದಿರಲಿ
ಮನೆಯಲ್ಲಿ ಮೂರೊತ್ತು ಒಲೆ ಉರಿಯಲಿ…

ಹಸುಗೂಸು ಕಸದ ಬುಟ್ಟಿಯಲಿ ಅಳದಿರಲಿ
ಹೆತ್ತವರು ವೃದ್ಧಾಶ್ರಮದ ವಿಳಾಸ ಕೇಳದಿರಲಿ…

ಹೂ ಮಾರುವ ಹುಡುಗಿ ಬೀದಿ ಹೆಣವಾಗದಿರಲಿ
ಭಿಕಾರಿಗೂ ತುತ್ತು ಕೂಳು ಸಿಗಲಿ…

ಅಷ್ಟೂ ಕನಸುಗಳ ಹೆಣ್ಣುಮಗಳು ಸುಟ್ಟುಹೋಗದಿರಲಿ
ಯೋಧನ ಹೆಂಡತಿ ವಿಧವೆಯಾಗದಿರಲಿ…

ಭೂಗೋಳದಲ್ಲಿ ಯುದ್ಧಗಳು ಗಡಿಪಾರಾಗಲಿ
ನಮ್ಮ ಕಣ್ಣಿನಲ್ಲಿಷ್ಟು ಹೃದಯದಲ್ಲಿಷ್ಟು ತೇವವಿರಲಿ…

ನದಿಗಳಿಗೂ ಎದೆ ಬೇನೆ ಕಾಡದಿರಲಿ
ಕಡಲ ತ್ಸುನಾಮಿಗೂ ಕರುಣೆ ಬರಲಿ…

ಮತ್ತೇನು ತಕರಾರುಗಳಿಲ್ಲ ಪ್ರಭುವೇ…
ನಮ್ಮ ಮೆದುಳಿಗಿಷ್ಟು ಹೃದಯದ ಭಾಷೆ ಬರಲಿ…!

-ರಂಹೊ(ರಂಗಮ್ಮ ಹೊದೇಕಲ್), ತುಮಕೂರು ಜಿ.
——

Leave a Reply

Your email address will not be published. Required fields are marked *