ಅನುದಿನ ಕವನ-೧೩೪೯, ಕವಿ: ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ, ಕವನದ ಶೀರ್ಷಿಕೆ:ನನ್ನೊಲವಿನಬಂಧು ಮೈಸೂರು ಆಕಾಶವಾಣಿ

ಮೈಸೂರು ಆಕಾಶವಾಣಿಗೆ ಇಂದಿಗೆ 90ರ ಸಂಭ್ರಮ!
ಈ ಶುಭ ಸಂದರ್ಭದಲ್ಲಿ ‘ನನ್ನೊಲವಿನಬಂಧು
ಮೈಸೂರು ಆಕಾಶವಾಣಿ’ ಕವಿತೆ ರಚಿಸಿದ್ದಲ್ಲದೇ ಆಕಾಶವಾಣಿ ಕೇಂದ್ರದ ನೇರ ಪ್ರಸಾರದಲ್ಲಿ ವಾಚಿಸಿದ್ದಾರೆ….ಕವಿ, ಗಾಯಕ ಗಾನಾಸುಮಾ ಸೋಮಪಟ್ಟನಹಳ್ಳಿ ಅವರು. ಈ ಕವಿತೆ ಇಂದಿನ ಅನುದಿನ ಕವನ ಕಾಲಂನಲ್ಲಿ….!🍀👇


ನನ್ನೊಲವಿನಬಂಧು
ಮೈಸೂರು ಆಕಾಶವಾಣಿ

ಏನು ಹೇಳಲಿ ಆಕಾಶವಾಣಿ?
ನನ್ನಪ್ಪನ ಕಾಲದ ಸಂಗಾತಿ ನೀನು
ನನ್ನ ಬಾಲ್ಯ,ಹರೆಯದಲ್ಲೂ
ನೀ ನನ್ನ ಒಲವಿನ ಜೇನು
ಹಾಡುವುದ ಕಲಿಸಿದ ಗುರು ನೀನು

ಮಾತುಗಳ ಮೌಲ್ಯಕೆ ಅರ್ಥ ನೀಡಿ
ಮೌನದರ್ಥವ ತಿಳಿಸಿ
ಮನುಷ್ಯತ್ವದ ಮಮತೆಯ
ಅರುಹಿದ ಅರೋಹಿ ನೀನು

ಗಾನ ಬದುಕಿಗೊಂದು ಗಹನಾರ್ಥ ನೀಡಿ
ಗಾನಗಣಿಗಾರಿಕೆ
ಎಂಬ ನನ್ನಂಕಣಕೆ
ಮುನ್ನುಡಿ ಬರೆದದ್ದು ನೀನೇ.
ನನ್ನ ಗಾನಪರಿಣಯಕ್ಕೆ
ಮುಹೂರ್ತವಿಟ್ಟು
ಗಾನಾಕಾಶ,ಗಾನವಾಣಿ
ಎಂಬ ಗಾನತಿಲಕವಿಟ್ಟು
ಮಹಾಮಾನವತ್ವಕೆ
ಬೆನ್ನುಡಿ ಬರೆದ
ಆಕಾಶವಾಣಿಯೇ ನಾ ನಿನ್ನಹೇಗೆ ತಾನೇ ಮರೆಯಲಿ ಹೇಳು?

ಇಂದು ನಿನಗೆ ತೊಂಭತ್ತು ತುಂಬಿತಂತೆ
ಅದೆನಗೆ ಸಂಭ್ರಮದ ಹಬ್ಬದಂತೆ
ನಿಲಯಮನಸುಗಳೆಲ್ಲಾ
ನನ್ನೊಲವಿನ ಬಂಧುಗಳಂತೆ
ಬದುಕಿನುದ್ದಕ್ಕೂ ಕೇಳುವೆ,ಹಾಡುವೆ
ಹಾರೈಸುವೆ
ಅದೇ ಗಾನಬದುಕಿನ ಧನ್ಯತೆ

-ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ

Leave a Reply

Your email address will not be published. Required fields are marked *