ಬದುಕಲು ಬಿಡಿ
ಕಡಿದು ಬಿಸಾಕಿದರೂ ನನ್ನನು
ಕೊರಡಾಗಲಾರೆ ಬರಡಾಗಲಾರೆ
ಮತ್ತೆ ಮತ್ತೆ ಚಿಗುರುತಲಿರುವೆ
ವಂಶವನ್ನು ಬೆಳೆಸುವೆ
ಹಳೆಯ ಬೇರು ಹೊಸ ಚಿಗುರು
ಅವಿನಾಭಾವ ಸಂಬಂಧ
ಜನ್ಮ – ಜನ್ಮಾಂತರಕ್ಕೂ
ಇದುವೇ ಅನುಬಂಧ ||
ಸ್ವಾರ್ಥ ತುಂಬಿದ ಸಮಾಜದಲ್ಲಿ
ನಿಸ್ವಾರ್ಥತೆ ಎಲ್ಲಿ….!?
ನನ್ನದೆಲ್ಲವೂ ನಿನಗೆ ಮೀಸಲು
ನಿನ್ನ ಅತಿಯಾದ ಆಸೆಗೆ
ಬರಿದಾಯ್ತು ನನ್ನೀ ಒಡಲು
ಪ್ರಾಣಿ ಪಕ್ಷಿಗಳಿಗೆ ಆಶ್ರಯವು
ನನ್ನೀ ತಾಣ, ನಾಶ ಮಾಡಿದರೆ
ಸಂತತಿ ಉಳಿಯುವುದೇ ಅಣ್ಣ ?||
ಭಗವಂತನ ಅನುಗ್ರಹವಿರಲು
ಬೇರಿಗಿಲ್ಲಾ ಸಾವು
ಮತ್ತೇ ಚಿಗುರು ಹೂವು !
ನಿನ್ನ ಉಸಿರಿಗೆ ನಾವೇ ಬೇಕು
ನನ್ನನ್ನು ಕಡಿದು
ಕಡೆಗಣಿಸಿದರೆ
ಬಂದೀತು ನಿನಗೆ ಸಾವು ||
-ಶೋಭಾ ಮಲ್ಕಿ ಒಡೆಯರ್,
ಹೂವಿನ ಹಡಗಲಿ