ಬಳ್ಳಾರಿ ಪೊಲೀಸರಿಂದ ಹೆಲ್ಮೆಟ್ ಜಾಗೃತಿ: ಹೆಲ್ಮೆಟ್ ಧರಿಸಿದ ದ್ವಿಚಕ್ರ ಸವಾರನಿಗೆ ಗುಲಾಬಿ ನೀಡಿ ಅಭಿನಂದನೆ

ಬಳ್ಳಾರಿ, ಜೂ. 5:ಹೆಲ್ಮೆಟ್ ಹಾಕಿಕೊಂಡು ದ್ವಿಚಕ್ರ ವಾಹನ ಸವಾರಿ ಮಾಡಿದಲ್ಲಿ ಸಾವು ಸಂಭವಿಸುವ ಸಂದರ್ಭ ಅತಿ ಕಡಿಮೆ ಇರುತ್ತದೆ, ಕಾರಣ ಎಲ್ಲಾ ದ್ವಿಚಕ್ರ ವಾಹನ ಸವಾರರು ತಪ್ಪದೆ ಹೆಲ್ಮೆಟ್ ಧರಿಸಬೇಕೆಂದು ಸಂಚಾರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಅಯ್ಯನ್ ಗೌಡ ಪಾಟೀಲ್ ತಿಳಿಸಿದರು.

ಅವರು ಗುರುವಾರ ನಗರದ ಸಂಗಮ್ ಸರ್ಕಲ್, ರಾಯಲ್ ಸರ್ಕಲ್ ಮತ್ತು ದುರ್ಗಮ್ಮ ಗುಡಿ ಸರ್ಕಲ್ ನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದರು.                                    ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರಿಗೆ ತಲೆಗೆ ಪೆಟ್ಟಾಗಿ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಇದಕ್ಕೆ ಮೂಲ ಕಾರಣವೆಂದರೆ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ಓಡಿಸುವುದು, ಹೆಲ್ಮೆಟ್ ಹಾಕಿಕೊಂಡು ವಾಹನ ಸವಾರಿ ಮಾಡಿದಲ್ಲಿ ಸಾವು ಸಂಭವಿಸುವ ಸಂದರ್ಭ ಅಂತ ಕಡಿಮೆ ಇರುತ್ತದೆ ಎಂದು ಹೇಳಿದರು.

ಮನೆಯಲ್ಲಿ ನಿಮಗಾಗಿ ಪತಿ ಪತ್ನಿ ಮಕ್ಕಳು ಸೇರಿದಂತೆ ಇಡೀ
ನಿಮ್ಮ ಕುಟುಂಬ ಕಾಯುತ್ತಿರುತ್ತದೆ ನೀವು ಸುರಕ್ಷಿತವಾಗಿ ಆಗಿ ಮನೆಗೆ ಸೇರಬೇಕೆಂದಲ್ಲಿ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕೆಂದು ದ್ವಿಚಕ್ರ ವಾಹನ ಸವಾರರಿಗೆ ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಅಯ್ಯನಗೌಡ ಅವರು ಹೆಲ್ಮೆಟ್ ಹಾಕಿಕೊಂಡು ಬಂದ ದ್ವಿಚಕ್ರ ವಾಹನ ಸವಾರನೊಬ್ಬನಿಗೆ ಗುಲಾಬಿ ಹೂವನ್ನು ನೀಡಿ ಅಭಿನಂದಿಸಿದರು.                ಈ ಸಂದರ್ಭದಲ್ಲಿ ಡಿವೈಎಸ್ಪಿ ಚಂದ್ರಕಾಂತ ರೆಡ್ಡಿ ಸೇರಿದಂತೆ ಹಲವು ಜನ ಪೊಲೀಸ್ ಅಧಿಕಾರಿಗಳು ಇದ್ದರು.