ಪರಿಸರ ಸಂರಕ್ಷಣೆಯಲ್ಲಿ ಬುಡಕಟ್ಟು, ಅಲೆಮಾರಿ, ರೈತಾಪಿ ಜನರ ಪಾತ್ರ ಹಿರಿದಾಗಿದೆ -ಡಾ.‌ಅಶ್ವರಾಮು

ಬಳ್ಳಾರಿ, ಜೂ.5:  ಬುಡಕಟ್ಟು, ಅಲೆಮಾರಿಗಳು ಹಾಗೂ ಗ್ರಾಮೀಣ ರೈತಾಪಿ ಜನರು ಪರಿಸರದಲ್ಲಿ ದೈವತ್ವ ಕಂಡು  ಸಂರಕ್ಷಿಸುತ್ತಾರೆ ಎಂದುಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಅಶ್ವ ರಾಮು ಅವರು ಹೇಳಿದರು.                                          ಪರಿಸರ ನಾಶದ ಹಿಂದೆ  ಕೆಲವು ಬಂಡವಾಳಶಾಹಿಗಳು, ಸ್ವಾರ್ಥ ಜನರು ಇದ್ದಾರೆ.  ಪರಿಸರವನ್ನು ಸಂರಕ್ಷಣೆ ಮಾಡುತ್ತಿರುವುದು ನಿಜವಾಗಲೂ ಬುಡಕಟ್ಟು ಜನರು, ಅಲೆಮಾರಿಗಳು, ಗ್ರಾಮೀಣ ರೈತಾಪಿ ಜನರು.  ಪರಿಸರದಲ್ಲಿ ದೈವತ್ವ ಪರಿಕಲ್ಪನೆಯನ್ನು ಹೊಂದಿ ಉಳಿಸಿ, ಬೆಳೆಸುತ್ತಾ ಜೀವಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.      ‌ ನಾಗರೀಕ ಜನರು ಎಚ್ಚೆತ್ತುಕೊಂಡು ಪರಿಸರ ಸಂರಕ್ಷಿಸಿ  ಉಳಿಸಬೇಕು, ಸುಸ್ಥಿರ ಸಮಾಜಕ್ಕೆ ಉತ್ತಮ ಪರಿಸರವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.

ನಗರದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ  ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ನಮ್ಮೆಲರ ಹೊಣೆ ಎಂಬ ವಿಚಾರ ಸಂಕಿರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ  ಪ್ರಗತಿಪರ ರೈತ ಹಲಕುಂದಿಯ  ಶಿವಮೂರ್ತಿ ಅವರು ಉತ್ತಮ‌ ಪರಿಸರಕ್ಕೆ ಕಾಡು ಬೆಳೆಸಿ ನಾಡು ಉಳಿಸಿ ಎಂದು ಹೇಳಿದರು.       ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಿರಿಯ ಪ್ರಾಧ್ಯಾಪಕ  ಜಯದೇವಯ್ಯ ಮಾತನಾಡಿ,  ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಮತ್ತು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಗಜಾಲ ರವರು ಪರಿಸರ ಪರಿಸರ ದಿನಾಚರಣೆಯ ಹಿನ್ನೆಲೆ ಮತ್ತು ಏಕೆ ಆಚರಣೆ ಮಾಡಬೇಕು ಎಂಬುದರ ಕುರಿತು ಮಾತನಾಡಿದರು. ನಂತರ ಶಾಂತಮ್ಮನವರು ಪರಿಸರ ದಿನಾಚರಣೆಯ ಮಹತ್ವ ಕುರಿತು ಪರಿಸರದಲ್ಲಿ ಬರುವ ಗಾಳಿ ನೀರು ಬೆಳಕು ಇವು ನಮ್ಮ ಜೀವನಕ್ಕೆ ಅತ್ಯಮೂಲ್ಯ ನಮ್ಮ ಪರಿಸರವನ್ನು ಕಾಪಾಡದಿದ್ದರೆ ನಾವು ಇವೆಲ್ಲವುಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ನುಡಿದರು. ನಂತರ ಗಿರಿರಾಜ ಕೆ ಅವರು ಪರಿಸರ ಸಂರಕ್ಷಣೆಗೆ ಸಂವಿಧಾನಾತ್ಮಕ ಕಾಯ್ದೆಗಳ ಕುರಿತು ವಿವರಿಸಿದರು. ಚೈತನ್ಯ ಆರ್ ರವರು ಪರಿಸರ ಮಾಲಿನ್ಯದ ಪರಿಣಾಮಗಳು ಕುರಿತು ತಿಳಿಸಿದರು. ಪವಿತ್ರ ಎಮ್ ಬಿ ಅವರು ಪರಿಸರ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಕುರಿತು ಮಂಡಿಸಿದರು.

ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಮಂಗಳಗೌರಿ ಅವರು ನಮ್ಮ ಮುಂದಿನ ಪೀಳಿಗೆಗಾಗಿ ಆಮ್ಲಜನಕವನ್ನು ಉಳಿಸಿ ಸೇವ್ ಆಕ್ಸಿಜನ್ ಫಾರ್ ಅವರ್ ನೆಕ್ಸಟ್ ಜನರೇಷನ್ ಎಂಬ ಕಿರು ನಾಟಕವನ್ನು ಪ್ರಶಿಕ್ಷಣಾರ್ಥಿಗಳಿಂದ ಪ್ರದರ್ಶಿಸಿದರು. ಈ ನಾಟಕದಲ್ಲಿ ಮರಗಳನ್ನು ಕಡಿಯಲು ಕಾರಣಗಳನ್ನು ಹುಡುಕಬೇಡಿ ಮರಗಳನ್ನು ನೆಡಲು ಕಾರಣಗಳನ್ನು ಕೊಡಿ ಎಂದು ಸಂದೇಶ ನೀಡಿದರು.

ನಂತರ ಸಹಾಯಕ ಪ್ರಾಧ್ಯಾಪಕರಾದ ಶ್ರೀಕಾಂತ್ ಮುನಿ ಅವರು ಪ್ರತಿಯೊಬ್ಬರು ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು ಹಾಗೂ ಪರಿಸರವನ್ನು ಉಳಿಸಲಿಕ್ಕೆ ವೈಜ್ಞಾನಿಕ ಕಾರಣಗಳನ್ನು ಕೊಡಬೇಕು ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಶಿವಮೂರ್ತಿ ಅವರಿಗೆ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗವು ಸನ್ಮಾನಿಸಿ ಸಸಿ ಗಿಡವನ್ನು ವಿತರಿಸಿ ಗೌರವಿಸಿದರು. ನಂತರ ವಿಷಯ ಮಂಡಿಸಿದ ಪ್ರಶಿಕ್ಷಣಾರ್ಥಿಗಳಿಗೆ ಸಸಿ ನೀಡಿ ಗೌರವಿಸಿದರು.
ಸಹಾಯಕ ಪ್ರಾಧ್ಯಾಪಕ ಚಂದ್ರಶೇಖರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು., ತ್ರಿವೇದಿ ಪ್ರಾರ್ಥಿಸಿದರು. ಲಕ್ಷ್ಮೀ ಪರಿಸರ ಗೀತೆ ಹಾಡಿದರು. ಎಸ್ ನಾಗವೇಣಿ ಸ್ವಾಗತಿಸಿದರು. ಚೇತನ್ ಕುಮಾರ್ ನಿರೂಪಿಸಿದರು. ರಾಜು ವಂದಿಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗವು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.