ಅನುದಿನ ಕವನ-೧೭೩೦, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ಎಸ್ ಎಲ್ ಭೈರಪ್ಪ

ಎಸ್ ಎಲ್ ಭೈರಪ್ಪ

ಕ್ಯಾರಿಕೇಚರ್ ಕೃಪೆ: ಯು. ರಮೇಶ್

ಸಂತೆ ಶಿವರಹಳ್ಳಿಯ ಹೆಮ್ಮೆಯ ಕುವರ
ನಾಡ ಬೆಳಗಿತು ಇವರ ಬರೆಹದ ಪ್ರವರ
ವಿದೇಶಕೂ ಹಬ್ಬಿತು ಕನ್ನಡಮ್ಮನ ಕೀರ್ತಿ
ಸಹೃದಯರಿಗೆ ಬೈರಪ್ಪರೊಂದು ಸ್ಪೂರ್ತಿ

ಬೆಳೆದರು ಕಷ್ಟದ ಕಡಲಲ್ಲಿ ಮಿಂದೆದ್ದು
ಓದಿದರು ಸಾಧನೆಯ ಬೆಳಕ ಹೊದ್ದು
ತತ್ವಜ್ಞಾನದಿ ಪಡೆದರು ಎಂ.ಎ ಪದವಿ
ಸತ್ಯ ಸೌಂದರ್ಯಕೆ ಡಾಕ್ಟರೇಟ್ ಗೌರವ

ಬೆಳೆಸಿದರು ಕಾದಂಬರಿಯ ವಂಶವೃಕ್ಷ
ವೈವಿದ್ಯ ಪಾತ್ರಗಳ ಪರ್ವದ ಶುಕ್ಲ ಪಕ್ಷ
ಬಿತ್ತಿಯಲಿ ಅನುಭವಗಳ ಬುತ್ತಿ ಬಿಚ್ಚಿ
ಆವರಣದಿ ಭಿನ್ನ ಸಂಸ್ಕತಿ ಸಾರ ಹಚ್ಚಿ

ಮಂದ್ರದಿ ಸ್ವರ ಸಾಮ್ರಾಜ್ಯ ಅನಾವರಣ
ಮತದಾನದಿ ಪ್ರಜಾರಾಜ್ಯದ ರಾಜಕಾರಣ
ಗೃಹಭಂಗ ನಿರಾಕರಿಸಿ, ಸಹಬಾಳ್ವೆ ಸ್ವೀಕರಿಸಿ
ಆತ್ಮರತಿ ದಾಟಿ ಧರ್ಮಶ್ರೀ ಜಲಪಾತ ಸುರಿಸಿ

ಜ್ಞಾನದಲಿ ಸರಸ್ವತಿಯ ಸಮ್ಮಾನಗೊಳಿಸಿ
ಅಕ್ಷರದಿ ಪದ್ಮಪ್ರಶಸ್ತಿಗೆ ಭೂಷಣರೆನಿಸಿ
ನೀವಾದಿರಿ ಸಾಹಿತ್ಯ ಲೋಕದ ನಾಡೋಜ
ಸಾರಸ್ವತ ಲೋಕವೆಂದೂ ಮರೆಯದ ದಿಗ್ಗಜ

ಬಾಳ ಬೇಕಿತ್ತು ನೀವು ಶತ ಸಂವತ್ಸರ
ಹೊರಟೆ ಬಿಟ್ಟಿರಿ ಯಾಕಿಷ್ಟು ಅವಸರ
ಆದಾವೂ ನಿಮ್ಮ ಆಯಷ್ಯದ ಜೋಳ
ಉಳಿದಾವೋ ನೀವು ಕಟ್ಟಿದ ಜೋಗುಳ


-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.

Leave a Reply

Your email address will not be published. Required fields are marked *