
ಬಳ್ಳಾರಿ: ಕಳೆದ 19 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನನಗೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪ್ರಕಟಿಸಿರುವ ಈ ವರ್ಷದ ಪ್ರಜಾ ಪ್ರಗತಿ ಪ್ರಶಸ್ತಿ ಕ್ಷೇತ್ರದಲ್ಲಿನ ಸೇವೆಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಪ್ರಶಸ್ತಿ ಪುರಸ್ಕೃತ ಬಳ್ಳಾರಿಯ ವಿಜಯ ಕರ್ನಾಟಕ ಪತ್ರಿಕಾ ಕಚೇರಿಯಲ್ಲಿ ಮುಖ್ಯ ಉಪ ಸಂಪಾದಕ ರವೀಂದ್ರ ತೆಳಗಡೆ ಅವರು ಹೇಳಿದರು.
ಅವರು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನವರಾದ ತಾವು ಕರ್ನಾಟಕ ವಿವಿಯಲ್ಲಿ ಅಭ್ಯಾಸಮಾಡಿ. 2007 ರಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡೆ. ಇಲ್ಲಿನ ಸ್ಥಾನಿಕ ಸಂಪಾದಕರಾದ ಗಂಗಾಧರ ಬಂಡಿಹಾಳ್ ಹಾಗು ಸಿಬ್ಬಂದಿ ಸಹಕಾರದಿಂದ ಆಡಳಿತ, ಶಿಕ್ಷಣ ಮೊದಲಾದ ವಿಷಯಗಳ ಕುರಿತು 56 ಲೇಖನಗಳನ್ನು ಬರೆದು ಪ್ರಕಟಿಸಿದೆ. ಮಾಧ್ಯಮದ ಮೂಲಕ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡುವ ಆಸೆ ನನ್ನದು. ಈ ಪ್ರಶಸ್ತಿ
ನನಗೆ ಮತ್ತಷ್ಟು ಬರೆಯಲು ಪ್ರೋತ್ಸಾಹ ನೀಡಿದೆ ಎಂದು ಹರ್ಷಿಸಿದರು.
ಮುಖ್ಯ ಅತಿಥಿಯಾಗಿದ್ದ ವಿಜಯಕರ್ನಾಟಕ ಬಳ್ಳಾರಿ ಕಚೇರಿಯ ಸ್ಥಾನಿಕ ಸಂಪಾದಕ ಗಂಗಾಧರ ಬಂಡಿಹಾಳ ಅವರು ಮಾತನಾಡಿ, ಸಾಮಾನ್ಯವಾಗಿ ಇಂತಹ ಪ್ರಶಸ್ತಿಗಳು ಹೆಚ್ಚಿನದಾಗಿ ವರದಿಗಾರರಿಗೆ ದೊರೆಯುತ್ತವೆ. ಆದರೆ ಕಾನಿಪ ಈಗ ಸಂಪಾದಕೀಯದ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದಯ ಖುಷಿ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ, ಕಾನಿಪವು ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ತಿಂಗಳ 11, 12 ರಂದು ಬೀದರ್ ನಲ್ಲಿ ನಡೆಯುವ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಿದೆಂದರು.
ಕನ್ನಡ ಪ್ರಭ ಹಿರಿಯ ವರದಿಗಾರ ಕೆ.ಎಂ.ಮಂಜುನಾಥ ಮಾತನಾಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಕುಲಕರ್ಣಿ ವೇದಿಕೆಯಲ್ಲಿದ್ದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಬಸವರಾಜ್ ಸ್ವಾಗತಿಸಿ, ನಿರ್ವಹಿಸಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಅಮರೇಶ್ ಎಲ್.ಕೆ ವಂದಿಸಿದರು.
