ಅನುದಿನ ಕವನ-೧೯೧೯, ಕವಯತ್ರಿ: ರೂಪ ಗುರುರಾಜ, ಬೆಂಗಳೂರು, ಕವನದ ಶೀರ್ಷಿಕೆ: ಕಳಿಸದೇ ಹೋದ ಸಂದೇಶ

ಕಳಿಸದೇ ಹೋದ ಸಂದೇಶ

ಕೆಲವೊಮ್ಮೆ ಬಹಳ ಯೋಚಿಸಿ
ಬರೆದ ಸಂದೇಶಗಳು ಹಾಗೇ
ಉಳಿದು ಹೋಗಿಬಿಡುತ್ತವೆ .
ಆ ಕ್ಷಣದಲ್ಲಿ ಹೇಳಬೇಕಿದ್ದ
ಅನೇಕ ವಿಷಯಗಳು
ಆ ಕ್ಷಣದ ಆಸೆ, ಪ್ರೀತಿ, ಕೋಪ ,
ಹತಾಶೆ ಹೀಗೆ ಹಲವಾರು ಭಾವಗಳು

ಮತ್ತೆ ಮತ್ತೆ ಅದನ್ನೇ ಓದುತ್ತೇವೆ
ಕಳಿಸಬೇಕೋ, ಬೇಡವೋ
ಬಗೆಹರಿಯದ ದ್ವಂದ್ವ.
ಕಳಿಸಿ ಪ್ರಯೋಜನವಾಗದು
ಎನಿಸಿದಾಗ ಮತ್ತೆ ಅದ
ಅಳಿಸಿಹಾಕುವ ಕಾಯಕ

ಕಾರಣ ವಿವರಿಸುವುದು ಕಷ್ಟವೇ
ಕಳಿಸಬೇಕಿದ್ದದ್ದು ಯಾವುದೋ
ಸಣ್ಣ ವಿಷಯವೆಂದಲ್ಲಾ…
ಅಷ್ಟೆಲ್ಲಾ ಭಾವನೆಗಳ ಬಸಿದು
ಬರೆದು ಹಾಕಿದಾಗ , ಅತ್ತ ಕಡೆ
ಇದನ್ನು ಉಪೇಕ್ಷಿಸಿಬಿಟ್ಟರೆ !

ಅನುಭವಕ್ಕೆ ಮಾತ್ರ ನಿಲುಕುವ
ಸೂಕ್ಷ್ಮ ವಿಷಯಗಳಿವು ಬಿಡಿ‌‌ಸಿ
ಹೇಳಲಾರದಂಥವು. ಕೆಲವೊಮ್ಮೆ
ಮಾತಿನಲ್ಲಿ ಹಂಚಿಕೊಂಡ ನೂರು
ವಿಷಯಗಳಿಗಿಂತ , ಕಳಿಸದೇ
ಅಳಿಸಿಹಾಕಿದ ಕೆಲವು
ಆತ್ಮವನ್ನೇ ತೆರೆದಿಡುವಂಥವು …


-ರೂಪ ಗುರುರಾಜ, ಬೆಂಗಳೂರು

Leave a Reply

Your email address will not be published. Required fields are marked *