
ಬಳ್ಳಾರಿ, ಆ.29: ಹಂದ್ಯಾಳ ಅವಧೂತ ಪ್ರಕಾಶನ ಪ್ರಕಟಿಸಿರುವ ವಿಶ್ರಾಂತ ಡಿಡಿಪಿಐ ಮಲ್ಲಿಕಾರ್ಜುನಸ್ವಾಮಿ ಹಿರೇಮಠ (ಮಹಿಮ) ಅವರ ‘ಪ್ರೀತಿ ಇಲ್ಲದ ಮೇಲೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಾಳೆ (ಆ.30) ಭಾನುವಾರ ನಗರದ ಹವಂಭಾವಿ ಓಶೋ ಜಾಗೃತಿ ಕೇಂದ್ರದಲ್ಲಿ ಜರುಗಲಿದೆ.
ಬೆಳಿಗ್ಗೆ 10 ಗಂಟೆಗೆ ವೀವಿ ಸಂಘದ ಕಾರ್ಯದರ್ಶಿ, ಸಾಹಿತಿ ಡಾ. ಅರವಿಂದ ಪಟೇಲ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಹೆಸರಾಂತ ಗಜಲ್ ಕಾರರಾದ ಶಹಾಪುರದ ಡಾ. ಸಿದ್ಧರಾಮ ಹೊನ್ಕಲ್ ಅವರು ಕೃತಿ ಲೋಕಾರ್ಪಣೆಗೊಳಿಸುವರು. ಗಂಗಾವತಿ ಅರಳಹಳ್ಳಿ ಶ್ರೀ ರಾಜರಾಜೇಶ್ವರಿ ಬೃಹನ್ಮಠದ ವೇ. ಮೂ. ಶ್ರೀ ಗವಿಸಿದ್ಧ ತಾತನವರು ಕಾರ್ಯಕ್ರಮದ ಸಾನಿಧ್ಯ ವಹಿಸುವರು.
ಓಶೋ ಜಾಗೃತಿ ಕೇಂದ್ರದ ಗುರುಸ್ವಾಮಿ ಅವರು ಅಧ್ಯಕ್ಷತೆ ವಹಿಸುವರು.
ಮೋಕಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಬಿ.ಜಿ. ಕಲಾವತಿ ಅವರು ಕೃತಿ ಪರಿಚಯಿಸುವರು.
ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಡಾ. ಜೆ ಎಂ. ತಿಪ್ಪೇಸ್ವಾಮಿ, ಸಿರುಗುಪ್ಪ ಸ.ಪ.ಪೂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಂ. ವೀರೇಶ್, ನ್ಯಾಯವಾದಿ ಆರ್.ಜಿ.ಯರ್ರಿಸ್ವಾಮಿ ಭಾಗವಹಿಸುವರು.
ಓಶೋ ಜಾಗೃತಿ ಕೇಂದ್ರದ ಮುಖ್ಯಸ್ಥ ಪಂಪಾಪತಿ ಹಾಗೂ ಕೃತಿಕಾರರಾದ ವಿಶ್ರಾಂತ ಡಿಡಿಪಿಐ ಮಲ್ಲಿಕಾರ್ಜುನಸ್ವಾಮಿ ಹಿರೇಮಠ (ಮಹಿಮ) ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಅಭಿನಂದನೆ: ವಿವಿಧ ರಂಗಗಳಲ್ಲಿ ಅನುಪಮಸೇವೆ ಸಲ್ಲಿಸಿರುವ ಹತ್ತು ಜನ ಗಣ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.
ಸ್ಥಳೀಯ ಸಂಸ್ಕೃತಿ ಪ್ರಕಾಶನ ಸಹಕಾರ ನೀಡಿದ್ದು, ನಗರದ ಸಾಹಿತ್ಯಾಸಕ್ತರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಅವಧೂತ ಪ್ರಕಾಶನದ ಹೆಚ್.ಎಂ. ಸಿದ್ಧಾರ್ಥ ಕೋರಿದ್ದಾರೆ.
