ಅನುದಿನ‌ ಕವನ-೫೮೭, ಕವಿ: ಮಂಜುನಾಥ ಕಾಡಜ್ಜಿ, ನಲ್ಲಾಪುರ, ಕವನದ ಶೀರ್ಷಿಕೆ: ಮೋಸದ ಕುದುರೆ

ಮೋಸದ ಕುದುರೆ !!

ಯೌವ್ವನವೆಂಬ
ಮೋಸದ ಕುದುರೆ
ದಾರಿತಪ್ಪಿ
ಅತ್ತಿತ್ತ ಓಡುತಿದೆ !!

ದುರಾಸೆಯ ಮೋಹಕೆ
ಸಿಲುಕಿ
ಕಂಡಕಂಡವರ
ಮನಸಿಗೆ ಬಂದಂತೆ
ಘಾಸಿ ಮಾಡುತಿದೆ!!

ದುಡ್ಡಿನ ಸೊಕ್ಕಿಗೆ
ಅಹಂಕಾರದ
ವೇಷ ಧರಿಸಿ
ಬಣ್ಣ ಬಣ್ಣದ ನೆರಳಲಿ
ಕುಣಿಯುತಿದೆ !!

ಪ್ರೇಮದ ಬಲೆ ಬೀಸಿ
ಕಾಮದ ಕಣ್ಣರಳಿಸಿ
ಕಾಯವ ಸೋಸಿ
ಮೋಹದ ನಶೆಯೇರಿಸಿದೆ!!

ಹಿರಿಯರ ಮಾತಿಗೆ
ದ್ವೇಷದ ಕುಲುಮೆಯಲಿ
ಕಾದ ಕಬ್ಬಿಣದಂತೆ
ಮಾತು ಕೆಂಪಾಗಿದೆ
ಮತಿಹೀನವಾಗಿ
ನುಡಿದಿದೆ, ಗುಡುಗಿದೆ !!

ಕಾಲನ ಬಲೆಯೆಂಬ
ಚಕ್ರವ್ಯೂಹದಿ ಸಿಲುಕಿ
ದಾರಿ ಕಾಣದಾಗಿ
ಕಾಮದ ಕಣ್ಗಳ
ನಶೆ ಇಳಿದು
ಹಿರಿಯರ ಆಶ್ರಯ
ಬಯಸುತಿದೆ
ಅಹಂಕಾರವು
ಸೋತು
ಶವವಾಗಿದೆ !!!

✍️ಕಾಡಜ್ಜಿ ಮಂಜುನಾಥ, ನಲ್ಲಾಪುರ, ವಿಜಯನಗರ ಜಿಲ್ಲೆ

 

Leave a Reply

Your email address will not be published. Required fields are marked *