ಜನ ಮನ, ಬರಹ:ಸುಧಾ ಅಡುಕುಳ, ಉಡುಪಿ, ಶೀರ್ಷಿಕೆ: ಹೆಣ್ಣೆಂದರೆ…….

ಹೆಣ್ಣೆಂದರೆ….

ಮೊನ್ನೆಯಷ್ಟೇ ಸಮಾಜಸೇವಾ ಕಾರ್ಯಕರ್ತೆಯೊಬ್ಬರು ಫೋನ್ ಮಾಡಿ ನಿಮ್ಮಲ್ಲಿ ಯಾವುದಾದರೂ ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸ ಮುಂದುವರೆಸಲು ಹಣದ ಅವಶ್ಯಕತೆಯಿದ್ದರೆ ಹೇಳಿ, ಕೊಡುತ್ತೇನೆ ಎಂದರು. ನನಗೆ ಪರಿಚಿತರಿದ್ದ ಇಬ್ಬರು, ಮೂವರಿಗೆ ಫೋನ್ ಮಾಡಿ ಸಹಾಯ ಬೇಕಾ? ಎಂದು ಮೃದುವಾಗಿ ಕೇಳಿದಾಗಲೂ ಆ ವಿದ್ಯಾರ್ಥಿನಿಯರು ಹಾಗೇನಿಲ್ಲ ಮೇಡಂ, ಬೇಡ ಎಂದು ನಿರಾಕರಿಸಿದರು. ಬಹುಮಾನವೋ ಇನ್ನೇನೋ ಎಂದು ಒತ್ತಾಯವಾಗಿ ಹಿಡಿಸಿದರೆ ಮಾತ್ರವೇ ಸಹಾಯವನ್ನು ತೆಗೆದುಕೊಳ್ತಾರೆ. ಇಲ್ಲವೆಂದರೆ ಬ್ಯಾಂಕಿನಲ್ಲಿ ಸಾಲ ಮಾಡಿ ಕಷ್ಟಪಟ್ಟು ದುಡಿದು ತೀರಿಸುತ್ತಾರೆ. ಅನಿರೀಕ್ಷಿತವಾಗಿ ತಿಂಗಳ ಸ್ರಾವವಾಯಿತೆಂದು ನ್ಯಾಪಕಿನ್ ಕೊಡಿಸಿದರೆ, ಬಿದ್ದು ಕೈಕಾಲು ನೋವೆಂದು ಮುಲಾಮು ತೆಗೆಸಿಕೊಟ್ಟರೆ, ತಲೆತಿರುಗಿ ಬಿದ್ದವರನ್ನು ಎತ್ತಿ ಆಸ್ಪತ್ರೆಗೊಯ್ದರೆ…. ನಾವು ಖರ್ಚು ಮಾಡಿದ ಹಣವನ್ನು ಮರುದಿನವೇ ತಂದುಕೊಡುವಷ್ಟು ಘನತೆಯುಳ್ಳವರು ನಮ್ಮ ಹೆಣ್ಣುಮಕ್ಕಳು. ಇರಲಿ ಮಾರಾಯ್ತಿ, ನೀನು ಜಾಬಿಗೆ ಸೇರಿದ ಮೇಲೆ ಕೊಡು ಎಂದೆಲ್ಲಾ ಕನ್ವಿನ್ಸ್ ಮಾಡಿ ಕಳಿಸಬೇಕಾಗುತ್ತದೆ. ನಮ್ಮ ಮನೆಯಲ್ಲಿ ಕೆಲಸ ಮಾಡುವ ಕೆಲಸದಾಕೆಯೂ ಮುಂಗಡ ಕೇಳಿಯಾಳೇ ಹೊರತು ಹೆಚ್ಚುವರಿ ಹಣ ಕೇಳಲಾರಳು. ಹೆಣ್ಮಕ್ಕಳಿಗೆ ಸವಲತ್ತು ಕೊಟ್ರೆ ಪೂರ್ತಿ ಲಗಾಡಿ ತೆಗೀತಾರೆ ಅನ್ನೋ ಥರಾ ಮಾತಾಡೋದು ತಪ್ಪು. ಕುಡಿಯೋ ಗಂಡ, ಬೆಳಿಯೋ ಮಕ್ಕಳು, ವಯಸ್ಸಾದ ಪೋಷಕರು ಎಲ್ಲರನ್ನು ಸಲಹಲು ದಿನಾ ದುಡಿಯೋರಿಗೆ ಸುಮ್ಸುಮ್ನೆ ತಿರುಗೋಕೆ ಸಮಯವಾದರೂ ಎಲ್ಲಿದೆ? ತೀರ ಕಡಿಮೆ ಹಣಕ್ಕೆ ದುಡಿಯೋರಲ್ಲಿ ಸಿಂಹಪಾಲು ಹೆಂಗಸರದ್ದೆ. ಅಷ್ಟಕ್ಲೂ ಕೆಂಪುಬಸ್ಸಿನಲ್ಲಿ ಮೋಜು ಮಾಡುವವರೆಲ್ಲ ಎಲ್ಲಿ ಓಡಾಡ್ತಾರೆ? ಹೆಣ್ಮಕ್ಕಳು ಕಾಲೇಜಿಗೆ ಕಾಲಿಟ್ಟಾಗಲೂ, ಪುರುಷರಿಗೇ ಮೀಸಲೆಂದು ಬಗೆದ ಕ್ಷೇತ್ರದಲ್ಲಿ ಮಿಂಚಿದಾಗಲೂ ಹೀಗೆಲ್ಲ ಟೀಕೆಗಳು ಬಂದಿವೆ. ಸ್ವಲ್ಪ ದಿನ ಕಾದು ನೋಡಿ, ಮತ್ತೆ ಮಾತಾಡುವುದು


-ಸುಧಾ ಅಡುಕುಳ, ಉಡುಪಿ

Leave a Reply

Your email address will not be published. Required fields are marked *