ಅನುದಿನ ಕವನ-೯೭೫, ಕವಿ: ಚಾಮರಾಜ ಸವಡಿ, ಕೊಪ್ಪಳ, ಕವನದ ಶೀರ್ಷಿಕೆ: ಮರೆಯಬೇಕಿದೆ ಎಲ್ಲಾ…

ಮರೆಯಬೇಕಿದೆ ಎಲ್ಲಾ…

ಎಲ್ಲಾ ಮರೆಯಬೇಕಿದೆ
ಹಾಗಂತ ಪದೆ ಪದೆ ನೆನಪಿಸಿಕೊಳ್ಳುತ್ತೇನೆ

ಅಲಾರಾಂ ಅದುಮಿದ್ದೇನೆ
ಕರೆಗಂಟೆ ಕಿತ್ತಿದ್ದೇನೆ
ಗೇಟಿಗೆ ಹಾಕಿದ್ದ ಪತ್ರದ ಡಬ್ಬವನ್ನೂ ಬಿಚ್ಚಿಟ್ಟಾಗಿದೆ
ಯಾರೂ ಬರಬೇಡಿ
ನಾನು ಒಳಗಿಲ್ಲ

ಮುಚ್ಚಿದ ಬಾಗಿಲೊಳಗಿನ ಮನೆಯಲ್ಲಿ
ಬೆಳಕಿಲ್ಲ; ದೀಪ ಹಾಕುವಂತಿಲ್ಲ
ಫ್ಯಾನು, ಫೋನು, ಕುಕ್ಕರ್
ಊಹೂಂ
ನಲ್ಲಿ ತಿರುಗಿಸುವಂತಿಲ್ಲ,
ಹಾಡು ಗುನುಗುವಂತಿಲ್ಲ
ಒಳಗಿದ್ದೇನೆಂಬುದು ಹೊರಹೋಗುವಂತಿಲ್ಲ

ಸದ್ದೇ ಮಾಡದೇ ಕೂತರೂ
ಸೊಳ್ಳೆಗಳು ಮಾತಾಡಿಸುತ್ತವೆ
ಬಾಗಿಲು ಮುಚ್ಚಿದ್ದರೂ
ನೆನಪ ಕಿಟಕಿಗಳು ತೆರೆದುಕೊಳ್ಳುತ್ತವೆ
ಬೇಡವೆಂದ ಬೆಳಕು, ಶಬ್ದ
ಒಳ ಬಂದು ‘ಏನೀಗ?’ ಎಂಬಂತೆ
ಕೆಣಕುತ್ತವೆ, ಕೆರಳಿಸುತ್ತವೆ

ದುರುಗುಟ್ಟಿ ನೋಡಿದರೂ ಬೆದರುವುದಿಲ್ಲ
ಹೋಗಾಚೆ ಎಂದು ಒರಲಿದರೂ ಕೇಳುವುದಿಲ್ಲ
ಮರೆತ ಹಾಡುಗಳನ್ನು ನೆನಪಿಸಿ,
ಒರೆಸಿಹಾಕಿದ ಚಿತ್ರಗಳನ್ನು
ಎಲ್ಲೆಡೆ ಹರವುತ್ತವೆ; ಮನಸ ಕದಡುತ್ತವೆ

ಎಲ್ಲ ಮರೆಯಬೇಕೆಂದರೂ
ಎಲ್ಲಾ ನೆನಪಾಗುತ್ತದೆ
ಆ ಮಾತು, ಧ್ವನಿ, ಸಂದೇಶ, ಕನಸು
ಕವನ, ಕದನ, ಕಾಮನೆ, ಭಾವನೆ
ಒಂದೇ ಎರಡೇ
ಲೆಕ್ಕದ ಬೆಂಬತ್ತಿ, ಸೋತು ಸೋತು
ಮತ್ತೆ ಸುಮ್ಮನೇ ಕೂಡುತ್ತೇನೆ

ಬಾಗಿಲ ಮೇಲೆ ಬೆರಳಾಡಿಸಿದ ಸದ್ದು…

ಅದನ್ನೇ ಕಾಯುತ್ತಿದ್ದವನಂತೆ ಎದ್ದು
ಬಾಗಿಲು ತೆರೆದರೆ;

ಅವಳಿಲ್ಲ!

ನಿರಾಶೆ ಹುಟ್ಟುವುದೇ ಹೀಗೆ

ಥೇಟ್
ಕವಿತೆಯಂತೆ


– ಚಾಮರಾಜ ಸವಡಿ, ಕೊಪ್ಪಳ
—–

 

Leave a Reply

Your email address will not be published. Required fields are marked *