ಅನುದಿನ‌ ಕವನ-೧೩೦೭, ಕವಿ: ಸುಧನ್ ಹೊಸೂರು (ಮಧುಸೂದನ್ ಹೊಸೂರು), ಮೈಸೂರು

ನಾಲ್ಕು ಕಾಲಿನೆಸರಿನ
ಉದ್ದನೆಯ ಜಡೆಗೆ
ಹಿತ್ತಲ ಗಿಡದಿಂದ
ಅರಳುವ ಮುನ್ನವೇ ಕಿತ್ತ
ಮಲ್ಲಿಗೆಯ ಮೊಗ್ಗುಗಳ
ಮದ್ಯದಲೊಂದು
ಕೆಂಗುಲಾಬಿ ಹೂ ಇರಿಸಿ
ಹಣೆಗೆ ಒಂದರಮೇಲೊಂದು
ಬಣ್ಣದ ಬೊಟ್ಟಿಟ್ಟು
ಇಸ್ತ್ರಿಮಾಡುವಾಗ ಸುಟ್ಟ ಕಾರಣಕೆ
ಅಮ್ಮನ ಹಳೆ ರೇಷ್ಮ ಸೀರೆಯ
ಕತ್ತರಿಸಿ ಹೋಲಿಸಿದ
ಉದ್ದನೆಯ ಹೊಸಲಂಗದ
ಪಲಗುಡುವ ನೆರಿಗೆಗೆ
ಎಲ್ಲಿ ನೋವಾಗುವುದೋ ಎಂದು
ಜೋಪಾನವಾಗಿ ಹೆಜ್ಜೆ ಇಡುತಾ
ಮಾತಿಗಿಂತಲೂ ಹೆಚ್ಹೆಚ್ಚು ನಗುತ್ತಾ
ಗೆಳತಿಯರೊಟ್ಟಿಗೆ ಬರುವ
ನಿನ್ನ ದಾರಿಯನ್ನೇ ಕಾಯುತಿರುವೆ
ಸಮವಸ್ತ್ರವಿರದ ಬುಧವಾರದಂದು
ಶಾಲೆಗೆ ನಾ ಬೇಗ ಬಂದು
ನಾ ತೊಟ್ಟು ಬಟ್ಟೆಯು
ನಿನ್ನ ಲಂಗದ ಬಣ್ಣಕ್ಕೆ
ಮ್ಯಾಚಾಗುವ ಭರವಸೆಯಿಂದ
ಗೆಳೆಯರೊಡನೆ ಬಾಜಿ ಕಟ್ಟಿ…
ಮತೊಮ್ಮೆ ಬಾ ಗೆಳತಿ
ಕನಸಿನಲ್ಲಾದರೂ ಬಿಡುವು ಮಾಡಿಕೊಂಡು
ಭರವಸೆ ನಿಜ ಮಾಡಿ ನನ್ನ ಗೆಲ್ಲಿಸಲು….


-ಸುಧನ್ ಹೊಸೂರು (ಮಧುಸೂದನ್ ಹೊಸೂರು), ಮೈಸೂರು

Leave a Reply

Your email address will not be published. Required fields are marked *