ಅನುದಿನ ಕವನ-೧೩೫೩, ಕವಿ: ವೀರಣ್ಣ ಮಡಿವಾಳರ, ನಿಡಗುಂದಿ, ಬೆಳಗಾವಿ ಜಿ. ಕವನದ ಶೀರ್ಷಿಕೆ: ಕಡಿದ ಮರದ ನೆರಳು

ಕಡಿದ ಮರದ ನೆರಳು

ನೂರು ಸಾವಿರ ಹೃದಯಗಳ ಹಂಬಲ ನಿತ್ಯ ನಿರಂತರ
ಒಂದು ಖಾಸಗಿಯಾದ ತುಟಿಯೊತ್ತಿಗೆ ಮುತ್ತಿಗೆ
ನೀವು ಬಯಸುವ ಅದ್ಧೂರಿಯಾದ ಎಲ್ಲವನ್ನೂ ಖರೀದಿಸಬಹುದು ನೀವು
ಆದರೆ ಬಯಸಿದವರಿಂದ ಬಯಸಿದಂಥ
ಒಂದು ಮುತ್ತು ಪಡೆಯಲಾರಿರಿ ನೀವು
ಅದು ಬಲುದುಬಾರಿ

ಏನೆಲ್ಲ ಸಲ್ಲಾಪಗಳು ಮುಗಿದ ನಂತರವೂ
ಸಾವಿರ ವಸಂತಗಳ ದಾಟಿದ ನಂತರವೂ
ಮತ್ತೆ ಬಯಸುತ್ತೇವೆ ಒಂದೇ ಒಂದು ಮುತ್ತು
ಕಡಿದ ಮರದ ನೆರಳಲ್ಲಿ ನಿಂತು
ಹೂಘಮದ ಉಸಿರು ಬಯಸುತ್ತೇವೆ
ಎಲ್ಲ ಸುರಿದು ಖಾಲಿಯಾದ ಹೃದಯ
ಈಗ ಖಾಲಿ ಜೇಬು
ಅವಳಿಂದ
ಸಾಲವಾಗಿಯಾದರೂ ಒಂದು ಮುತ್ತೂ ಕೂಡ ಸಿಗದು

ಏನಾಗಬಹುದು ಒಂದು ಮುತ್ತಿನಿಂದ
ಸಕಲ ಲೋಕಗಳ ಆ ಮತ್ತಿನಲ್ಲಿ ಒಂದು ಸುತ್ತು ಸುತ್ತಿ ಬರಬಹುದು
ನೋವಿನ ದಂಡಕಾರಣ್ಯವ ಬರಿಗಾಲಲ್ಲಿ ದಾಟಬಹುದು
ಉಕ್ಕೇರುವ ಸಮುದ್ರವ ಮುತ್ತಿಟ್ಟು ಸಂತೈಸಬಹುದು
ಸತ್ತ ಕನಸುಗಳಿಗೆ ಜೀವದುಸಿರು ಮರಳಬಹುದು
ಬದುಕಿದ್ದೇನೆ ಎಂದು ರುಜುವಾತುಪಡಿಸಲು
ಜೀವಂತ ಸಾಕ್ಷಿಗಳು ಸಿಕ್ಕಬಹುದು

ಆ ಮಾಯಕಾರ ಮುತ್ತು ಸಿಕ್ಕವರು
ಒಳಗೊಳಗೆ ಧೀಮಂತರಾಗಿರುತ್ತಾರೆ
ಅವರೆದೆಯಲ್ಲಿ ಯಕ್ಷಿಣಿಯರು ಕುಣಿಯುತ್ತಾರೆ
ತೋಳಿನಲ್ಲಿ ಕಾಣದ ರೆಕ್ಕೆಗಳ ತೊಟ್ಟಿರುತ್ತಾರೆ

-ವೀರಣ್ಣ ಮಡಿವಾಳರ, ನಿಡಗುಂದಿ, ಬೆಳಗಾವಿ ಜಿ.

Leave a Reply

Your email address will not be published. Required fields are marked *