ಅನುದಿನ ಕವನ-೧೪೩೪, ಯುವ ಕವಿ: ತರುಣ್ ಎಂ✍️ಆಂತರ್ಯ,  ಟಿ. ನಾಗೇನಹಳ್ಳಿ, ಕವನದ ಶೀರ್ಷಿಕೆ: ಹೂವಾಡಗಿತ್ತಿ

ಊರಿನೊಳಗೊಬ್ಬಳು ಹೂವಾಡಗಿತ್ತಿ
ಗಂಡಸರ ಹೃದಯ ಕೆಡಿಸಿದಳು
ಕೇರಿ ಕೇರಿಯ ಸುತ್ತಿ

ಮಾರುವುದು ಮಲ್ಲಿಗೆಯ
ಆದರೆ ಬಗೆಬಗೆಯ ಹೂವೆಸರ ಕರೆದು
ಮಾಡುವಳು ಒಳಗಿನ ಮಂದಿಗೆ ಕರೆಯ

ಕಣ್ಣು ಕಾಕಡ
ಮೂಗು ಸೂಜಿ ಮಲ್ಲೆ
ಕೆನ್ನೆ ಕನಕಾಂಬರ
ತುಟಿಗಳು ಗುಲಾಬಿ
ಎದೆಯು ದುಂಡು ಮಲ್ಲಿಗೆ
ನಡುವು ನೈದಿಲೆಯು

ಮುಟ್ಟಲು ಮಾತ್ರ
ಮುಳ್ಳಿರುವ ಕೇದಿಗೆ
ಯಾರಿಗೆ ಬೇಕು ಈ
ಮಾಗಿದ ಮಲ್ಲಿಗೆ

ನಷ್ಟವೆ ನಿಮಗೆ ಕಳೆದು ಕೊಂಡರೆ
ಈ ಸೊಬಗಿನ ಸಂಜೆಯನು
ಹೂ ಕೊಂಡವರ ಮನೆಯ
ಮರೆಯೆನು ನಾನೆಂದು

ಊರಿನೊಳಗೊಬ್ಬಳು ಹೂವಾಡಗಿತ್ತಿ
ಊರ ಮಂದಿಯ ಹೃದಯ ಕೆಡಿಸಿದಳು
ಕೇರಿ ಕೇರಿಯ ಸುತ್ತಿ…


-ತರುಣ್ ಎಂ✍️ಆಂತರ್ಯ,  ಟಿ. ನಾಗೇನಹಳ್ಳಿ, ಹಿರಿಯೂರು (ತಾ), ಚಿತ್ರದುರ್ಗ (ಜಿ)

 

Leave a Reply

Your email address will not be published. Required fields are marked *