ಅನುದಿನ‌ ಕವನ-೧೫೬೭, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ: ಬದುಕಿರುವ ಪ್ರತಿಯೊಂದು ಗಳಿಗೆಯೂ….

ಬದುಕಿರುವ ಪ್ರತಿಯೊಂದು ಗಳಿಗೆಯೂ….

ಬದುಕಿರುವ ಪ್ರತಿಯೊಂದು ಗಳಿಗೆಯೂ ಅಮೂಲ್ಯ
ನಿಮ್ಮ ದ್ವೇಷ, ಅಸೂಯೆ, ನೋವ ಆರಾಧನೆ
ತಂದು ನನ್ನ ಮಡಿಲಿಗೆ ಸುರಿಯದಿರಿ

ಬದುಕಿರುವ ಪ್ರತಿಯೊಂದು ಗಳಿಗೆಯೂ ಅಮೂಲ್ಯ
ನಿಮ್ಮ ಸಣ್ಣತನ, ಅಸಹನೆ, ಬಲಿಪಶುವಿನ ಭಾವಗಳ
ತಂದು ನನ್ನ ಮಡಿಲಿಗೆ ಸುರಿಯದಿರಿ

ಬದುಕಿರುವ ಪ್ರತಿಯೊಂದು ಗಳಿಗೆಯೂ ಅಮೂಲ್ಯ
ನಿಮ್ಮ ಕುಹಕ, ಅಪಹಾಸ್ಯ, ಕೊಂಕು, ಸಂಚುಗಳ
ತಂದು ನನ್ನ ಮಡಿಲಿಗೆ ಸುರಿಯದಿರಿ

ಬದುಕಿರುವ ಪ್ರತಿಯೊಂದು ಗಳಿಗೆಯೂ ಅಮೂಲ್ಯ
ಉಡಿಯಲ್ಲಿ ಬೆಳುದಿಂಗಳ ತುಂಬಿ, ತುಳುಕಿಸಿ
ಕತ್ತಲಲ್ಲಿ ಹಾದಿ ಕಂಡುಕೊಳ್ಳಬೇಕಿದೆ

ಪ್ರೀತಿ ತುಂಬಿದ ಕಣ್ಣುಗಳನ್ನಷ್ಟೇ ಅರಸಬೇಕಿದೆ
ಕಿಡಿಕಿಡಿಯಾಗಿ ನೋಡಿ ಸುಡಲು ಹೋಗಬೇಡಿ
ಇರುವಷ್ಟು ಗಳಿಗೆಗಳು ಬೆಲೆ ಕಟ್ಟಲಾಗದ್ದು

ಕೆಡುಕುಗಳೊಂದಿಗೆ ಇಲ್ಲಿಗೆಂದೂ ಬರಬೇಡಿ.

-ಎಂ ಆರ್ ಕಮಲ, ಬೆಂಗಳೂರು

Leave a Reply

Your email address will not be published. Required fields are marked *