ಅನುದಿನ ಕವನ-೧೬೬೩, ಕವಿ: ರವಿಕುಮಾರ್ ಟೆಲೆಕ್ಸ್, ಶಿವಮೊಗ್ಗ ಕವನದ ಶೀರ್ಷಿಕೆ: ದೇವದಾಸಿಯ ಸ್ವಗತ

ದೇವದಾಸಿಯ ಸ್ವಗತ

ನನ್ನ ನರಗಳ ಹೊಸೆದು ಬತ್ತಿ ಮಾಡಿ
ಒಡಲ ನೆಣ ಬಸಿದು ದೀಪ ಹಚ್ಚಿದ್ದೇನೆ
ಕುರುಡು ದೇವರ ಅಂತಃಪುರಕೆ

ದೇವಾನುದೇವತೆಗಳು
ನನ್ನ ತೊಗಲ ತಿಂದು
ಕಣ್ಣೀರು ಕುಡಿದು ಸ್ವರ್ಗ ಸೇರುತ್ತಾರೆ
ನರಕ ನನಗಷ್ಟೇ ;
ಇಲ್ಲಿ ಹೂ ಗಳೂ ನರಳುತ್ತವೆ

ಲೋಕಾನುಲೋಕ ತುಳಿದ ಚರಿತ್ರೆಯಲ್ಲಿ
ನಾನು ಕತೆಯಷ್ಟೇ…
ದೇವರು ತಿಂದ ಮೇಲೆ ಗಣಗಳಿಗೆ
ಇಟ್ಟ ಹೆಣದ ಎಡೆ

ಪ್ರೀತಿ ನಿಷೇಧಿಸಿದ ಊರಿನಲ್ಲಿ
ದಿನವೂ ಕನಸುಗಳ ಹಡೆಯುತ್ತೇನೆ
ಜೀವವಿದ್ದರೂ
ನಾನೀಗ ಗೋಡೆ ಮೇಲಿನ ಚಿತ್ರವಷ್ಟೆ.


-ಎನ್ ರವಿಕುಮಾರ ಟೆಲೆಕ್ಸ್, ಶಿವಮೊಗ್ಗ

—–