ಅನುದಿನ ಕವನ-೧೭೭೩, ಕವಿ: ಜಬೀವುಲ್ಲಾ ಎಂ. ಅಸದ್, ಹಿರಿಯೂರು, ಕವನದ ಶೀರ್ಷಿಕೆ:ನಗುವ ಶೂನ್ಯ

ನಗುವ ಶೂನ್ಯ

ನನ್ನಲ್ಲಿ ನೀನು ತುಂಬಿರಲು
ನಿನ್ನಲ್ಲಿಲ್ಲ ನಾನು
ಇಲ್ಲವೆಂಬ ಅರಿವು ನನ್ನಲ್ಲಿರಲು
ಇನ್ನೂ ಹೇಳಲಿ ಏನು?

ಒಡೆದ ಗಾಜಿನ ಲೋಟ
ಚೂರಾದ ಹೃದಯದ ನೋಟ
ಎರಡೂ ಒಂದೇ ಆಗಿರುವಾಗ ಈಗ

ಮುರಿದ ರೆಕ್ಕೆಯ ಹಕ್ಕಿಯ ಶೋಕ
ಮನ ಅನುಭವಿಸುತ್ತಿರುವಾಗ
ಮಾತು ಹುಟ್ಟಿತು ಹೇಗೆ ಈ ಸಮಯ
ಮೌನವೇ ಎಲ್ಲವನ್ನು ಸಂಹರಿಸುವಾಗ

ದಿಕ್ಕಿಲ್ಲದ ದಾರಿಯ ಒಂಟಿ ಪಯಣಿಗ
ನಡೆದಷ್ಟು ದೂರ
ತಲುಪುವುದಾದರೂ ಎಲ್ಲಿಗೆ?
ಕೊನೆ ಮುಟ್ಟುವುದಾದರೂ ಹೇಗೆ?
ಕಾಣದ ಗಮ್ಯ, ಅನಾಥ ಭಾವ
ಹುಟ್ಟು ಅರಸುತ್ತಿದೆ ಸಾವಿನ ಮನೆಯಂಗಳವ
ಸೋತ ಅಂಗೈಗಳಿಗಂಟಿ ನಗುತಿದೆ ಶೂನ್ಯ
ನಗುವ ಶೂನ್ಯ

ಅದೇ ಎಲ್ಲಾ… ಎಲ್ಲಾ…

◼ಜಬೀವುಲ್ಲಾ ಎಂ. ಅಸದ್., ಹಿರಿಯೂರು