ಅನುದಿನ ಕವನ-೧೮೨೮, ಹಿರಿಯ ಕವಿ: ಟಿ.ಕೆ.ಗಂಗಾಧರ ಪತ್ತಾರ, ಬಳ್ಳಾರಿ, ಕವನದ ಶೀರ್ಷಿಕೆ:ಭವಿಷ್ಯ ಸುಳ್ಳು ಮಾಡಿ ಹುಟ್ಟಿದ ಸರದಾರ ಗಂಗಾಧರ ಪತ್ತಾರ

ಭವಿಷ್ಯ ಸುಳ್ಳು ಮಾಡಿ ಹುಟ್ಟಿದ ಸರದಾರ ಗಂಗಾಧರ ಪತ್ತಾರ

ನನ್ನವ್ವನೊಡಲೊಳಗ ಭ್ರೂಣವಾಗಿದ್ದಾಗ                “ಬಹಳ ಗಂಡಾಂತರವು ಈ ಹೆರಿಗಿ ಸಮಯ!”                “ಶಿಶು ಸತ್ತು ಹುಟ್ಟುವುದು!!”                         “ಬಾಣಂತಿ ಸಾಯುವಳು!!!”                            ಮನೆಯೆ ಬೆಚ್ಚಿತು ಕೇಳಿ ಜೋಯಿಸನ                ನುಡಿಯ-೧

ಒಡನೆ ದಾಖಲಿಸಿದರು ತುಂಬು ಗರ್ಭಿಣಿಯನ್ನು ಗದಗ ನಗರದ ಹೆರಿಗೆ ಆಸ್ಪತ್ರೆಯಲ್ಲಿ                              “ಯಾರು ಭಯಪಡಿಸಿದರೊ!”                                “ಇಲ್ಲ ಯಾವ ಅಪಾಯ!!”                                  ಎನುತ ನಕ್ಕರು ಡಾಕ್ಟ್ರು ತುಟಿಯಂಚಿನಲ್ಲಿ-೨

ಸಾವಿರದಒಂಬತ್ತು ನೂರಐವತ್ತೊಂದು ಸೆಪ್ಟೆಂಬರದ ನಾಲ್ಕು ಮುಂಜಾವಿನಲ್ಲಿ ಮಲವಿಸರ್ಜನೆ ಬಳಿಕ ಕದ ತೆರೆಯುವಷ್ಟರಲಿ ಅವ್ವ ಹೆತ್ತಳು ನನ್ನ ಕಕ್ಕಸ್ಸಿನಲ್ಲಿ-೩.
ನವಜಾತ ಶಿಶು ದನಿಗೆ ಧಾವಿಸಿದ ಸಿಬ್ಬಂದಿ ಜನತೆ ನಿಬ್ಬೆರಗಾಯ್ತು ನೋಡೀ ವಿಚಿತ್ರ ಓ.ಟಿ.-ಪರಿಕರ-ವೈದ್ಯ-ದಾದಿ-ಸಹಚರ ರಹಿತ ಪ್ರಸವ ವೇದನೆಯಿರದೆ ಇಳೆಗಿಳಿದ ಪುತ್ರ-೪

ನಾಸ್ತಿಕತೆಯೆಡೆ ಒಲಿದೆ ಗೊಡ್ಡು ಕಟ್ಟಳೆ ಮುರಿದೆ ಜಾತಿ ಮತ ಹಳೆ ಸಂಪ್ರದಾಯಗಳ ತೊರೆದೆ ವೈಚಾರಿಕತೆ ಪಥದಿ ಮೌಢ್ಯತೆಯ ಧಿಕ್ಕರಿಸಿ ವೃತ್ತಿ ಜೊತೆ ಸಾಹಿತ್ಯ ಪ್ರವೃತ್ತಿ ಮೆರೆದೆ-೫

ಉಡದಾರ ಕರಿದಾರ ಜನಿವಾರ ಶಿವದಾರ ಯಾವ ದಾರವು ಇರದ ಸರದಾರನಾದೆ ನೂರು ದೇವರು ಮಿಥ್ಯ “ಬುದ್ಧ” “ಬಸವ”ರೆ ಸತ್ಯ “ಪರಮಹಂಸ” “ವಿವೇಕ” ದಿಟ ದೇವರೆಂದೆ-೬

ಅಮವಾಸ್ಯೆ ಹಲ್ಲಿ ನುಡಿ ಅಡ್ಡ ಹಾಯುವ ಬೆಕ್ಕು ಗ್ರಹಣಗಳ ಲೆಕ್ಕಿಸದೆ ಸಾಧಿಸಿದೆ ಗೆಲುವು ಹಣೆ ಬರಹ ಗ್ರಹಚಾರ ಶಕುನ ನಂಬದೆ ನಡೆಯೆ ಕೈಹಿಡಿದ ಕೆಲಸ ಕೈಗೂಡುವುದು ದಿಟವು-೭

ಬಳ್ಳಾರಿ ಮೆಡಿಕಲ್ಲು ಕಾಲೇಜು ನೌಕರಿಗೆ ರಾಹು ಕಾಲದಿ ವರದಿ ಮಾಡಿಕೊಂಡೆ ವರುಷ ಮೂವತ್ತೆರಡು ನಿಸ್ಪೃಹದಿ ಕರ್ತವ್ಯ ನಿರ್ವಹಿಸಿ ಬಾಳಿನಲಿ ಸವಿಬೆಳಕು ಕಂಡೆ-೮.
ನಾನು ಜನಿಸಿದ ಬಳಿಕ ನಾಲ್ಕು ಮಕ್ಕಳ ಹೆತ್ತು ಬದುಕಿದ್ದಳೆನ್ನವ್ವ ತೊಂಬತ್ತು ವರ್ಷ ಸತ್ತು ಹುಟ್ಟಿದ ನನಗೆ ಈಗ ಎಪ್ಪತ್ತೈದು ಬದುಕಿನಲಿ ತುಂಬಿಹುದು ಸುಖ ಶಾಂತಿ ಹರ್ಷ-೯

-ಟಿ.ಕೆ.ಗಂಗಾಧರ ಪತ್ತಾರ,, ಬಳ್ಳಾರಿ