ಅನುದಿನ ಕವನ-೧೮೪೨, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಅಕಾವ್ಯ!

ಅಕಾವ್ಯ!

ಪಾಯಖಾನೆಯಲ್ಲಿ ಇರುವಾಗ
ಅಷ್ಟೇ ಅಲ್ಲ ಅದರ ಬಾಗಿಲುಗಳಿಗೆ
ಚಿಲಕ ಹಾಕಲಾಗದಿರುವಾಗ
ಅಥವಾ ಹಾಕಿದರೂ ನೆಟ್ಟಗೆ ಕೂರದಿರುವಾಗ….
ಹಾಡಲು ಬರದಿದ್ದರೂ ಸಡನ್ನಾಗಿ
ನಾನು ಗಾಯಕಿಯಾಗಿ ಬಿಡುತ್ತೇನೆ!

ಹೌದು ಹಾಡುವುದಕ್ಕೆ
ಅದು ಜಾಗವಲ್ಲ…. ಆದರೂ ಹಾಡುವೆ

ಒಮ್ಮೆ ಹೀಗಾಯಿತು
ನಳ ಜೋರಾಗಿ
ಬಿಡೋಣವೆಂದರೆ ಅದು
ಕಣ್ಣೀರಿಡುತ್ತಿದೆ!
ಗೋಡೆಯೂ ಒದ್ದೆ ಒದ್ದೆ
ಯಾವ ಹಾಡು ಹಾಡಿದೆ?

ಈತನಕ ಒಳಗಣ್ಣುಗಳ ಬಗ್ಗೆ ನಾನು
ತಲೆಕೆಡಿಸಿಕೊಂಡಿರಲೇ ಇಲ್ಲ!
ಜ್ಞಾನೋದಯ ಆದ ಗಳಿಗೆ
ಬಿಟ್ಟು ಹೋಯಿತು…..
ನಾಚಿಕೆ-ಅಂಜಿಕೆ

-ಸವಿತಾ ನಾಗಭೂಷಣ, ಶಿವಮೊಗ್ಗ
—–